ಭಟ್ಕಳ, ಫೆಬ್ರವರಿ ೧೭: ಮುರ್ಡೇಶ್ವರದ ಲಾಡ್ಜವೊಂದರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಕುರಿತ ಖಚಿತ ಮಾಹಿತಿಯನ್ನಾಧರಿಸಿ ಮಂಗಳವಾರ ರಾತ್ರಿ ದಾಳಿ ನಡೆಸಿದ ಸಿ ಪಿ ಐ ಗುರು ಮತ್ತೂರು ನೇತೃತ್ವದ ಪೊಲೀಸರ ತಂಡವು ಮಹಿಳೆ ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಭಟ್ಕಳದ ಪುರವರ್ಗದ ಮಂಜುನಾಥ ಕೃಷ್ಣಯ್ಯ ನಾಯ್ಕ, ಅಜಾದ್ ನಗರದ ಸಬಿನಾ ಕೋಂ ನಜೀರ್ ಶೇಖ ಹಾಗೂ ಲಾಡ್ಜ ಮೆನೆಜರ್ ಮುರ್ಡೇಶ್ವರದ ದೀವಗಿರಿಯ ಅಶೋಕ ತಂದೆ ಮಂಜುನಾಥ ಪೂಜಾರಿ ಎಂಬುವವರೇ ಬಂಧಿತ ವ್ಯಕ್ತಿಗಳಾಗಿದ್ದಾರೆ. ನಿನ್ನೆ ರಾತ್ರಿ ೧೨.೩೦ರ ಸುಮಾರಿಗೆ ಮುರ್ಡೇಶ್ವರದ ಈಶ ಲಾಡ್ಜನ ರೂಂ ನಂಬರ್ ೧೦೫ರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದ ಸಿ ಪಿ ಐ ಗುರು ಮತ್ತೂರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆನ್ನಲಾದ ಮಂಜುನಾಥ ಹಾಗೂ ಸಬೀನಾ ಹಾಗೂ ಇವರಿಗೆ ರೂಮ್ ನೀಡಿ ಸಹಕರಿಸಿದ ಮೆನಜರ್ ಅಶೋಕನನ್ನು ಬಂಧಿಸಿದ್ದಾರೆ. ಮುರ್ಡೇಶ್ವರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.