ಧಾರವಾಡ : ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ವಿದ್ಯಾವಂತರಾಗಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಮುನ್ನುಗ್ಗಬೇಕು. ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಬೇಕು ಎಂದು ಶಿಲ್ಪಾ ಜಗದೀಶ ಶೆಟ್ಟರ ಹೇಳಿದರು.
ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪಾಯೋಜಕತ್ವದಲ್ಲಿ ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ (ಸಿಡಾಕ್) ದಿಂದ ಸ್ವಉದ್ಯೋಗ ಸ್ಥಾಪಿಸಲು ಇಚ್ಛಿಸಿರುವ ಪರಿಶಿಷ್ಟ ಪಂಗಡದ ಆಸಕ್ತ ಮಹಿಳಾ ಅಭ್ಯರ್ಥಿಗಳಿಗೆ ಒಂದು ದಿನದ ಉದ್ಯಮಶೀಲತಾಭಿವೃದ್ಧಿಯ ತಿಳುವಳಿಕೆ ಶಿಬಿರವನ್ನು ಉದ್ಘಾಟಸಿ ಮಾತನಾಡಿದರು.
ಇಂದಿನ ಕಾಲದ ಮಹಿಳೆ ಅಬಲೆಯಲ್ಲ ಸಬಲೆ. ಅವಳು ವಿದ್ಯಾವಂತೆ ಹಾಗೂ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹೊಂದಿದ್ದಾಳೆ. ಇಲಾಖೆಗಳಿಂದ ದೂರೆಯುವ ಸರ್ವ ಸೌಲಭ್ಯಗಳನ್ನು ಪಡೆದುಕೊಂಡು ಸ್ವಾವಲಂಬಿ ಬದುಕು ನಡೆಸಬೇಕು. ಮಹಿಳೆಯರು ಸಾಮಾಜಿಕ, ಆರ್ಥಿಕ ಹಾಗೂ ಕೌಟುಂಬಿಕ ಸ್ಥಿತಿಗತಿಗಳನ್ನು ಉತ್ತಮಪಡಿಸಲು ಸರ್ಕಾರ ಹಲವಾರು ಕಾನೂನುಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮಹಾಪೌರ ವೆಂಕಟೇಶ ಮೆಸ್ತರಿ ಮಾತನಾಡಿ, ಉದ್ಯಮ ತಾವೂ ಕೈಗೊಂಡ ಉದ್ಯಮ ಬಗ್ಗೆ ಎಲ್ಲಾ ಮಹಿಳೆಯರೊಂದಿಗೆ ಹಂಚಿಕೊಂಡರು.
ಸಿಡಾಕನ್ ಜಂಟಿ ನಿರ್ದೇಶಕ ಚಂದ್ರಶೇಖರ. ಎಚ್.ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಶೇಖರ ಪಾಟೀಲ ಹಾಗೂ ಆಶಾ ಕುಲಕರ್ಣಿ ತಾಂತ್ರಿಕ ಅಧಿವೇಶನಗಳನ್ನು ನೆಡೆಸಿ ಕೊಟ್ಟರು. ಜಿಲ್ಲೆಯ ಒಟ್ಟು 60 ಮಹಿಳೆಯರು ತರಬೇತಿಯ ಸದುಪಯೋಗ ಪಡೆದರು.
ಕಾರ್ಯಕ್ರಮದಲ್ಲಿ ಮಾಜಿ ಮಹಾಪೌರರಾದ ಮೇನಕಾ ಹುರುಳಿ, ಜಿಲ್ಲಾ ಕೈಗಾರಿಕೆಯ ಜಂಟಿ ನಿರ್ದೇಶಕ ಸಿದ್ದಣ್ಣ ಟಿ., ಭಾರತಿ ಟಪಾಲ, ಮಾರುತಿ ಬೀಳಗಿ, ಚಂದ್ರು ನೂಲ್ವಿ, ಉಪಸ್ಥಿತರಿದ್ದರು. ಮೌನೇಶ ಬಡಿಗೇರ ನಿರೂಪಿಸಿದರು, ರೋಹಿಣಿ ಘಂಟಿ ವಂದಿಸಿದರು.