ಮಂಗಳೂರು, ನ.21: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನ.೨೭ರಂದು ಬಕ್ರೀದ್ ಹಬ್ಬ ನಡೆಯಲಿದೆ. ಆದರೆ, ಸರಕಾರಿ ರಜೆ ನ.೨೮ ರಂದಾಗಿರುತ್ತದೆ. ಇದರಿಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ಹಬ್ಬ ಆಚರಣೆಗೆ ತೊಂದರೆ ಯಾಗಲಿದೆ. ಆ ಹಿನೆಲೆಯಲ್ಲಿ ನ.೨೭ರಂದು ಎಲ್ಲ ಶಿಕ್ಷಣ ಸಂಸ್ಥೆ ಗಳಿಗೆ ರಜೆ ನೀಡಲು ಸೂಕ್ತ ನಿರ್ದೇಶನ ನೀಡುವಂತೆ ಮುಸ್ಲಿಂ ಸೆಂಟ್ರಲ್ ಕಮಿಟಿಯ ನಿಯೋಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಬಕ್ರೀದ್ ಹಬ್ಬದ ಅನಂತರ ೩ ದಿನ ಕುರ್ಬಾನಿ ಆಚರಣೆಯಿದ್ದು, ಈ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲು ಪೊಲೀಸರಿಗೆ ಸೂಚನೆ ನೀಡಬೇಕು. ಬಂಟ್ವಾಳ, ಎಡಪದವು, ವಾಮಂಜೂರು, ಬಿ.ಸಿ.ರೋಡ್ ಪರಿಸರದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿ ಸುತ್ತಿರುವವರ ವಿರುದ್ಧ ಕ್ರಮ ಜರಗಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್, ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಕಾರ್ಯದರ್ಶಿ ಬಿ. ಅಬೂಬಕರ್, ರಿಯಾಝ್ ಹಾಜಿ, ಸದಸ್ಯರಾದ ಸಿ.ಎಂ.ಮುಸ್ತಫಾ, ಮುಹಮ್ಮದ್ ಬಿ, ಅಬ್ದುರ್ರಹ್ಮಾನ್ ಕೋಡಿಜಾಲ್, ಉಮರ್ ಫಜೀರ್ ಮತ್ತಿತರರಿದ್ದರು