ಭಟ್ಕಳ:ಇಲ್ಲಿನ ಪುರಸಭೆ ಅಧ್ಯಕ್ಷರ ಒಮ್ಮತದ ತಪ್ಪು ನಿರ್ದಾರಗಳಿಂದ ಭಟ್ಕಳ ಪ್ರಕ್ಷಬ್ದಗೊಳ್ಳುತ್ತಿದ್ದು ಇಲ್ಲಿನ ಜನರು ಆತಂಕ ಪಡುವಂತಾಗಿದೆ. ಇಂತಹ ಪುರಸಭೆಯನ್ನು ಜಿಲ್ಲಾಧಿಕಾರಿಗಳು ಸುಪರ್ ಸೀಡ್ ಮಾಡಬೇಕು ಎಂದು ಪುರಸಭೆಯ ನಾಮ ನಿರ್ದೇಶಿತ ಸದಸ್ಯ ಶ್ರೀಕಾಂತ ನಾಯ್ಕ ಆಗ್ರಹಿಸಿದರು.
ಅವರು ಪಟ್ಟಣದ ಆಸರಕೇರಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಮಾರ್ಚ ೨೩ರಂದು ನಿಚ್ಛಲಮಕ್ಕಿ ದೇವಸ್ಥಾನದ ಅಧ್ಯಕ್ಷರು ಮಹಾದ್ವಾರ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಗೆ ಪುರಸಭೆ ಕನಿಷ್ಟ ಸ್ಪಂದಿಸುವ ಔದಾರ್ಯ ತೋರಿಲ್ಲ. ಯಾವುದೆ ಹಿಂಬರವನ್ನು ನೀಡಿಲ್ಲ. ನಂತರ ಶಾಸಕರ ನೇತೃತ್ವದಲ್ಲಿ ದ್ವಾರ ನಿರ್ಮಾಣಕ್ಕೆ ಮುಂದಾದಾಗ ಮುಸ್ಲಿಂ ಸದಸ್ಯರು ಒಂದಾಗಿ ಪುರಸಭೆ ಕಚೇರಿಯಲ್ಲಿ ಅನೌಪಚಾರಿಕ ಸಭೆ ನಡೆಸಿದ್ದಾರೆ. ಬಳಿಕ ಮುಖ್ಯಾಧಿಕಾರಿಗಳನ್ನು ಎಸಿ ಕಚೇರಿಗೆ ಕರೆದುಕೊಂಡು ಹೋಗಿ ದ್ವಾರ ನಿರ್ಮಾಣಕ್ಕೆ ನೋಟಿಸ್ ನೀಡಿ ಎಂದು ಸೂಚಿಸಿದ್ದಾರೆ. ಎರಡು ದಿನಗಳ ಬಳಿಕವೂ ಮತ್ತೆ ಮುಖ್ಯಾಧಿಕಾರಿಗಳನ್ನು ಕರೆದು ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಸಊಚಿಸಿದ್ದಾರೆ. ಇಷ್ಟೆಲ್ಲಾ ಕುತಂತ್ರ ನಡೆಸಿ ಬಳಿಕ ಪುರಸಭೆ ಅಧ್ಯಕ್ಷ ಇದರಲ್ಲಿ ತನ್ನ ಹಾಗೂ ಮುಸ್ಲಿಂ ಸದಸ್ಯರ ಹಸ್ತಕ್ಷೇಪವಿಲ್ಲ ಎಂದು ನುಡಿಯುತ್ತಾರೆ. ಇವರ ದ್ವಂದ್ವ ನಿಲುವು ಇಂದು ಇಂತಹ ಸ್ಥಿತಿ ನಿರ್ಮಾಣಕ್ಕೆ ಕಾರಣ. ಮೀನು ಮಾರುಕಟ್ಟೆಯನ್ನು ಅಲ್ಲಿಂದ ತೆರವುಗೊಳಿಸಿ ಒಂದು ಸಮುದಾಯಕ್ಕೆ ಸೀಮಿತಗೊಳಿಸುವ ಹಿಡನ್ ಅಜೆಂಡಾ ಹೊಂದಿದ್ದು ಸುಮಾರು ೧೨೫ ಮೀನುಗಾರರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದಾರೆ. ಅಭಿವೃದ್ಧಿ ಕೈಗೊಳ್ಳುವದೆ ಆದರೆ ಎಲ್ಲಾ ಸದಸ್ಯರನ್ನು ಕರೆದು ಅಲ್ಲಿ ಮಾಡುವ ಕಾರ್ಯದ ಕುರಿತು ಚರ್ಚೆ ನಡೆಸಬೇಕಿತ್ತು. ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಅದನ್ನು ಬಿಟ್ಟು ಕೇವಲ ಮುಸ್ಲಿಂ ಸದಸ್ಯರೊಂದಿಗೆ ಚರ್ಚೆ ನಡೆಸಿ ಏಕಪಕ್ಷೀಯವಾಗಿ ವರ್ತನೆ ಸರಿಯಲ್ಲಿ ಎಂದು ಪುರಸಭೆ ಅಧಯಕ್ಷ ಪರ್ವೆಜ್ ಕಾಸಿಂಜಿ ವಿರುದ್ದ ಆಕ್ರೋಶ ಹೊರಹಾಕಿದರು.
ಇನ್ನೊರ್ವ ನಾಮನಿರ್ದೇಶಿತ ಸದಸ್ಯ ಶ್ರೀಪಾದ ಕಂಚುಗಾರ ಮಾತನಾಡಿ ಕಳೆದ ೮ ತಿಂಗಳಿನಿAದ ಪುರಸಭೆಯ ತಪ್ಪು ನಿರ್ಧಾರಗಳಿಂದ ಭಟ್ಕಳ ಉದ್ವಿಘ್ನಗೊಳ್ಳುತ್ತಿದೆ. ಉರ್ದು ನಾಮಫಲಕ, ಮೀನು ಮಾರುಕಟ್ಟೆ ಸ್ಥಳಾಂತರ, ದ್ವಾರದ ವಿವಾದ ಹೀಗೆ ಹಲವು ನಿರ್ದಾರಗಳನ್ನು ಅವರ ಸಮುದಾಯದ ಜನರೆ ಕೈಗೊಂಡು ನಿರ್ಣಯಿಸುತ್ತಿದ್ದಾರೆ. ಭಟ್ಕಳದ ಪುರಸಭೆ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದಂತಾಗಿದೆ. ಇಂತಹ ಪುರಸಭೆಯನ್ನು ಸುಪರ್ ಸೀಡ್ ಮಾಡುವದು ಒಳ್ಳೆಯದು ಎಂದರು. ಪುರಸಭೆ ಸದಸ್ಯ ರಾಘವೇಂದ್ರ ಶೇಟ್, ರಜನಿ ಪ್ರಭು ನಾಮ ನಿರ್ದೇಶಿತ ಸದಸ್ಯರಾದ ಉದಯ ನಾಯ್ಕ, ಸತೀಶ ನಾಯ್ಕ ಇದ್ದರು.