ಭಟ್ಕಳ, ನವೆಂಬರ್ 26: ಬಕ್ರೀದ್ ಹಬ್ಬ ಸಮೀಪಿಸುತ್ತಿದ್ದಂತೆ ಭಟ್ಕಳದ ಜನತೆಗೆ ದುಗುಡವೂ ಹೆಚ್ಚುತ್ತಿದೆ. ಹಿಂದೂಜನರು ಹೆಚ್ಚಾಗಿರುವ ಮುಂಡಳ್ಳಿಯಲ್ಲಿರುವ ಹೊಳೆಕಾಂತ ದೇವಸ್ಥಾನಕ್ಕೆ ಕೆಲವು ದುಷ್ಕರ್ಮಿಗಳು ಬೆಂಕಿ ಹಚ್ಚಲು ಪ್ರಯತ್ನಿಸಿರುವ ಘಟನೆ ವರದಿಯಾಗಿದೆ.

ಬುಧವಾರ ಬೆಳಿಗ್ಗೆ ದೇವಸ್ಥಾನದ ಅರ್ಚಕರು ಬಂದಾಗ ಬಾಗಿಲು ಬೆಂಕಿಗಾಹುತಿಯಾಗಿದ್ದು ಕಂಡುಬಂದು ಕೂಡಲೇ ಪೋಲೀಸರಿಗೆ ವರದಿ ಮಾಡಿದ್ದಾರೆ. ಕೂಡಲೇ ಆಗಮಿಸಿದ ಪೋಲಿಸರು ದೇವಸ್ಥಾನದ ಬಳಿಯಲ್ಲಿಯೇ ತ್ಯಜಿಸಿದ್ದ ಪೆಟ್ರೋಲ್ ಬಾಟ್ಲಿಯೊಂದನ್ನು ಪತ್ತೆಹಚ್ಚಿದ್ದಾರೆ. ಭಟ್ಕಳ ಸುತ್ತಮುತ್ತ ಅಶಾಂತಿ ಹರಡಬಯಸುವ ಕೆಲವು ದುಷ್ಕರ್ಮಿಗಳು ಪೆಟ್ರೋಲ್ ಬಳಸಿ ದೇವಸ್ಥಾನಕ್ಕೆ ಬೆಂಕಿಯಿಡುವ ಇರಾದೆಯಿಂದ ಆಗಮಿಸಿದ್ದರೂ ಅದೃಷ್ಟವಶಾತ್ ಕೇವಲ ಬಾಗಿಲು ಮಾತ್ರ ಬೆಂಕಿಯಿಂದ ಹಾನಿಗೊಂಡಿದೆ.

ಈ ಘಟನೆಯ ಬಳಿಕ ಭಟ್ಕಳ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದ್ದು ಶಾಂತಿ ಕಾಪಾಡಿಕೊಂಡು ಬರುವಂತೆ ಪೋಲೀಸರು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ದೇವಸ್ಥಾನದ ಧರ್ಮದರ್ಶಿಗಳಾದ ಜಟ್ಟಪ್ಪ ನಾಯಕ್ ರವರು ಭಟ್ಕಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಈ ಪ್ರಕರಣವನ್ನು ಪಿ.ಎಸ್.ಐ. ತಿಮ್ಮಪ್ಪ ನಾಯಕ್ ಕೈಗೆತ್ತಿಕೊಂಡಿದ್ದಾರೆ.