ಭಟ್ಕಳ: ದಾಂಡೇಲಿಯ ಸಾಹಿತಿ ಹಾಗೂ ಪತ್ರಕರ್ತ ಬಿ.ಎನ್.ವಾಸರೆ ಅವರ ಮೇಲೆ ಅಲ್ಲಿನ ಸಿ.ಪಿ.ಐ. ಭೀಮಣ್ಣ ಸೂರಿ ಅವರು ನಡೆಸಿದ ದೌರ್ಜನ್ಯವನ್ನು ಖಂಡಿಸಿ ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಪ ವಿಭಾಗಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ದಾಂಡೇಲಿಯ ಪೊಲೀಸ್ ಇನ್ಸಪೆಕ್ಟರ್ ಭೀಮಣ್ಣ ಸೂರಿ ಅವರು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಗೂ ಪತ್ರಕರ್ತ ಬಿ.ಎನ್. ವಾಸರೆ ಅವರನ್ನು ಅಗೌರವವಾಗುವ ರೀತಿಯಲ್ಲಿ ನಡೆಸಿಕೊಂಡಿದ್ದನ್ನು ತೀವ್ರವಾಗಿ ಖಂಡಿಸುತ್ತಾ ಸಾರ್ವಜನಿಕ ಸ್ಥಳದಲ್ಲಿ ಸೌಜನ್ಯಯುತವಾಗಿ ವರ್ತಿಸಬೇಕಾದ ಸರಕಾರದ ಓರ್ವ ಅಧಿಕಾರಿಯೇ ಈ ರೀತಿಯಾಗಿ ಪತ್ರಕರ್ತರನ್ನು ನಡೆಸಿಕೊಂಡಿರುವುದು ಸರಕಾರಕ್ಕೆ ಶೋಭೆ ತರುವಂತದ್ದಲ್ಲ ಎಂದೂ ಹೇಳಿದೆ. ಪತ್ರಕರ್ತರಿಗೆ ಭದ್ರತೆ ನೀಡಬೇಕಾದ ಅಧಿಕಾರಿಯಿಂದ ಈ ರೀತಿಯ ವರ್ತನೆ ಸಮರ್ಥನೀಯವಲ್ಲ ಎಂದಿರುವ ಸಂಘ ಜಿಲ್ಲೆಯಲ್ಲಿ ಪತ್ರಕರ್ತರಿಗೆ ಸೂಕ್ತ ಭದ್ರತೆ ವದಗಿಸುವಂತೆಯೂ ಮನವಿಯಲ್ಲಿ ಕೋರಿದೆ. ಅಧಿಕಾರಿಗಳ ಈ ನಡೆಯನ್ನು ತೀವ್ರವಾಗಿ ಖಂಡಿಸಿದ ಸಂಘವು ತಕ್ಷಣ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಗೃಹ ಸಚಿವರನ್ನು ಆಗ್ರಹಿಸಿದೆ.
ಉಪ ವಿಭಾಧಿಕಾರಿಗಳ ಅನುಪಸ್ಥಿತಿಯಲ್ಲಿ ತಹಸೀಲ್ದಾರ್ ಕಚೇರಿ ಶಿರಸ್ತೆದಾರ ಪ್ರವೀಣ ಅವರು ಮನವಿಯನ್ನು ಸ್ವೀಕರಿಸಿದರು. ಮನವಿ ಸಲ್ಲಿಸುವ ಸಂದರ್ಭದಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಆರ್.ಮಾನ್ವಿ, ಕಾರ್ಯದರ್ಶಿ ಶೈಲೇಶ ವೈದ್ಯ, ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ಟ, ಉಪಾಧ್ಯಕ್ಷ ಮೋಹನ ನಾಯ್ಕ, ರಾಘವೇಂದ್ರ ಹೆಬ್ಬಾರ್, ಫಯಾಜ್ ಮುಲ್ಲಾ, ಇನಾಯತುಲ್ಲಾ ಗವಾಯಿ, ಅಝರ್ ಬರ್ಮಾವರ್, ಅತಿಕುರ್ರೆಹಮಾನ್ ಶಾಬಂದರಿ, ಮನಮೋಹನ ನಾಯ್ಕ, ಪ್ರಸನ್ನ ಭಟ್ಟ, ಎಸ್. ಉದಯ ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.