ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಅ.೪ ರಂದು ಸದ್ಭಾವನಾ ಪ್ರಶಸ್ತಿ ಮತ್ತು ಸೌಹಾರ್ದ ಸ್ನೇಹ ಸಮ್ಮಿಲನ

ಭಟ್ಕಳ: ಅ.೪ ರಂದು ಸದ್ಭಾವನಾ ಪ್ರಶಸ್ತಿ ಮತ್ತು ಸೌಹಾರ್ದ ಸ್ನೇಹ ಸಮ್ಮಿಲನ

Thu, 03 Aug 2023 00:02:00  Office Staff   SOnews

ಡಾ.ವೀರೇಂದ್ರ ಶಾನಭಾಗ ಸದ್ಭಾವನಾ ಸಿರಿ ಪ್ರಶಸ್ತಿ, ಡಾ.ಸವಿತಾ ಕಾಮತ್ ಹಾಗೂ ನಝೀರ್ ಕಾಶಿಮಜಿ ಸದ್ಭಾವನಾ ಸೇವಾ ಪ್ರಶಸ್ತಿಗೆ ಭಾಜನ

ಭಟ್ಕಳ: ಸಮಾಜದಲ್ಲಿ ಶಾಂತಿ ಸೌಹಾರ್ದತೆಗಾಗಿ ಸಕ್ರೀಯಗೊಂಡಿರುವ ಸದ್ಭಾವನ ಮಂಚ್ ಭಟ್ಕಳ ಹಾಗೂ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ವತಿಯಿಂದ ಅ.೪ರಂದು ಶುಕ್ರವಾರ ಸಂಜೆ ೫.೦೦ಗಂಟೆಗೆ ನವಾಯತ್ ಕಾಲೋನಿಯ ರಾಬಿತಾ ಸೂಸೈಟಿ ಸಭಾಂಗಣದಲ್ಲಿ ಸದ್ಭಾವನಾ ಪ್ರಶಸ್ತಿ ಮತ್ತು ಸೌಹಾರ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸದ್ಭಾವನ ಮಂಚ್ ಅಧ್ಯಕ್ಷ ಸತೀಶ್ ಕುಮಾರ್ ಹಾಗೂ ಕಾರ್ಯದರ್ಶಿ ಎಂ.ಆರ್.ಮಾನ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಶ್ರೀಗುರು ವಿದ್ಯಾಧಿರಾಜ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ವೀರೇಂದ್ರ ವಿ.ಶಾನಭಾಗ ರಿಗೆ ಅವರು ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಮೌಲ್ಯ ಮತ್ತು ಸೌಹಾರ್ದತೆಯನ್ನು ಬೆಳೆಸುವಲ್ಲಿ ವಿನೂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಈ ಮೂಲಕ ಸಮಾಜದಲ್ಲಿ ಶಾಂತಿ ಸೌಹಾರ್ದತೆಗೆ ತಮ್ಮದೆ ಆದ ಕೊಡುಗೆ ನೀಡುತ್ತಿದ್ದಾರೆ. ಇದನ್ನು ಗುರುತಿಸಿರುವ ಸದ್ಭಾವನಾ ಮಂಚ್ ಇವರಿಗೆ “ಸದ್ಭಾವವಾ ಸಿರಿ-೨೦೨೩” ಪಶಸ್ತಿಯನ್ನು ಗೌರವಿಸಲಾಗುತ್ತದೆ. 

ಭಟ್ಕಳ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವಲ್ಲಿ ಅವಿರತ ಶ್ರಮಿಸುತ್ತಿರುವ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ರಿಗೆ ಸದ್ಭಾವನಾ ಸೇವಾ ಪ್ರಶಸ್ತಿಯನ್ನು ಮತ್ತು ಸಾರ್ವಜನಿಕರಲ್ಲಿ ರಕ್ತದಾನದ ಅರಿವು ಮೂಡಿಸುವಲ್ಲಿ ಮತ್ತು ಸಾರ್ವಜನಿಕರ ಆರೋಗ್ಯದ ಕುರಿತು ಜಾಗೃತಿಯನ್ನು ಮಾಡುವಲ್ಲಿ ಶ್ರಮಿಸುತ್ತಿರುವ ಹಿರಿಯ ಸಮಾಜ ಸೇವಕರಾದ ನಝೀರ್ ಕಾಶಿಮಜಿಯವರನ್ನು ಸದ್ಭಾವನಾ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ. 

ಕಾರ್ಯಕ್ರದ ಅಧ್ಯಕ್ಷತೆಯನ್ನು ಸದ್ಭಾವನಾ ಮಂಚ್ ರಾಜ್ಯ ಕಾರ್ಯದರ್ಶಿ ಖ್ಯಾತ ಪ್ರವಚನಕಾರ ಮುಹಮ್ಮದ್ ಕುಂಞಿ ವಹಿಸಲಿದ್ದಾರೆ. ರಾಬಿತಾ ಸೂಸೈಟಿಯ ಅಧ್ಯಕ್ಷ ಉಮರ್ ಫಾರೂಖ್ ಮುಸ್ಬಾ ಹಾಗೂ ಪ್ರಧಾನ ಕಾರ್ಯದರ್ಶಿ ಖ್ಯಾತ ಅನಿವಾಸಿ ಉದ್ಯಮಿ ಡಾ.ಅತಿಕರ‍್ರಹ್ಮಾನ್ ಮುನೀರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 

ಭಟ್ಕಳ ತಹಸಿಲ್ದಾರ್ ತಿಪ್ಪೇಸ್ವಾಮಿ, ಭಟ್ಕಳ ಡಿ.ವೈ.ಎಸ್.ಪಿ ಶ್ರೀಕಾಂತ್ ಪಿ, ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಂಬದ್ರಿ, ಜಮಾಆತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ. ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 

ನಿಮ್ಮ ಗೌರವಾನ್ವಿತ ಉಪಸ್ಥಿತಿಯು ಸಮುದಾಯದಲ್ಲಿ ಏಕತೆ, ಸೌಹಾರ್ದತೆ ಮತ್ತು ಸದ್ಭಾವನೆಯನ್ನು ಉತ್ತೇಜಿಸಲು ಪ್ರೋತ್ಸಾಹಿಸುತ್ತದೆ ಶಾಂತಿ ಮತ್ತು ಒಗ್ಗಟ್ಟನ್ನು ಪ್ರದರ್ಶಿಸುವ ಈ ಸದ್ಭಾವನಾ ಕಾರ್ಯಕ್ರಮ ದಲ್ಲಿ ತಮ್ಮ ತಮ್ಮ ಕುಟುಂಬದ ಸದಸ್ಯರೊಡನೆ ಭಾಗವಹಿಸಿ, ಸದ್ಭಾವನೆ ಮತ್ತು ಸಾಮರಸ್ಯದ ಸಮಾಜವನ್ನು ನಿರ್ಮಿಸಲು ನಾವೆಲ್ಲರೂ ಕೈಜೋಡಿಸೋಣ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ. 


Share: