ಭಟ್ಕಳ: ತಾಲೂಕಿನ ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ವಿದ್ಯುತ್ ವಿತರಣಾ ಕೇಂದ್ರ ಪಕ್ಕದಲ್ಲಿ ಹುಲ್ಲು ಪ್ರದೇಶಕ್ಕೆ ಬೆಂಕಿ ಹೊತ್ತಿಕೊಂಡು ಸುತ್ತಮುತ್ತ ವ್ಯಾಪಿಸಿದ ಕಾರಣ ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ಗುರುವಾರ ಸಂಜೆ ನಡೆದಿದೆ.
ಬೆಂಕಿಯನ್ನು ನಂದಿಸಲು ಸ್ಥಳೀಯರು ಪ್ರಯತ್ನ ನಡೆಸಿದರಾದರೂ ಫಲಕಾರಿಯಾಗಲಿಲ್ಲ. ಹುಲ್ಲಿಗೆ ಹೊತ್ತಿಕೊಂಡ ಬೆಂಕಿ ವಿದ್ಯುತ್ ವಿತರಣಾ ಕೇಂದ್ರದತ್ತ ಹೊರಳುತ್ತಿದ್ದಂತೆಯೇ ಜನರು ಭಯದಿಂದ ಅತ್ತಿತ್ತ ಓಡಲು ಆರಂಭಿಸಿದರು. ಈ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗುತ್ತಿದ್ದಂತೆಯೇ ಜನರು ನಿಟ್ಟುಸಿರು ಬಿಟ್ಟರು. ವಿದ್ಯುತ್ ವಿತರಣಾ ಕೇಂದ್ರದತ್ತ ಬೆಂಕಿ ವ್ಯಾಪಿಸುವ ಸಾಧ್ಯತೆ ಇದ್ದರೂ, ಬೆಂಕಿ ನಂದಿಸುವ ನಿಟ್ಟಿನಲ್ಲಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲು ಹಿಂದೇಟು ಹಾಕಿದ ವಿದ್ಯುತ್ ಕೇಂದ್ರದ ಕಾವಲುಗಾರನ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.