ಮಂಜೇಶ್ವರ, ನ.೨: ಶಾಲಾ ಕ್ಯಾಂಪಸ್ನ ಒಳಗೆ ನುಗಿದ್ಗ ಬಜರಂಗದಳದ ಕಾರ್ಯಕರ್ತ ರೆನ್ನಲಾದ ತಂಡವೊಂದು ಐವರು ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವರ್ಕಾಡಿಯ ಕೊಡ್ಲಮೊಗರುನಲ್ಲಿ ನಡೆದಿದೆ.

ವರ್ಕಾಡಿ ಕೊಡ್ಲಮೊಗರು ವಾಣಿ ವಿಜಯ ಪ್ರೌಢ ಶಾಲೆಯ ಕ್ಯಾಂಪಸ್ಗೆ ಕಾರು ಹಾಗೂ ಆಟೊ ರಿಕ್ಷಾದಲ್ಲಿ ಬಂದು ನುಗ್ಗಿದ ಸ್ಥಳೀಯ ಬಜರಂಗದಳದ ಕಾರ್ಯಕರ್ತರೆನ್ನಲಾದ ತಂಡವೊಂದು ಐವರು ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಐವರು ವಿದ್ಯಾರ್ಥಿಗಳನ್ನು ಕುಂಬಳೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಮವಾರ ಅಪರಾಹ್ನ ೨.೩೦ರ ಹೊತ್ತಿಗೆ ಈ ಘಟನೆ ನಡೆದಿದೆ. ಈ ಶಾಲೆಯ ೯ನೆ ತರಗತಿಯ ವಿದ್ಯಾರ್ಥಿಗಳು ನಾಳೆ ನಡೆಯುವ ಶಾಲಾ ಕಲೋತ್ಸವದಲ್ಲಿ ದಫ್ ಸ್ಪರ್ಧೆಯಲ್ಲಿ ಭಾಗವಹಿಸಲು ಪೂರ್ವ ಸಿದ್ದತೆಯಲ್ಲಿದ್ದ ವೇಳೆ ಅಂಗವಿಕಲ ವಿದ್ಯಾರ್ಥಿ ಸಹಿತ ಐದು ಮಂದಿ ವಿದ್ಯಾರ್ಥಿಗಳ ಮೇಲೆ ಬಜರಂಗದಳದ ಕಾರ್ಯಕರ್ತರೆನ್ನಲಾದ ತಂಡ ಏಕಾಏಕಿ ಮಾರಣಾಂತಿಕ ಹಲ್ಲೆ ನಡೆಸಿದೆ ಎನ್ನಲಾಗಿದೆ.

ಹಲ್ಲೆಗೊಳಗಾದ ವಿದ್ಯಾರ್ಥಿಗಳನ್ನು ಇಮ್ರಾನ್ ಖಾನ್, ನಸಿರುದ್ದೀನ್, ಮುಹಮ್ಮದ್, ನಿಸಾರ್, ಝೈನುದ್ದೀನ್, ಇಬ್ರಾಹೀಂ ಭಾತಿಶ ಎಂದು ಗುರುತಿಸಲಾಗಿದೆ. ದಾಳಿ ನಡೆಸಿದ ಬಜರಂಗದಳದ ಕಾರ್ಯಕರ್ತರನ್ನು ಬೆನ್ನಟ್ಟಿದ ಸ್ಥಳೀಯ ನಾಗರಿಕರು ಮಜೀರ್ಪಳ್ಳ ಎಂಬಲ್ಲಿ ಒಮ್ನಿ ಸಹಿತ ಮೂವರನ್ನು ಹಿಡಿದು ಮಂಜೇಶ್ವರ ಪೊಲೀಸರಿಗೆ ಒಪ್ಪಿಸಿದು, ಒಮ್ನಿಯಲ್ಲಿದ್ದ ಇಬ್ಬರು ಹಾಗೂ ಆಟೊದಲ್ಲಿ ಬಂದವರು ಪರಾರಿಯಾಗಿದ್ದಾರೆ.
ಇವರಿಗಾಗಿ ಶೋಧ ನಡೆಯುತ್ತಿದೆ ಎನ್ನಲಾಗಿದೆ.
ಶಾಲೆಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳ ದುಶ್ಕೃತ್ಯವನ್ನು, ಶಾಲಾ ರಕ್ಷಕ-ಶಿಕ್ಷಕ ಸಂಘ, ವಿವಿಧ ಸಾಮಾಜಿಕ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಆರೋಪಿಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ರಾಜ್ಯ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರನ್ನು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.