ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ನವದೆಹಲಿ:ವಿಮಾನ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾದ ಮುಲಾಯಂ

ನವದೆಹಲಿ:ವಿಮಾನ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾದ ಮುಲಾಯಂ

Mon, 15 Mar 2010 03:06:00  Office Staff   S.O. News Service
ನವದೆಹಲಿ, ಮಾರ್ಚ್ ೧೪:ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರನ್ನು ಹೊತ್ತಿದ್ದ ಖಾಸಗಿ ಲಘು ವಿಮಾನವೊಂದು ರನ್‌ವೇಯಲ್ಲಿ ಇಳಿಯುವಾಗ ಸೈಕಲ್ ಸವಾರನೊಬ್ಬ ಅದೇ ಹಾದಿಯಲ್ಲಿ ಸಾಗುವ ಮೂಲಕ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾದರೂ, ಯಾವುದೇ ಅಪಾಯ ಸಂಭವಿಸಿಲ್ಲ.
 
ಇದು ನಡೆದಿರುವುದು ಉತ್ತರ ಪ್ರದೇಶದ ಇಟಾ ಎಂಬಲ್ಲಿ. ಶನಿವಾರ ದೆಹಲಿಯಿಂದ ಹೊರಟಿದ್ದ ಮುಲಾಯಂ ಬಾಡಿಗೆ ವಿಮಾನ ಕೂದಲೆಳೆ ಅಂತರದಿಂದ ಅಪಾಯದಿಂದ ಪಾರಾಗಿದೆ ಎಂದು ಮೂಲಗಳು ಹೇಳಿವೆ.ಸೈಕಲ್ ಸವಾರ ರನ್‌ವೇಯಲ್ಲಿ ಸಾಗುತ್ತಿರುವ ಹೊತ್ತಿನಲ್ಲೇ ವಿಮಾನ ರನ್‌ವೇಗೆ ಬಂದಿತ್ತು. ಸೈಕಲ್ ಸವಾರನನ್ನು ಹಿಂದಿಕ್ಕಿದ ವಿಮಾನ ಮುಂದಕ್ಕೆ ಹೋಯಿತಾದರೂ ಸೈಕಲ್ ಸವಾರನಿಗೆ ಯಾವುದೇ ಅಪಾಯವಾಗಲಿಲ್ಲ. ಇದನ್ನು ಲೆಕ್ಕಿಸದ ಆತ ವಿಮಾನದ ಹಿಂದಿನಿಂದ ಮತ್ತೆ ಮುಂದಕ್ಕೆ ಹೋಗಲು ಯತ್ನಿಸುತ್ತಿದ್ದ ದೃಶ್ಯಾವಳಿ ವೀಡಿಯೋ ಚಿತ್ರಣಗಳಲ್ಲಿ ಕಂಡು ಬರುತ್ತಿದೆ.ಇಟಾ ಸಮೀಪ ಪಕ್ಷದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ಮುಲಾಯಂ ಲಘು ವಿಮಾನವನ್ನು ಇಲ್ಲಿನ ಖಾಸಗಿ ರನ್‌ವೇಯಲ್ಲಿ ಇಳಿಸಲು ಸಿದ್ಧತೆ ನಡೆಸಲಾಗಿತ್ತು.
 
ಈ ರನ್‌ವೇಯ ಸಿಬ್ಬಂದಿಯೇ ಸೈಕಲ್ ಸವಾರ ಎಂದು ತಿಳಿದು ಬಂದಿದೆ.ರನ್‌ವೇಯಲ್ಲಿ ಯಾವುದಾದರೂ ಪ್ರಾಣಿಗಳಿವೇ ಅಥವಾ ಧಕ್ಕೆ ತರಬಹುದಾದ ವಸ್ತುಗಳಿವೆಯೇ ಎಂದು ರನ್‌ವೇ ಮೇಲ್ವಿಚಾರಕ ಸೈಕಲ್‌ನಲ್ಲಿ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿಮಾನ ಕೆಳಗಿಳಿದಿತ್ತು ಎಂದು ಹೇಳಲಾಗಿದೆ. ಆದರೂ ಇಲ್ಲಿ ವಿಐಪಿಗಳ ಸುರಕ್ಷತಾ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿರುವುದು ಮತ್ತೊಮ್ಮೆ ಬೆಳಕಿಗೆ ಬಂದಿದೆ.ಇಂತಹ ಪ್ರಕರಣ ನಡೆಯುತ್ತಿರುವುದು ಇದೇ ಮೊದಲಲ್ಲ. ಇತ್ತೀಚಿನ ಘಟನೆಗಳನ್ನು ತೆಗೆದುಕೊಳ್ಳುವುದಾದರೆ 2009ರ ಅಕ್ಟೋಬರ್ 19ರಂದು ಬಿಜೆಪಿ ಅಧ್ಯಕ್ಷರಾಗಿದ್ದ ರಾಜನಾಥ್ ಸಿಂಗ್ ಪ್ರಯಾಣಿಸುತ್ತಿದ್ದ ವಿಮಾನವೊಂದನ್ನು ಜೀಪುಗಳ ಹೆಡ್‌ಲೈಟ್ ಬೆಳಕನ್ನು ಬಳಸಿ ಹಾರಿಸುವ ಮೂಲಕ ಎಲ್ಲಾ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು.ಅದಕ್ಕೂ ಮೊದಲು 2008ರಲ್ಲಿ ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ಅವರನ್ನು ಹೊತ್ತಿದ್ದ ವಾಯುಪಡೆಯ ಹೆಲಿಕಾಫ್ಟರ್ ಪಕ್ಕದಿಂದಲೇ 150 ಮಂದಿ ಪ್ರಯಾಣಿಕರನ್ನು ಹೊಂದಿದ್ದ ಏರ್ ಇಂಡಿಯಾ ವಿಮಾನವೊಂದು ಹಾದು ಹೋಗಿ ಆತಂಕ ಸೃಷ್ಟಿಸಿತ್ತು. ಇವೆರಡೂ ಒಂದೇ ರನ್‌ವೇ ಮೂಲಕ ಮುಂಬೈ ವಿಮಾನ ನಿಲ್ದಾಣದಲ್ಲಿ ಏಕಕಾಲಕ್ಕೆ ಹಾರಲು ಸಿದ್ಧವಾಗಿದ್ದವು.ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದೇ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿಯವರ ಹೆಲಿಕಾಫ್ಟರ್ ಪತನಕ್ಕೆ ಕಾರಣ ಎಂದು ಈಗಾಗಲೇ ವರದಿಗಳು ಖಚಿತಪಡಿಸಿವೆ.

Share: