ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ ಸರ್ಕಾರಿ ಅಧಿಕಾರಿಗಳು ಜನ ಸಮೀಪದಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು:ಎಸಿ ಮಮತಾ ದೇವಿ

ಭಟ್ಕಳ ಸರ್ಕಾರಿ ಅಧಿಕಾರಿಗಳು ಜನ ಸಮೀಪದಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು:ಎಸಿ ಮಮತಾ ದೇವಿ

Thu, 06 Jul 2023 05:56:19  Office Staff   SO News

ಭಟ್ಕಳ: ನಾನು ಕೆಲಸದ ಸ್ಥಳವನ್ನು ಕುಟುಂಬ ಎಂದು ಭಾವಿಸಿ ಕೆಲಸ ಮಾಡಿದಾಗ ಮಾತ್ರ ಉತ್ತಮವಾಗಿ ಕೆಲಸ ಮಾಡಲು ಸಾಧ್ಯ ಎಂದು ಪದೋನ್ನತಿ ಹೊಂದಿ ವರ್ಗಾವಣೆಗೊಂಡ ಭಟ್ಕಳ ಉಪ ವಿಭಾಗದ ಉಪ ವಿಭಾಧಿಕಾರಿ ಮಮತಾದೇವಿ ಜಿ.ಎಸ್. ಹೇಳಿದರು. 
ಯಾವುದೇ ಒಂದು ಅಧಿಕಾರಿ ಸಾರ್ವಜನಿಕರೊಂದಿಗೆ ಹತ್ತಿರವಿದ್ದಾಗ ಅವರ ಸಂಕಷ್ಟ ಅರಿವಾಗುತ್ತದೆ. ಯಾವುದೇ ರೀತಿಯ ಸಮಸ್ಯೆ ಇದ್ದರೂ ಸಹ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಹ ಸುಲಭವಾಗುವುದು. ಜನರು ತಮ್ಮಲ್ಲಿ ಬಂದಾಗ ಅವರ ಮಾತನ್ನು ಕೇಳಿದಾಗಲೇ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗುವುದು ಎಂದರು. 
ನಾವು ಉತ್ತಮ ಭಾವನೆಗಳನ್ನು ಹೊಂದಿದಾಗ ಮಾತ್ರ ಸಿಬ್ಬಂದಿಗಳೂ ಕೂಡಾ ಉತ್ತಮ ಕೆಲಸ ಮಾಡುತ್ತಾರೆ.  ಭಟ್ಕಳ ಉಪ ವಿಭಾಗದ ಸಿಬ್ಬಂದಿಗಳು ಉತ್ತಮವಾಗಿ ಕೆಲಸ ಮಾಡುವ ಕಾರ್ಯಕ್ಷಮತೆ ಪ್ರದರ್ಶಿಸಿದ್ದಾರೆ ಎಂದರು. 
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಮತಾದೇವಿಯವರ ಪತಿ ಮೋಹನ್ ಅವರು ಮಾತನಾಡಿ ಸರಕಾರದ ಪ್ರತಿನಿಧಿಯಾಗಿ ನಾವು ಜನತೆಗೆ ಸರಕಾರದ ಕಾರ್ಯಕ್ರಮಗಳನು ಎಷ್ಟು ಬೇಗ ತಲುಪಿಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಓರ್ವ ಅಧಿಕಾರಿಯಾಗಿ ಜನಪರವಾಗಿರುವುದರೊಂದಿಗೆ ಜನತೆಗೆ ಅಗತ್ಯವಾದ ಕಾರ್ಯಕ್ರಮಗಳನ್ನು ಕೊಡುವುದು ಕೂಡಾ ಅಷ್ಟೇ ಮುಖ್ಯವಾಗುತ್ತದೆ.  ಆ ದಿಶೆಯಲ್ಲಿ ಭಟ್ಕಳ ಉಪ ವಿಭಾಗದಲ್ಲಿ ಉಪ ವಿಭಾಗಾಧಿಕಾರಿಯಾಗಿದ್ದ ಮಮತಾದೇವಿ ಜನರೊಂದಿಗಿದ್ದು ಜನತೆಗೆ ಬೇಕಾದ ಕಾರ್ಯಕ್ರಮ ಕೊಡುವ ಮೂಲಕ ಜನಪರವಾಗಿದ್ದರು ಎಂದರು. 
ಕುಮಟಾ ಉಪ ವಿಭಾಗಾಧಿಕಾರಿ ರಾಘವೇಂದ್ರ ಅವರು ಮಾತನಾಡಿ ಹಲವಾರು ಸಂದರ್ಭಗಳಲ್ಲಿ ಸಲಹೆ ಸೂಚನೆಗಳನ್ನು ನೀಡಿದ್ದು, ಚುನಾವಣೆ ಸಮಯದಲ್ಲಿಯೂ ಕೂಡಾ ಮಾರ್ಗದರ್ಶನ ನೀಡಿದ್ದನ್ನು ಸ್ಮರಿಸಿದರು. ಅವರು ಪದೋನ್ನತಿ ಹೊಂದಿ ಹೋಗುತ್ತಿದ್ದಾರೆ. ವರ್ಗಾವಣೆ ಸಹಜವಾಗಿದ್ದರೂ ಜನರ ಅಧಿಕಾರಿಗಳು ವರ್ಗವಾಗಿ ಹೋಗುವಾಗ ಜನರ ಮೆಚ್ಚುಗೆ ಗಳಿಸಿರುವುದು ಎಷ್ಟಮಟ್ಟಿಗೆ ಎನ್ನುವುದು ತಿಳಿಯುತ್ತದೆ ಎಂದರು. 
ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಮಾತನಾಡಿ ಕೇವಲ ತಮ್ಮ ಇಲಾಖೆಯಷ್ಟೇ ಅಲ್ಲ, ಎಲ್ಲ ಇಲಾಖೆಯಲ್ಲಿಯೂ ಕೂಡಾ ಕಷ್ಟ ಎಂದಾಗ ತಕ್ಷಣ ಸ್ಪಂಧಿಸುವ ಗುಣ ಹೊಂದಿದ ಮಮತಾದೇವಿ ಅವರು ತಡರಾತ್ರಿ ಆಸ್ಪತ್ರೆಯಲ್ಲಿ ಓರ್ವ ಮಹಿಳೆ ಜೀವನ್ಮರಣ ಹೋರಾಟದಲ್ಲಿದ್ದಾಗ ಭೇಟಿ ಕೊಟ್ಟಿದ್ದನ್ನು ಸ್ಮರಿಸಿದರು.                       
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಪ್ರತಿಯೊಂದು ಸವಾಲುಗಳನ್ನು ಸಹ ಸವಾಲಾಗಿ ತೆಗೆದುಕೊಂಡು ಕರ್ತವ್ಯ ನಿರ್ವಹಿಸಿದ ಮಮತಾದೇವಿ ಜಿ.ಎಸ್. ಅವರು ಯಶಸ್ವೀ ಅಧಿಕಾರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಅನೇಕ ಸಂದರ್ಭಗಳಲ್ಲಿ ಅವರ ನಿಲುವು ಕಠಿಣವಾಗಿದ್ದರೂ ಸಹ ಜನಪರವಾಗಿರುತ್ತಿತ್ತು ಎಂದರು. 
ತಹಸೀಲ್ದಾರ್ ತಿಪ್ಪೇಸ್ವಾಮಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಕಂದಾಯ ಇಲಾಖೆಯ ಸಿಬ್ಬಂದಿ ಜಾನ್ ಬಾಷಾ, ಪತ್ರಕರ್ತ ರಾಧಾಕೃಷ್ಣ ಭಟ್ಟ ಮಾತನಾಡಿದರು.  ಶಿಕ್ಷಕ ಶ್ರೀಧರ ಶೇಟ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಗಳು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪ ವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್. ಅವರನ್ನು ಗೌರವಿಸಿದರು.


Share: