ಭಟ್ಕಳ: ತಾಲೂಕಿನ ಗುಳ್ಮಿ ಕ್ರಾಸ್ ಬಳಿಯಲ್ಲಿ ಗಾಂಜಾವನ್ನು ಇಟ್ಟುಕೊಂಡು ಮಾರಾಟ ಮಾಡಲೆತ್ನಿಸುತ್ತಿರುವ ವ್ಯಕ್ತಿಯೋರ್ವನನ್ನು ದಾಳಿ ನಡೆಸಿ ಗಾಂಜಾ ಸಮೇತ ವಶಕ್ಕೆ ಪಡೆದುಕೊಂಡಿರುವ ಘಟನೆ ವರದಿಯಾಗಿದೆ. ಶನಿವಾರ ಬೆಳಿಗ್ಗೆ ೧೧.೩೦ರ ಸುಮಾರಿಗೆ ಖಚಿತ ಮಾಹಿತಿಯ ಮೇರೆಗೆ ಡಿ.ವೈ.ಎಸ್.ಪಿ.ಬೆಳ್ಳಿಯಪ್ಪ ಕೆ.ಯು ನೇತೃತ್ವದಲ್ಲಿ ಗ್ರಾಮೀಣ ಸಬ್ ಇನ್ಸಪೆಕ್ಟರ್ ಭರತ್ಕುಮಾರ್ ವಿ. ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಹೆಬಳೆಯ ಹನೀಫಾಬಾದ್ ನಿವಾಸಿ ಅಟೋ ಚಾಲಕ ಸೈಯದ್ ಮೂಸಾ (೨೨) ಎನ್ನುವನನ್ನು ಬಂಧಿಸಿ ಆತನು ಪ್ಲಾಸ್ಟಿಕ್ ಚೀಲದಲ್ಲಿ ತನ್ನೊಂದಿಗೆ ಇಟ್ಟುಕೊಂಡಿದ್ದ ೨೦೯ ಗ್ರಾಮ್ ಅಜಮಾಸ್ ೨೫೦೦ ರೂಪಾಯಿ ಬೆಲೆಯ ಒಣಗಿದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಈತನ ಮೇಲೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ದೀಪಕ್ ನಾಯ್ಕ, ಹಮೀದ್ ಶೇಖ್, ಮಂಜುನಾಥ ಗೊಂಡ, ನಿಂಗನ ಗೌಡ ಪಾಟೀಲ್, ವೀರಣ್ಣ ಬಳ್ಳಾರಿ, ಚಂದ್ರಕಾತ ಕಂಬಾರ,ವಿನಾಯಕ ನಾಯ್ಕ, ಮಲ್ಲಿಕಾರ್ಜುನ ಉಟಗಿ,ಅಕ್ಷತಕುಮಾರ್,ಸದಾಶಿವ ಹಾಗೂ ಪ್ರಬಾರಿ ಕಂದಾಯ ನಿರೀಕ್ಷಕ ಕೆ ಶಂಭು, ಮುಟ್ಟಳಿ ಗ್ರಾಮ ಲೆಕ್ಕಾಧಿಕಾರಿ ಶಭಾನ ಬಾನು ಮುಂತಾದವರು ಭಾಗವಹಿಸಿದರು.