ಭಟ್ಕಳ: ತಾಲೂಕಿನ ಶಿರಾಲಿ ಅಳೇಕೋಡಿ ಶಾಲೆಯ ಸಮೀಪ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಗರಗರ ಮಂಡಲ ಜುಗಾರಿ ಅಡ್ಡೆಯ ಮೇಲೆ ದಾಳಿ ನಡೆಸಿರುವ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದು, ಓರ್ವ ಪರಾರಿಯಾಗಿರುವ ಘಟನೆ ನಡೆದಿದೆ.
ಆರೋಪಿಗಳನ್ನು ತಾಲೂಕಿನ ಶಿರಾಲಿ ಗುಡಿಹಿತ್ತಲ್ ನಿವಾಸಿ ವಸಂತ ರಾಮಾ ನಾಯ್ಕ (40), ಮುಂಡಳ್ಳಿಯ ದಿನೇಶ ಶ್ರೀನಿವಾಸ ದೇವಡಿಗ (31), ಶಿರಾಲಿ ಅಳೇಕೋಡಿಯ ಗಣಪತಿ ನಾಗಪ್ಪ ಮೊಗೇರ (44), ಅಳೇಕೋಡಿ ಸಣಭಾವಿಯ ಮಂಜುನಾಥ ಸಂಕಯ್ಯ ಮೊಗೇರ (45) ಎಂದು ಗುರುತಿಸಲಾಗಿದ್ದು, ಇವರಿಂದ ರು. 7730 ನಗದು, ಗರಗರ ಮಂಡಲ ಆಟಕ್ಕೆ ಬಳಸಲಾಗಿದ್ದ ಸಲಕರಣೆಗಳನ್ನು ಪೊಲೀಸರು ಜಪ್ತುಪಡಿಸಿಕೊಂಡಿದ್ದಾರೆ. ಶಿರಾಲಿ ತಟ್ಟಿಹಕ್ಕಲ್ ನಿವಾಸಿ ಗೋಪಾಲ ವೆಂಕಟಯ ದೇವಡಿಗ ಸ್ಥಳದಿಂದ ಓಡಿ ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್.ಐ. ಭರತ್ ತನಿಖೆ ಕೈಗೊಂಡಿದ್ದಾರೆ.