ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳದ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯಲ್ಲಿ ೮೨ನೆ ಶಾಲಾ ವಾರ್ಷೀಕೋತ್ಸವ ಸಮಾರಂಭ

ಭಟ್ಕಳದ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯಲ್ಲಿ ೮೨ನೆ ಶಾಲಾ ವಾರ್ಷೀಕೋತ್ಸವ ಸಮಾರಂಭ

Sun, 15 Jan 2023 05:12:41  Office Staff   SO News

 

* ಮುಹಮ್ಮದ್ ಸಾದಿಕ್ ಇಕ್ಕೇರಿಗೆ ಪ್ರತಿಷ್ಟಿತ ವಖಾರ್-ಎ-ಇಸ್ಲಾಮಿಯಾ ಚಿನ್ನದ ಪದಕ

 

ಭಟ್ಕಳ: ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯ (IAUHS) 82ನೇ ವಾರ್ಷಿಕೋತ್ಸವ ಸಮಾರಂಭ ಶನಿವಾರ ಸಂಜೆ ಶಾಲಾ ಮೈದಾನದಲ್ಲಿ ನಡೆಯಿತು.

 

ಶಾಲೆಯ ಅತ್ಯುತ್ತಮ ವಿದ್ಯಾರ್ಥಿಗೆ ಕೊಡಮಾಡುವ ಪ್ರತಿಷ್ಠಿತ ವಖಾರ್-ಎ-ಇಸ್ಲಾಮಿಯಾ -೨೦೨೩ ಚಿನ್ನದ ಪದಕವನ್ನು ಮುಹಮ್ಮದ್ ಸಾದಿಕ್ ಇಕ್ಕೆರಿಗೆ ಪ್ರದಾನಿಸಲಾಯಿತು.

 

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರ ಪ್ರದಾನಿಸಿ ಮಾತನಾಡಿದ ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ್ ಮೊಗೇರ್, ಅಂಜುಮನ್ ಸಂಸ್ಥೆಯು ನೂರು ವರ್ಷಗಳ ಇತಿಹಾಸ ಹೊಂದಿದ್ದು ಸಮಾಜದ ಅಭಿವೃದ್ಧಿಗೆ ತನ್ನದೆ ಆದ ಕೊಡುಗೆಯನ್ನು ನೀಡಿದೆ. ಜಾತಿ, ಮತ, ಬೇಧ ಎನ್ನದೆ ಎಲ್ಲ ಸುಮುದಾಯದವರು ಈ ಸಂಸ್ಥೆಯಿಂದ ಲಾಭವನ್ನು ಪಡೆದುಕೊಂಡಿದ್ದಾರೆ. ಅನೇಕಾರು ಉದ್ಯೋಗಿಗಳಿಗೆ ಅನ್ನವನ್ನು ನೀಡಿದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿ ಎಂದರು. ಅಂಜುಮನ್ ಸಂಸ್ಥೆಯ ವಿದ್ಯಾರ್ಥಿಯಾಗಿ ನಾನು ಕೂಡ ಈ ಸಂಸ್ಥೆಯ ಫಲಾನುಭವಿಯಾಗಿದ್ದು ನನಗೆ ಅಂಜುಮನ್ ಬಗ್ಗೆ ವಿಶೇಷ ಗೌರವವಿದೆ ಎಂದ ಅವರು, ವಿದ್ಯಾರ್ಥಿಗಳು ತಮ್ಮ ಸಮಯವನ್ನು ಹಾಳು ಮಾಡದೆ ಉತ್ತಮ ಭವಿಷ್ಯಕ್ಕಾಗಿ ಕಠಿಣ ಪರಿಶ್ರಮ ಪಡಬೇಕು ಎಂದು ಕರೆ ನೀಡಿದರು.

 

ಶಿಕ್ಷಣ ಕ್ಷೇತ್ರದಲ್ಲಿ ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯವು ಗುಣಮಟ್ಟದ ಶಿಕ್ಷಣ ನೀಡುವುದರಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದ ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಮೌಲಾನ ಅಬ್ದುಲ್ ಅಹದ್ ಫಕರ್ದೆ ನದ್ವಿ, ಶಿಕ್ಷಣ ಸಂಸ್ಥೆಗಳು ಕೇವಲ ಶಿಕ್ಷಣವನ್ನು ನೀಡದೆ ವಿದ್ಯಾರ್ಥಿಗಳನ್ನು ಮನುಷ್ಯರನ್ನಾಗಿಸುವ ಕಾರ್ಖಾನೆಗಳಾಗಬೇಕು ಪದವಿ ಪಡೆದು ಹೊರಬರುವ ಯಂತ್ರಗಳಾಗದೆ ಮನುಷ್ಯತ್ವ ಮಾನವೀಯತೆ ಬೆಳೆಸುವ ಸಮಾಜಕ್ಕೆ ಮಾದರಿಯಾಗಬಲ್ಲ ವ್ಯಕ್ತಿಗಳಾಗಿ ವಿದ್ಯಾರ್ಥಿಗಳು ಹೊರಬರಬೇಕು ಎಂದು ಅವರು ಕರೆ ನೀಡಿದರು.

 

ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಮುಹಮ್ಮದ್ ಸಾದಿಕ್ ಪಿಲ್ಲೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಅಂಜುಮನ್ ಹೆಚ್ಚುವರಿ ಕಾರ್ಯದರ್ಶಿ ಇಸ್ಹಾಖ್ ಶಾಬಂದ್ರಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.  ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯ ಮುಖ್ಯಾಧ್ಯಾಪಕ ಶಬ್ಬಿರ್ ಆಹಮದ್ ದಫೆದಾರ್ ಶಾಲಾ ವರದಿಯನ್ನು ವಾಚಿಸಿದರು. ಅಂಜುಮನ್ ನವಾಯತ್ ಕಾಲೋನಿ ಶಾಖೆಯ ಪ್ರಭಾರಿ ಮುಖ್ಯಾಧ್ಯಾಪಕ ನೂರ್ ಮುಹಮ್ಮದ್ ಅತಿಥಿಗಳನ್ನು ಪರಿಚಯಿಸಿದರು. ಅಂಜುಮನ್ ಪ್ರ.ಕಾ. ಸಿದ್ದೀಖ್ ಇಸ್ಮಾಯಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

ಮುಹಿದ್ದೀನ್ ಅಯಾನ್ ರ ಕುರ್‌ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಮುಹಮ್ಮದ್ ಅರ್ಬಾಝ್ ನಾತ್ ಹಾಡಿದರು. ಮುಹಮ್ಮದ್ ಅನಸ್ ಮತ್ತು ತಂಡದಿಂದ ಶಾಲಾ ಗೀತೆಯನ್ನು ಹಾಡಲಾಯಿತು.


Share: