ಭಟ್ಕಳ: ಭಟ್ಕಳದ ಪ್ರಸಿದ್ಧ ಧಾರ್ಮಿಕ ಮದ್ರಸಾ ಜಾಮಿಯಾ ಇಸ್ಲಾಮಿಯಾದಲ್ಲಿ ಪದವಿ ಮುಗಿಸಿ 130 ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಲು ರವಿವಾರ ರಾತ್ರಿ ಮಂಗ್ಲಾ ಎಕ್ಸ್ಪ್ರೆಸ್ ರೈಲಿನ ಮೂಲಕ ಲಕ್ನೋಗೆ ಪ್ರಯಾಣ ಬೆಳೆಸಿದರು.
ಕೇರಳ ಎರ್ನಾಕುಲಂನಿಂದ ದೆಹಲಿ ಹಜರತ್ ನಿಜಾಮುದ್ದೀನ್ ಗೆ ತೆರಳುವ ಮಂಗಳಾ ಎಕ್ಸಪ್ರೆಸ್ ರೈಲು ರಾತ್ರಿ 12.30ಕ್ಕೆ ಭಟ್ಕಳವನ್ನು ತಲುಪಿತು. ವಿದ್ಯಾರ್ಥಿಗಳನ್ನು ಬೀಳ್ಕೊಡಲು ಭಟ್ಕಳದಿಂದ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಪಾಲಕರು ರೇಲ್ವೇ ನಿಲ್ದಾಣದಲ್ಲಿ ಹಾಜರಿದ್ದರು. ಇದಕ್ಕಾಗಿ 500 ಕ್ಕಿಂತ ಹೆಚ್ಚು ಜನರಿಂದ ರೇಲ್ವೆ ಫ್ಲಾಟ್ ಫಾರ್ಮ್ ಟಿಕೇಟ್ ಖರೀದಿಸಲಾಗಿತ್ತು. ಸದರಿ ರೈಲು ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಉತ್ತರಪ್ರದೇಶದ ಝಾನ್ಸಿಯನ್ನು ತಲುಪಲಿದ್ದು, ಅಲ್ಲಿಂದ 876 ಕಿ ಮೀ. ದೂರದ ನದ್ವಾಗೆ ತೆರಳಲು ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತಿವರ್ಷ 20-25 ವಿದ್ಯಾರ್ಥಿಗಳು ಒಟ್ಟಿಗೆ ಲಕ್ನೋಗೆ ಹೋಗಲು ರೈಲು ಹತ್ತುತ್ತಿದ್ದರೆ ಈ ಬಾರಿ 130 ವಿಧ್ಯಾರ್ಥಿಗಳು ಏಕಕಾಲಕ್ಕೆ ಪರ್ಯಾಣವನ್ನು ನಿಗದಿಪಡಿಸಿಕೊಂಡಿದ್ದಾರೆ. ಕಳೆದ 2 ವರ್ಷಗಳಿಂದ ಕೊರೊನಾ ಕಾರಣದಿಂದ ಆನ್ಲೈನ್ ನಲ್ಲಿಯೇ ವಿದ್ಯಾಭ್ಯಾಸ ಮಾಡಿಕೊಂಡಿದ್ದ ವಿದ್ಯಾರ್ಥಿಗಳು ಇದೀಗ ಕೊರೊನಾ ಆತಂಕದಿಂದ ಮುಕ್ತರಾಗಿ ತರಗತಿಗೆ ಹಾಜರಾಗಲು ಲಕ್ನೋ ಹಾದಿ ಹಿಡಿದಿದ್ದಾರೆ.
ಭಟ್ಕಳ ಜಮಾತುಲ್ ಮುಸ್ಲಿಮೀನ್, ಖಾಜಿ ಮೌಲಾನಾ ಅಬ್ದುಲ್ ರಬ್ ಖತೀಬ್ ನದ್ವಿ, ಡೆಪ್ಯೂಟಿ ಖಾಜಿ ಮೌಲಾನಾ ಅನ್ಸಾರ್ ಖತೀಬ್ ಮದನಿ, ಜಮಾತುಲ್ ಮುಸ್ಲಿಮೀನ್ ಪ್ರಧಾನ ಕಾರ್ಯದರ್ಶಿ ಮೌಲಾನಾ ತಲಹಾ ರುಕನುದ್ದಿನ್ ನದ್ವಿ, ಜಾಮಿಯಾ ಇಸ್ಲಾಮಿಯಾ ಪ್ರಾಚಾರ್ಯ ಮೌಲಾನಾ ಮಕ್ಬೂಲ್ ಕೊಬಟ್ಟೆ ನದ್ವಿ ಮತ್ತಿತರರು ಉಪಸ್ಥಿತರಿದ್ದರು.