ಭಟ್ಕಳ:ತಾಲೂಕಿನ ವಿವಿಧ ಭಾಗದಲ್ಲಿ ಅಪ್ರಾಪ್ತ ಯುವಕರು ಗುಂಪು ಒಂದು ಬೈಕ್ ಮೇಲೆ ಬಂದು ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಮೊಟ್ಟೆಯಿಂದ ಹಲ್ಲೆ ಮಾಡಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ.
ನಿನ್ನೆ ರಾತ್ರಿ 9.30 ಹಾಗೂ 9.45ರ ಅಂದಾಜಿಗೆ ಇಬ್ಬರು ಸಾರ್ವಜನಿಕರ ಮೇಲೆ ಮೊಟ್ಟೆ ಎಸೆದ ಓರ್ವ ಅಪ್ರಾಪ್ತನನ್ನು ಸಾರ್ವಜನಿಕರ ಕೈಯಲ್ಲಿ ಸಿಕ್ಕಿ ಬಿದ್ದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಭಟ್ಕಳದ ಬಂದರು ಪ್ರದೇಶದ ನಿವಾಸಿಗಳಾದ ಸುಮಾರು 17 ವರ್ಷ ಪ್ರಾಯದ 6 ಮಂದಿ ಯುವಕರಿಂದ ಕೃತ್ಯ ನಡೆದಿದ್ದು ಮೂರು ಪ್ರತ್ಯೇಕ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಬಂದು ಭಟ್ಕಳ ಪುರವರ್ಗದ ಮಂಜುನಾಥ್ (29) ಹಾಗೂ ಹನುಮಾನ್ ನಗರದ ಕೃಷ್ಣ (50) ಎಂಬವರ ಮೇಲೆ ಮೊಟ್ಟೆ ಎಸಗಿದ್ದಾರೆ.
ಇದನ್ನು ಗಮನಿಸಿದ ಹಲ್ಲೆಗೊಳಗಾದ ಮಂಜುನಾಥ ಸಹೋದರ ತಕ್ಷಣಕ್ಕೆ ತನ್ನ ಕಾರನ್ನು ತೆಗೆದುಕೊಂಡು ಮೂರು ಬೈಕನ್ನ ಹಿಂಬಾಲಿಸಿದ್ದಾನೆ ನಂತರ ಮಣ್ಕುಳಿಯ ರಾಘವೇಂದ್ರಸ್ವಾಮಿ ಮಠದ ಸಮೀಪ ಒಬ್ಬರು ಹಿಡಿಯಲು ಯಶಸ್ವಿಯಾಗಿದ್ದಾನೆ.
ಮಂಜುನಾಥ್ ಕೂಲಿ ಕೆಲಸ ಮಾಡುತ್ತಿದ್ದರೆ, ಕೃಷ್ಣಾ ರಿಕ್ಷಾ ಚಾಲಕ ಆಗಿದ್ದು ರಾತ್ರಿ 9.30ರ ಅಂದಾಜಿಗೆ ಕೃಷ್ಣಾ ಅವರ ಎದೆಯ ಮೇಲೆ ಮೊಟ್ಟೆ ಬಿಸಾಕಿದ್ದ ಆರೋಪಿಗಳು 9.45ರ ಅಂದಾಜಿಗೆ ಮಂಜುನಾಥ್ ಅವರನ್ನು ಅವಾಚ್ಯವಾಗಿ ನಿಂದಿಸಿ ಕೈ ಹಾಗೂ ಎಡಕಾಲಿನ ತೊಡೆಯ ಮೇಲೆ ಮೊಟ್ಟೆ ಎಸೆದ ಆರೋಪಗಳನ್ನು ಮೂರು ಮಂದಿ ಯುವಕರನ್ನು ಭಟ್ಕಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನಂತರ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿ ಯಾಗಿದ್ದು ಕೆಎಸ್ ಆರ್ಪಿ ತುಕಡಿಯನ್ನು ಕರೆದು ಆಕ್ರೋಶಗೊಂಡ ಸಾರ್ವಜನಿಕರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸ ಪಟ್ಟಿದ್ದಾರೆ.ಪಿಯುಸಿ ಪರೀಕ್ಷೆಯ ಬಳಿಕ ಉಳಿದ ಮೂವರನ್ನು ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ತಾಲೂಕಿನಾದ್ಯಂತ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದ್ದು ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಡಿವೈಎಸ್ಪಿ ಬೆಳ್ಳಿಯಪ್ಪ ತಿಳಿಸಿದ್ದಾರೆ.
ಮೊಟ್ಟೆ ಎಸೆಯುವ ಹಿಂದೆ ಯುವಕರ ಉದ್ದೇಶದ ಬಗ್ಗೆ ಪೊಲೀಸರ ತನಿಖೆಯಲ್ಲಿ ತಿಳಿದುಬರಬೇಕಾಗಿದೆ.