ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳದಲ್ಲಿ ಮುಂದುವರಿದ ಮಳೆಯ ಆರ್ಭಟ:ಜನಜೀವನ ಅಸ್ತವ್ಯವಸ್ಥ

ಭಟ್ಕಳದಲ್ಲಿ ಮುಂದುವರಿದ ಮಳೆಯ ಆರ್ಭಟ:ಜನಜೀವನ ಅಸ್ತವ್ಯವಸ್ಥ

Fri, 08 Jul 2022 06:36:58  Office Staff   SO NEWS

ಭಟ್ಕಳ: ಭಟ್ಕಳದಲ್ಲಿ ಗುರುವಾರವೂ ಮಳೆಯ ಆರ್ಭಟ ಮುಂದುವರಿದಿದ್ದು ಬೆಳಿಗ್ಗೆಯಿಂದ ಬೀಳುತ್ತಿದ್ದ ಮಳೆಯಿಂದಾಗಿ ಜನಜೀವನ ಅಸ್ತವ್ಯವಸ್ಥವಾಗಿದೆ. ಗುರುವಾರ  ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳಲ್ಲಿ 166 ಮಿ.ಮಿ. ಮಳೆಯಾಗಿದ್ದು ಇಲ್ಲಿಯ ತನಕ ಒಟ್ಟೂ  1784.2 ಮಿ.ಮಿ. ಮಳೆಯು ತಾಲೂಕಿನಲ್ಲಿ ಬಂದಿದೆ.
ಬುಧವಾರ ಮತ್ತು ಗುರುವಾರದಂದು ತಾಲೂಕಿನಲ್ಲಿ ಅನೇಕ ಸಾರ್ವಜನಿಕ ಅಸ್ತಿ-ಪಾಸ್ತಿಗಳಿಗೆ ಹಾನಿಯಾಗಿದ್ದು ಅವುಗಳಲ್ಲಿ ತೆಂಗಿನಗುಂಡಿ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ್ ಕುಸಿದು ಅಪಾರ ಲುಕ್ಸಾನು ಸಂಭವಿಸಿದೆ. ಹೆಬಳೆ ಗ್ರಾಮದ ಹೊನ್ನೆಗದ್ದೆ ಮಜಿರೆಯ ಮಾದೇವ ದುರ್ಗಪ್ಪ ನಾಯ್ಕ ಎನ್ನುವವರ ಮನೆಯ ಮೇಲೆ ಅಡಿಕೆ ಮರವೊಂದು ಮುರಿದು ಬಿದ್ದು ವಾಸ್ತವ್ಯದ ಮನೆಗೆ ಹಾನಿಯಾಗಿದೆ. ಶಿರಾಲಿ-1 ಗ್ರಾಮ ಗೌರಿ ನಾಗಪ್ಪ ನಾಯ್ಕ ಎನ್ನುವವರ ಮನೆಯ ಅಡುಗೆ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದ್ದು ಮನೆಯಲ್ಲಿದ್ದವರು ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ. ಮುಟ್ಟಳ್ಳಿ ಪಂಚಾಯತ್ ವ್ಯಾಪ್ತಿಯ ಬಿಳಲಖಂಡ ಮಜಿರೆಯಲ್ಲಿ ಬಿಬಿ ಸಾರಾ ಅಮೀರ್ ಹಂಮ್ಜಾ ಎನ್ನುವವರ ಮನೆಯ ಮೇಲೆ ಬುಧವಾರ ತಡರಾತ್ರಿ ಹಲಸಿನ ಮರವೊಂದು ಬಿದ್ದು ಹಾನಿಯಾಗಿದ್ದು ಮನೆಯಲ್ಲಿದ್ದವರು ಸುರಕ್ಷಿತವಾಗಿ ಪಾರಾಗಿದ್ದಾರೆ ಎನ್ನಲಾಗಿದೆ.  ಬುಧವಾರ ರಾತ್ರಿ ಬೀಸಿದ ಭಾರೀ ಗಾಳಿಗೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅನೇಕ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು ಹೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಸರಿಪಡಿಸಲು ಮಳೆಯಲ್ಲಿಯೇ ಕೆಲಸ ಮಾಡುತ್ತಿರುವುದು ಕಂಡು ಬಂತು.  ಅನೇಕ ಗ್ರಾಮೀಣ ರಸ್ತೆಗಳು ಕಿತ್ತು ಹೋಗಿದ್ದು ಮಳೆಯ ನೀರು ಹೆಚ್ಚಿನ ಕಡೆಗಳಲ್ಲಿ ರಸ್ತೆಯ ಮೇಲೆಯೇ ಹರಿಯುವುದರಿಂದ ರಸ್ತೆ ಹೊಂಡಗಳು ಬಿದ್ದು ಜನ, ವಾಹನ ಸಂಚಾರಕ್ಕೆ ತೀರಾ ತೊಂದರೆಯಾಗಿದೆ.
ಕಳೆದ ಒಂದು ವಾರದಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಅನೇಕ ತಗ್ಗು ಪ್ರದೇಶಗಳು ಜಲಾವೃತವಾಗಿದ್ದರೆ, ವೆಂಕಟಾಪುರ, ಚೌಥನಿ ಹೊಳೆಯು ಅಪಾಯದ ಅಂಚಿನಲ್ಲಿಯೇ ಹರಿಯುತ್ತಿದ್ದು ನದಿ ದಡದಲ್ಲಿರುವ ಜನತೆ ಆತಂಕದಲ್ಲಿಯೇ ದಿನ ಕಳೆಯುವಂತಾಗಿದೆ. ಈಗಾಗಲೇ ಗದ್ದೆ ನಾಟಿ ಮಾಡಿದ ರೈತರು ಇದೇ ರೀತಿಯಾಗಿ ಮಳೆಯು ಮುಂದುವರಿದರೆ ತಾವು ನಾಟಿ ಮಾಡಿದ ಸಸಿಗಳೂ ಕೊಳೆತು ಹೋಗು ಸಾಧ್ಯತೆ ಇದೆ ಎನ್ನುವ ಚಿಂತೆಯಲ್ಲಿದ್ದಾರೆ. ಮಳೆಯು ಕಳೆದ ಒಂದು ವಾರದಿಂದ ಒಂದೇ ಸವನೆ ಸುರಿಯುತ್ತಿರುವುದರಿಂದ ಹಾಗೂ ಹವಾಮಾನ ಇಲಾಖೆಯ ಸೂಚನೆಗಳನ್ನು ಅನುಸರಿಸಿ ಜಿಲ್ಲಾಡಳಿತ ಶುಕ್ರವಾರವೂ ಕೂಡಾ ಶಾಲಾ-ಕಾಲೇಜುಗಳಿಗೆ ರಜೆ ಸಾರಿದೆ


Share: