ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳದಲ್ಲಿ ಭಾರೀ ಮಳೆ؛ ನೀರಿನಲ್ಲಿ ಮುಳುಗಿದ ಗ್ರಾಮಗಳು. ಶನಿವಾರವೂ ರೆಡ್ ಅಲರ್ಟ್. ಶಾಲೆಗಳಿಗೆ ರಜೆ ಘೋಷಣೆ

ಭಟ್ಕಳದಲ್ಲಿ ಭಾರೀ ಮಳೆ؛ ನೀರಿನಲ್ಲಿ ಮುಳುಗಿದ ಗ್ರಾಮಗಳು. ಶನಿವಾರವೂ ರೆಡ್ ಅಲರ್ಟ್. ಶಾಲೆಗಳಿಗೆ ರಜೆ ಘೋಷಣೆ

Sat, 09 Jul 2022 13:16:28  Office Staff   SO News

ಭಟ್ಕಳ : ತಾಲೂಕಿನಲ್ಲಿ ಗುರುವಾರದಿಂದ ಸತತವಾಗಿ ಸುರಿಯುತ್ತಿದ್ದ ಮಳೆ ತೀವ್ರಗೊಂಡ ಪರಿಣಾಮ ‌  ಅರ್ಧ ಭಟ್ಕಳ ತಾಲೂಕು  ನೀರಿನಲ್ಲಿ ಮುಳುಗಿ ಹೋಗಿದೆ.

ಶುಕ್ರವಾರ ರಾತ್ರಿ ಭಾರೀ ಮಳೆಯ ನಂತರ ರಾತ್ರಿ ಮೂರು ಗಂಟೆಯಿಂದ ನದಿಗಳಲ್ಲಿ  ನೀರು ಸಂಗ್ರಹವಾಗತೊಡಗಿತು, ಇದರೊಂದಿಗೆ ನದಿಗಳು ಉಕ್ಕಿ ಹರಿದು ನದಿ ತೀರದಲ್ಲಿ ವಾಸಿಸುವ ಜನರಿಗೆ ರಾತ್ರಿಯ ನಿದ್ದೆ ಇಲ್ಲದಂತಾಯಿತು.

ಮುಂಡಳ್ಳಿ, ಚೌಥನಿ, ಮುಠಲ್ಲಿ , ತಲಾಂದ್, ಗುಳ್ಮಿ, ಬೇಂಗ್ರೆ, ಶಿರಾಲಿ, ಬೈಲೂರು, ಮುರುಡೇಶ್ವರ್, ಮಾವಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿದ್ದರಿಂದ ಜನರು ಶುಕ್ರವಾರ ರಾತ್ರಿಯಿಡೀ ಜಾಗರಣೆ ಮಾಡಬೇಕಾಯಿತು.

ಚೌತನಿ ನದಿಯ ದಡದಲ್ಲಿ ವಾಸಿಸುವ ಜನರಿಗೆ ರಾತ್ರಿಯು ತುಂಬಾ ಭಯದಿಂದ ಕಳೆದರು. ನದಿ ನೀರು ಮನೆಗಳಿಗೆ ನುಗ್ಗುತ್ತಿದ್ದಂತೆ ನೀರಿನ ಮಟ್ಟ ಏರತೊಡಗಿತು. ಆದರೆ ಬೆಳಿಗ್ಗೆ ಒಂಬತ್ತು ಗಂಟೆಯ ನಂತರ ನೀರು ಕಡಿಮೆಯಾಗಿದ್ದರಿಂದ, ಜನರು‌ ನಿಟ್ಟುಸಿರು ಬಿಟ್ಟರು.

ಮನೆಗಳಿಗೆ ನೀರು ನುಗ್ಗಿ ಆಹಾರ ಪದಾರ್ಥಗಳು, ಬಟ್ಟೆ, ಪೀಠೋಪಕರಣ ಸೇರಿದಂತೆ ಹಲವು ವಸ್ತುಗಳು ಹಾಳಾಗಿವೆ.

ಭಟ್ಕಳದಲ್ಲಿ ದಾಖಲೆ ಮಳೆ: ಭಟ್ಕಳದಲ್ಲಿ ಗುರುವಾರ ಬೆಳಗ್ಗೆ 8 ಗಂಟೆಯಿಂದ ಶುಕ್ರವಾರ ಬೆಳಗ್ಗೆ 8 ಗಂಟೆಯವರೆಗೆ ದಾಖಲೆ ಮಳೆ ಸುರಿದಿದ್ದು, ಈ ಬಾರಿ ಮುಂಗಾರು ಅತಿ ಹೆಚ್ಚು ಮಳೆಯಾಗಿದೆ. ಹವಾಮಾನ ಇಲಾಖೆ ಪ್ರಕಾರ ಈ 24 ಗಂಟೆಗಳಲ್ಲಿ ಭಟ್ಕಳದಲ್ಲಿ 218 ಮಿ.ಮೀ ಮಳೆ ದಾಖಲಾಗಿದೆ.

ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದ ಜನ: ಭಾರೀ ಮಳೆಯಿಂದಾಗಿ ಕಡಲತೀರ ಮತ್ತು ನದಿ ತೀರದಲ್ಲಿ ವಾಸಿಸುವ ಅನೇಕರು ಮನೆಗಳನ್ನು ತೊರೆದು ಸಂಬಂಧಿಕರೊಂದಿಗೆ ಆಶ್ರಯ ಪಡೆದರು.

ಕೊಚ್ಚಿ ಹೋದ ಗದ್ದೆ  : ತಾಲೂಕಿನಲ್ಲಿ ಕೃಷಿ ಮಾಡುತ್ತಿದ್ದ ಎಲ್ಲ ಪ್ರದೇಶಗಳಲ್ಲೂ ನೀರು ಶೇಖರಣೆಗೊಂಡು ಬೆಳೆ ಸಂಪೂರ್ಣ ಹಾಳಾಗಿದ್ದು, ಬಿತ್ತಿದ ಬೆಳೆಗಳು ಕೊಚ್ಚಿ ಹೋಗಿವೆ. ಬೆಂಗ್ರೆಯ ಶಶಿಹಿತ್ಲು ನಲ್ಲಿ ಗದ್ದೆಗಳು ಜಲಾವೃತಗೊಂಡಿದ್ದರಿಂದ ರೈತರು ವಿಶೇಷವಾಗಿ ಹಾನಿಗೊಳಗಾಗಿದ್ದಾರೆ. ನದಿಗಳಾಗಿ ಮಾರ್ಪಟ್ಟಿರುವ ತಮ್ಮ ಹೊಲಗಳು ಯಾವಾಗ, ಹೇಗೆ ನೀರು ಪಾಲಾಗುವುದೋ ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ಚೌತನಿ ಮತ್ತು ಮುಂಡಳ್ಳಿ ಸಂಪರ್ಕ ಕಡಿತ : ಗುರುವಾರ ಮತ್ತು ಶುಕ್ರವಾರದ ನಡುವೆ ರಾತ್ರಿ ಭಾರೀ ಮಳೆಯು ಚೌತನಿ ಮತ್ತು ಮುಂಡಳ್ಳಿ ನಡುವೆ ಹಲವು ಗಂಟೆಗಳ ಕಾಲ ಸಂಪರ್ಕ  ಕಡಿತಗೊಂಡಿತ್ತು. ಹತ್ತಿರದ ನದಿಯ ನೀರಿನ ಮಟ್ಟವು ತುಂಬಾ ಹೆಚ್ಚಾದ ಕಾರಣ ಸೇತುವೆಯ ಮೇಲಿನ ರಸ್ತೆಯಿಂದ ನೀರು ಹರಿಯಲು ಪ್ರಾರಂಭಿಸಿತು ಮತ್ತು ನೀರಿನ ಹರಿವು ತುಂಬಾ ವೇಗವಾಗಿತ್ತು, ಇದರಿಂದಾಗಿ ಜನರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಆದರೆ ಬೆಳಗ್ಗೆ ಒಂಬತ್ತು ಗಂಟೆ ನಂತರ ನೀರು ಇಳಿಮುಖವಾಗಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಕುದುರೆ ಬೀರಪ್ಪ ದೇವಸ್ಥಾನಕ್ಕೂ ನೀರು: ಚೌತನಿ ನದಿಯಲ್ಲಿ ಪ್ರವಾಹ ಉಂಟಾಗಿ ನದಿಯ ಒಂದು ಬದಿಯ ಮನೆಗಳಿಗೆ ನೀರು ನುಗ್ಗಿದರೆ, ಮುಂಡಳ್ಳಿ ರಸ್ತೆಯ ಕುದುರೆ ಬೀರಪ್ಪ ದೇವಸ್ಥಾನಕ್ಕೆ ನೀರು ನುಗ್ಗಿದ್ದು, ದೇವಸ್ಥಾನದ ಹಿಂಭಾಗದ ಮನೆಗಳಿಗೂ ನೀರು ನುಗ್ಗಿದೆ. ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು, ಮುಂಡಳ್ಳಿಗೆ ಹೋಗುವ ಮಾರ್ಗದಲ್ಲಿ ನೀರು ಕೂಡ ತುಂಬಿರುವುದರಿಂದ ಜನರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಕಷ್ಟವಾಯಿತು.

ಗುಳ್ಮಿಯಲ್ಲಿ ಮನೆಗಳೊಳಗೆ ನೀರು: ರಾತ್ರಿ ಸುರಿದ ಭಾರಿ ಮಳೆಗೆ ಬಿಲಾಲ್ ಖಂಡ್ ಹಾಗೂ ಅಬುಜರ್ ಕಾಲೋನಿಯಲ್ಲಿ ಹಲವೆಡೆ ಮನೆಗಳ ಒಳಗೆ ನೀರು ನುಗ್ಗಿದ್ದರಿಂದ ಜನ ರಾತ್ರಿಯಿಡೀ ನಿದ್ದೆ ಮಾಡದಂತಾಗಿದೆ. ಇಲ್ಲಿರುವ ಮನೆಗಳು ಎತ್ತರದಲ್ಲಿ ಮತ್ತು ಗುಡ್ಡದ ಮೇಲಿದ್ದರೂ ಗುಡ್ಡಗಳಿಂದ ನೀರು ಮನೆಗಳಿಗೆ ನುಗ್ಗಿದೆ.

ಬ್ಯಾಂಕ್ ಸೇವೆ ಸ್ಥಗಿತ: ಧಾರಾಕಾರ ಮಳೆಯಿಂದಾಗಿ ಶಿರಾಲಿಯ ಕೆನರಾ ಬ್ಯಾಂಕ್ ಶಾಖೆಗೂ ನೀರು ನುಗ್ಗಿ ಶುಕ್ರವಾರದಂದು ಬ್ಯಾಂಕ್ ಕಾರ್ಯಾಚರಣೆ ಹಾಗೂ ಸೇವೆ ಸ್ಥಗಿತಗೊಂಡಿತ್ತು.

ಶಿರಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಯಿತು. ಸಂಜೆ ವೇಳೆಗೆ ಭಟ್ಕಳ ರಂಗಿನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ಸಂಚಾರ ವ್ಯವಸ್ಥೆಗೂ ತೊಂದರೆಯಾಯಿತು.

ಸರ್ಪನಕಟ್ಟೆಯಲ್ಲಿ ಜಾರಿ ಬಿದ್ದ ಬಂಡೆ : ಭಾರೀ ಮಳೆಗೆ ಸರ್ಪನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂಡೆಯೊಂದು ಜಾರಿ ರಸ್ತೆ ಬದಿ ಬಿದ್ದಿದ್ದು, ಹೆದ್ದಾರಿಯಲ್ಲಿ ಕೆಲಸ ಮಾಡುತ್ತಿದ್ದ ಐಆರ್ ಬಿ ಕಂಪನಿ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ, ಬಂಡೆಯನ್ನು ತೆರವುಗೊಳಿಸಿದರು. ಮಳೆ ಇದೇ ರೀತಿ ಮುಂದುವರಿದರೆ ಬೆಟ್ಟದಿಂದ ರಸ್ತೆಯ ಮೇಲೆ ಭೂಕುಸಿತವಾಗಿ  ಸಂಚಾರಕ್ಕೆ ತೊಂದರೆಯಾಗಲಿದೆ.

ಶಿರಾಲಿಯಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ: ಶಿರಾಲಿಯ ಮಟ್ಟಿಗುಂಡಿ ಬಡಾವಣೆಯಲ್ಲಿರುವ ಸಣಪ್ಪ ನಾಯ್ಕ ಎಂಬವರ ಮನೆ ಮೇಲೆ ಮರ ಬಿದ್ದು ಮನೆ ಭಾಗಶಃ ಹಾನಿಯಾಗಿದೆ. ತಹಸಿಲ್ದಾರರು  ಹಾನಿಗೊಳಗಾದ ಮನೆಗೆ ಆಗಮಿಸಿ ಹಾನಿಯನ್ನು ಪರಿಶೀಲಿಸಿದ್ದಾರೆ.

ಶನಿವಾರ ಭಾರಿ ಮಳೆ ಮುನ್ಸೂಚನೆ: ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ಶುಕ್ರವಾರ ಹಾಗೂ ಶನಿವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.ಮೂರು ಜಿಲ್ಲೆಗಳಲ್ಲಿ ಇಲಾಖೆ ಮತ್ತೊಮ್ಮೆ ರೆಡ್ ಅಲರ್ಟ್ ಘೋಷಿಸಿದ್ದು, ಜನರಿಗೆ ಎಚ್ಚರಿಕೆ ನೀಡಿದ್ದು ಶಾಲೆಗಳಿಗೆ ರಜೆ ನೀಡಲಾಗಿದೆ.

ಅಲೆಗಳ ತೀವ್ರ ಅಬ್ಬರ: ಭಾರೀ ಮಳೆಯಿಂದಾಗಿ ಅಲೆಗಳ ಅಬ್ಬರ ಕಂಡುಬಂದಿದ್ದು, ಅಲೆಗಳು ತೀರಾ ವೇಗವಾಗಿ ದಡಕ್ಕೆ ಅಪ್ಪಳಿಸುತ್ತಿರುವುದು ಕಂಡುಬಂದಿದೆ.ಮತ್ತು ಉಬ್ಬರವಿಳಿತದ ಕಾರಣ ಸಮುದ್ರತೀರ ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡಿದ್ದೇವೆ ಎನ್ನುತ್ತಾರೆ ಬೀಚ್ ನಿವಾಸಿಗಳು. ಈಗ ಮಳೆ ಮುಂದುವರಿಯುವ ಮುನ್ಸೂಚನೆಯಿದ್ದು, ಶನಿವಾರ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಕಡಲತೀರ ಸೇರಿದಂತೆ ನದಿ ತೀರದಲ್ಲಿ ವಾಸಿಸುವವರು ಶುಕ್ರವಾರ ಮತ್ತು ಶನಿವಾರ ರಾತ್ರಿಯ ನಡುವೆ ಜಾಗರಣೆ ಮಾಡಬೇಕಾದ ಅನಿವಾರ್ಯತೆ ಇದೆ.


Share: