ಹುಣಸೂರು:ರಸ್ತೆಯಲ್ಲಿ ಚಾಲಕನೊಬ್ಬನ ನಿಯಂತ್ರಣ ತಪ್ಪಿ ಬೊಲೆರೊ ವಾಹನ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ 6 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಘಟನೆ ಹುಣಸೂರಿನ ಕಲ್ ಬೆಟ್ಟದಲ್ಲಿ ಸಂಭವಿಸಿದೆ.
ಸಾವನ್ನಪ್ಪಿದವರೆಲ್ಲ ಕೊಡಗು ಮೂಲದವರೆಂದು ತಿಳಿದು ಬಂದಿದೆ.
ಹುಣಸೂರಿನಿಂದ ಮದುವೆ ಮುಗಿಸಿ ಪಾಲಿ ಬೆಟ್ಟಕ್ಕೆ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಢಿಕ್ಕಿ ಹೊಡೆದ ರಭಸಕ್ಕೆ ಆರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಯಲಾಗಿದೆ.
ಅಪಘಾತದ ತೀವ್ರತೆಗೆ ವಾಹನ ನಜ್ಜುಗುಜ್ಜಾಗಿದೆ ಎಂದು ಎನ್ನಲಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ರವಿಪ್ರಸಾದ್ ಹಾಗೂ ಇನ್ಸ್ ಪೆಕ್ಟರ್ ಚಿಕ್ಕಸ್ವಾಮಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶವಗಳನ್ನು ಹುಣಸೂರು ಆಸ್ಪತ್ರೆಗೆ ಸಾಗಿಸಲಾಗಿದೆ.
ಹುಣಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.