ಉಡುಪಿ : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಒತ್ತಿನೆಣೆ ಪ್ರದೇಶದ ಕಾಡಿನಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದ್ದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಕಾರಿನ ಒಳಗಡೆ ಅಸ್ಥಿ ಪಂಜರದ ರೀತಿಯಲ್ಲಿ ಶವ ಪತ್ತೆಯಾಗಿದೆ. ಕಾರು ಹಾಗೂ ಶವ ಸಂಪೂರ್ಣ ಸುಟ್ಟು ಕರಕಲಾಗಿದೆ. ಇದು ಮೇಲ್ನೋಟಕ್ಕೆ ಹಳದಿ ಬಣ್ಣದ ಕಾರು ಎನ್ನಲಾಗಿದ್ದು ಕಾರಿನ ನಂಬರ್ ಪ್ಲೇಟ್ ಕೂಡ ಕಾಣಿಸುತ್ತಿಲ್ಲ. ಕಾರಿನ ಒಳಗಡೆ ಓರ್ವ ವ್ಯಕ್ತಿಯ ಅಸ್ಥಿ ಪಂಜರ ಪತ್ತೆಯಾಗಿದೆ.
ಯಾರಾದರೂ ಕೊಲೆ ಮಾಡಿ ಶವವನ್ನು ಕಾರಿನೊಳಗಿಟ್ಟು ಬೆಂಕಿ ಹಚ್ಚಿರಬಹುದೇ,. ಅಥವಾ ಅಪಘಾತಕ್ಕೆ ಕಾರು ಬೆಂಕಿಗೆ ಆಹುತಿಯಾಗಿ ಅದರೊಳಗಿದ್ದ ಮನುಷ್ಯ ಸತ್ತಿರಬಹುದೇ ಎಂಬುದಕ್ಕೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ, ಮತ್ತು ಪಿ.ಎಸ್.ಐ ಪವನ್ ನಾಯಕ್ ತಂಡ ಆಗಮಿಸಿದ್ದು ಪರಿಶೀಲನೆ ನಡೆಸಲಾಗ್ತಿದೆ. ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತಪಟ್ಟ ವ್ಯಕ್ತಿಯ ಪತ್ತೆ ಹಚ್ಚುವಿಕೆ ಕಾರ್ಯಕ್ಕೆ ಪೊಲೀಸರು ಚುರುಕು ನೀಡಿದ್ದಾರೆ.