ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬೆಂಗಳೂರು: ಮೋದಿ ರೋಡ್ ಶೋಗೆ ಜನಸಾಮಾನ್ಯರ ಆಕ್ರೋಶ

ಬೆಂಗಳೂರು: ಮೋದಿ ರೋಡ್ ಶೋಗೆ ಜನಸಾಮಾನ್ಯರ ಆಕ್ರೋಶ

Sun, 07 May 2023 14:30:33  Office Staff   Vb

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಮತದಾರರ ಮನಗೆಲ್ಲಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ನಡೆಸಿದ 26 ಕಿ.ಮೀ.ಗಳ ರೋಡ್ ಶೋಗೆ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೆ.ಪಿ.ನಗರದ ಸೋಮೇಶ್ವರ ಸಭಾ ಭವನದ ಬಳಿಯಿಂದ ಆರಂಭವಾದ ರೋಡ್ ಶೋ ಮಲ್ಲೇಶ್ವರಂ 18ನೇ ಅಡ್ಡ ರಸ್ತೆಯ ವರೆಗೆ ನಡೆಯಿತು. ಜಯನಗರದ ಬಳಿ ರೋಡ್ ಶೋಗಾಗಿ ನಗರದ ವಿವಿಧೆಡೆಗಳಲ್ಲಿ ರಸ್ತೆ ಸಂಪೂರ್ಣ ಮುಚ್ಚಿದ್ದರಿಂದ ಆ್ಯಂಬುಲೆನ್ಸ್‌ವೊಂದು ಸಂಚಾರ ದಟ್ಟಣೆಯಲ್ಲಿ ಸಿಕ್ಕಿ ಹಾಕಿಕೊಂಡಿತು.

ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು 34 ಪ್ರಮುಖ ರಸ್ತೆಗಳಲ್ಲಿ ಸಂಚಾರವನ್ನು ಕೈಗೊಳ್ಳದಂತೆ ಎಚ್ಚರಿಕೆ ನೀಡಿದ್ದರು. ಕೆಲವೆಡೆ ಬೆಳಗ್ಗೆ 8 ಗಂಟೆಯಿಂದಲೇ ಸಂಚಾರ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ರಸ್ತೆ ಮುಚ್ಚಿದ್ದರಿಂದ ಕಚೇರಿಗಳಿಗೆ ತೆರಳುತ್ತಿದ್ದವರು ಪೊಲೀಸರ ಜೊತೆ ವಾಗ್ವಾದ ನಡೆಸುತ್ತಿದ್ದದ್ದು ಕಂಡು ಬಂತು.

ಯಾರೋ ಬಂದರೆ 'ಜನರಿಗೆ ಯಾಕೆ ತೊಂದರೆ ಕೊಡುತ್ತೀರಾ. ರಸ್ತೆಗಳನ್ನು ಮುಚ್ಚಿದರೆ ನಾವು ಹೇಗೆ ನಮ್ಮ ಕೆಲಸಗಳಿಗೆ ಹೋಗಬೇಕು. ನೀವಾಗಿಯೆ ಬ್ಯಾರಿಕೇಡ್ ತೆಗೆಯುತ್ತೀರಾ ಅಥವಾ ನಾವೇ ಕಿತ್ತು ಹಾಕಿ ಹೋಗಬೇಕಾ?' ಎಂದು ಸಾರ್ವಜನಿಕರು ಪೊಲೀಸರ ಮೇಲೆ ಗರಂ ಆದರು. ಈ ವೇಳೆ ಕೆಲವು ಕಡೆ ಸಾರ್ವಜನಿಕರು ಸಂಚರಿಸಲು ಅವಕಾಶ ಕಲ್ಪಿಸಲಾಯಿತು.

ರೋಡ್ ಶೋ ಮಾರ್ಗದಲ್ಲಿ ಬಿಜೆಪಿ ಕಾರ್ಯಕರ್ತರ ಮಧ್ಯೆಯೆ ಬೆಂಗಳೂರು ದಕ್ಷಿಣ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಶ್ರೀ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿಗಳನ್ನು ನಡೆಸಿದರು. ಶಿವಕುಮಾರ ಸ್ವಾಮೀಜಿ ನಿಧನ ಹೊಂದಿದಾಗ ಬಂದಿಲ್ಲ, ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಜನ ಸಂಕಷ್ಟದಲ್ಲಿದ್ದಾಗ ಬಂದಿಲ್ಲ, ಮಂಗಳೂರಿನಲ್ಲಿ ಭೂ ಕುಸಿತವಾದಾಗ ಬಂದಿಲ್ಲ, ರಾಜ್ಯ ಬಿಜೆಪಿ ಸರಕಾರ 40 ಪರ್ಸೆಂಟ್ ಲೂಟಿ ಮಾಡುತ್ತಿದ್ದಾಗ ಬಂದಿಲ್ಲ. ಈಗ ಚುನಾವಣೆಗಾಗಿ ಬಂದಿದ್ದಾರೆ ಎಂದು ಕಿಡಿಕಾರಿದರು.

ಕೆಲಸ ಮಾಡಿ ಮತ ಕೇಳಲಿ, ಕನ್ನಡಿಗರ ಸಂಕಷ್ಟಕ್ಕೆ ಸ್ಪಂದಿಸಿ ಒಂದು ಟ್ವಿಟ್ ಮಾಡಿಲ್ಲ, ಒಂದು ಸುದ್ದಿಗೋಷ್ಠಿ ಮಾಡಿಲ್ಲ. ಮನ್ ಕಿ ಬಾತ್ ಹೇಳಿಕೊಂಡು ಕೂತಿದ್ದಾರೆ. ರೋಡ್ ಶೋ ಮಾಡಿ ಮತ ಪಡೆಯಬೇಕಾ? ನಾಟಕ ಮಾಡಬೇಡಿ, ಕೆಲಸ ಮಾಡಿ ಮತ ಕೇಳಿ ಎಂದು ಜಯಶ್ರೀ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಯಶ್ರೀ ಅವರ ಸುತ್ತಲೂ ಬಿಜೆಪಿ ಕಾರ್ಯಕರ್ತರ ಗುಂಪು ಸೇರಿಕೊಂಡು 'ಮೋದಿ, ಮೋದಿ', ಜೈ ಶ್ರೀ ರಾಮ್, ಜೈ ಹನುಮಾನ್ ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ಆದರೂ, ವಿಚಲಿತರಾಗದ ಜಯಶ್ರೀ ನಾನು ಹಿಂದೂ ಎಂದು ತಿರುಗೇಟು ನೀಡಿದರು.

ರಸ್ತೆಗಳು ಮುಚ್ಚಿದ್ದಾರೆ. ಪರ್ಯಾಯ ಮಾರ್ಗ ಸೂಚಿಸಿಲ್ಲ. ನಾವು ಕಚೇರಿಗಳಿಗೆ ಹೋಗಲು ಆಗುತ್ತಿಲ್ಲ. ಇವರು ಬಂದ್ ರೋಡ್ ಶೋ ಮಾಡಿ ಹೋಗುತ್ತಾರೆ. ಚುನಾವಣೆ ಮುಗಿದ ಬಳಿಕ ನಮ್ಮ ಕಡೆ ತಿರುಗಿಯೂ ನೋಡುವುದಿಲ್ಲ. ನಮ್ಮ ಕಷ್ಟಗಳನ್ನು ಯಾರ ಬಳಿ ಹೋಗಿ ಹೇಳೋಣ. ಆಸ್ಪತ್ರೆಗಳಿಗೆ, ಕಚೇರಿಗಳಿಗೆ ಹೋಗುವವರು ಇರುತ್ತಾರೆ ಅವರಿಗೆಲ್ಲ ಎಷ್ಟು ಕಷ್ಟ ಆಗುತ್ತಿದೆ ನೋಡಿ ಎಂದು ಮಹಿಳೆಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಬೆಳಗ್ಗೆ 8 ಗಂಟೆಯಿಂದ ಕಾಯುತ್ತಿದ್ದೇವೆ. ಪ್ರಧಾನಿ ಬರೋದು 11 ಗಂಟೆಗೆ ಅಂತೆ. ಅವರು ಬರುವ ಅರ್ಧ ಗಂಟೆ ಮುಂಚಿತವಾಗಿ ರಸ್ತೆ ಮುಚ್ಚಿದರೆ ಸಾಕು. ಕಾಲೇಜು, ಆಸ್ಪತ್ರೆಗೆ ಹೋಗುವವರು ಏನು ಮಾಡಬೇಕು. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಆಗುತ್ತಿಲ್ಲ. ಚುನಾವಣಾ ಪ್ರಚಾರವೆ ಮಾಡಬೇಕಾದರೆ ಯಾವುದಾದರೂ ದೊಡ್ಡ ಮೈದಾನಗಳಲ್ಲಿ ಸಭೆ, ಸಮಾರಂಭಗಳನ್ನು ಮಾಡಿ ಭಾಷಣ ಮಾಡಲಿ ಎಂದು ಸಾರ್ವಜನಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ಬಂದು ರೋಡ್ ಶೋ ಮಾಡುವ ಅಗತ್ಯವೇನಿದೆ? ನಾನು ವಿದ್ಯಾವಂತನೇ, ಆದರೆ ಇಂತಹವರ ವರ್ತನೆ ನೋಡಿದರೆ ಇವರಿಗೆ ಯಾಕೆ ಮತ ನೀಡಬೇಕು ಎಂದು ಆಲೋಚನೆ ಮಾಡುವಂತಾಗಿದೆ. ನ್ಯಾಷನಲ್ ಕಾಲೇಜು ಮೈದಾನ ಅಥವಾ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೋಗಿ ಸಭೆಗಳನ್ನು ಮಾಡಿಕೊಳ್ಳಲಿ ಎಂದು ಅವರು ಹೇಳಿದರು.

1947ರಿಂದ ಈವರೆಗೆ ಯಾವ ಪ್ರಧಾನಿಯೂ ಇಷ್ಟೊಂದು ಬಾರಿ ಚುನಾವಣೆಗಾಗಿ ಬೆಂಗಳೂರಿಗೆ ಬಂದಿದ್ದನ್ನು ನಾವು ಕಂಡಿಲ್ಲ. ಅವರು ಒಂದು ಬಾರಿ ರಾಜ್ಯಕ್ಕೆ ಬಂದು ಹೋದರೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ಅದನ್ನೆಲ್ಲ ಎಲ್ಲಿಂದ ಭರಿಸುತ್ತಾರೆ. ಯಾವ ಪ್ರಧಾನಿ ಮಾಡದಷ್ಟು ಖರ್ಚು ಮೋದಿ ಮಾಡುತ್ತಿದ್ದಾರೆ ಎಂದು ಹಿರಿಯ ನಾಗರಿಕರೊಬ್ಬರು ಆಕ್ರೋಶವ್ಯಕ್ತಪಡಿಸಿದರು.


Share: