ಭಟ್ಕಳ:೧೧, ಭಟ್ಕಳದಲ್ಲಿ ಬಹುದಿನಗಳಿಂದ ಬೇಡಿಕೆಯಲ್ಲಿರುವ ಉಪನೊಂದಾಣಿ ಕಛೇರಿಯ ವ್ಯವಸ್ಥೆಯನ್ನು ಆದಷ್ಟು ಬೇಗನೆ ಮಾಡಲಾಗುವುದು ಎಂದು ಶಾಸಕ ಜೆ.ಡಿ. ನಾಯ್ಕ ಹೇಳಿದರು. ಅವರು ಇಂದು ತಾಲೂಕು ಪಂಚಾಯತ್ ಕಟ್ಟಡದಲ್ಲಿರುವ ಶಾಸಕರ ಕಾರ್ಯಲಯದಲ್ಲಿ ನ್ಯಾಯವಾದಿಗಳ ಸಂಘದ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ ಈ ವಿಷಯ ತಿಳಿಸಿದರು.
ಭಟ್ಕಳ ತಾಲೂಕಿನಲ್ಲಿ ಉಪನೊಂದಾಣಿ(ಸಬ್ ರಜಿಸ್ಟ್ರಾರ್) ಕಛೇರಿಯ ಬೇಡಿಕೆ ಬಹುದಿನಗಳಿಂದಲೆ ಇದ್ದು ಇಲ್ಲಿ ಸ್ಥಳ ಹಾಗೂ ಮತ್ತಿತರ ನೊಂದಣೆಯನ್ನು ಮಾಡಿಕೊಳ್ಳಬೇಕಾದರೆ ಜನರು ಹೊನ್ನಾವರಕ್ಕೆ ಹೋಗಬೆಕಾಗುತ್ತಿತ್ತು. ಇದರಿಂದಾಗಿ ಇಲ್ಲಿನ ಜನರು ಬಹಳ ತೊಂದರೆಯನ್ನು ಅನುಭವಿಸುತ್ತಿದ್ದರು. ಹೊನ್ನಾವರ ಕಛೇರಿಯಲ್ಲಿ ಅತಿಹೆಚ್ಚು ನೊಂದಾಣೆಗಳು ಭಟ್ಕಳದಿಂದಲೆ ಬರುತ್ತಿವೆ. ಆದ್ದರಿಂದ ಭಟ್ಕಳದಲ್ಲಿ ಒಂದು ಉಪನೊಂದಾಣಿ ಕಛೇರಿಯನ್ನು ಆರಂಭಿಸಲಾಗುವುದು ದೂರದರ್ಶನ ಕೇಂದ್ರದ ಬಳಿ ಇದಕ್ಕಾಗಿ ಸ್ಥಳವನ್ನು ಗುರುತಿಸಲಾಗಿದ್ದು ಕೂಡಲೆ ಕಾಮಗಾರಿಗೆ ಚಾಲನೆಯನ್ನು ನೀಡುವುದಾಗಿ ತಿಳಿಸಿದ ಅವರು ಇಲ್ಲಿ ಇ-ಸ್ಟ್ಯಾಂಪಿಂಗ್ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಸರಕಾರವನ್ನು ಕೇಳಿಕೊಳ್ಳಲಾಗಿದೆ ಎಂದರು.