ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಚರ್ಚ್ ಧಾಳಿ - ಮತೀಯ ಭಾವನೆ ಕೆರಳಿಸುವ ಉದ್ದೇಶವಿಲ್ಲ, ಹುಂಡಿ ಕದಿಯಲು ಬಂದವರ ಕೃತ್ಯ - ವಿ.ಎಸ್. ಆಚಾರ್ಯ

ಬೆಂಗಳೂರು: ಚರ್ಚ್ ಧಾಳಿ - ಮತೀಯ ಭಾವನೆ ಕೆರಳಿಸುವ ಉದ್ದೇಶವಿಲ್ಲ, ಹುಂಡಿ ಕದಿಯಲು ಬಂದವರ ಕೃತ್ಯ - ವಿ.ಎಸ್. ಆಚಾರ್ಯ

Wed, 27 Jan 2010 18:15:00  Office Staff   S.O. News Service
ಬೆಂಗಳೂರು, ಜನವರಿ 27: ಮೈಸೂರು ಹಾಗೂ ಮುರಡೇಶ್ವರದಲ್ಲಿ ನಡೆದ ಚರ್ಚ್ ಮೇಲಿನ ದಾಳಿಯ ಹಿಂದೆ ಮತೀಯ ಭಾವನೆಗಳನ್ನು ಕರೆಳಿಸುವ ಉದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿರುವ ಗೃಹ ಸಚಿವ ಡಾ: ವಿ.ಎಸ್. ಆಚಾರ್ಯ, ಹುಂಡಿಯಲ್ಲಿನ ಹಣ ಕದಿಯಲು ನಡೆಸಿರುವ ದುಷ್ಕೃತ್ಯ ಇದಾಗಿದೆ ಎಂದು ಹೇಳಿದ್ದಾರೆ. 

ಇಂತಹ ದಾಳಿಗಳು ಕೇವಲ ಚರ್ಚ್‌ಗಳ ಮೇಲಷ್ಟೇ ಅಲ್ಲದೇ ಹಿಂದೂ ದೇವಾಲಯಗಳ ಮೇಲೂ ನಡೆಯುತ್ತವೆ. ಹುಂಡಿಹಣಕ್ಕಾಗಿ ಇಂತಹ ದಾಳಿಗಳನ್ನು ನಡೆಸಲಾಗುತ್ತಿದೆ. ಕೋಮುಭಾವನೆಯನ್ನು ಕೆರಳಿಸುವ ಉದ್ದೇಶದಿಂದಂತೂ ಇಂತಹ ದಾಳಿ ನಡೆದಿಲ್ಲ. ದಾಳಿಯ ಹಿಂದೆ ಲಾಭದ ಉದ್ದೇಶವಿದೆ ಎಂದು ಸ್ಪಷ್ಟಪಡಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಅಪ್ಪಟ ಕಿಡಿಗೇಡಿಗಳ ಕೃತ್ಯ. ಆದರೆ ಇಂತಹ ಪ್ರಕರಣಗಳನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ವ್ಯವಸ್ಧಿತ ಪಿತೂರಿ ನಡೆಸಲಾಗುತ್ತಿದೆ. ಇಂತಹ ಘಟನೆಗಳಿಂದ ರಾಜಕೀಯ ದುರ್ಲಾಭದ ವಾಸನೆ ಕಾಣುತ್ತಿದೆ ಎಂದು ಡಾ: ಆಚಾರ್ಯ ತಿಳಿಸಿದರು. 

ರಾಜ್ಯದಲ್ಲಿ ೧.೨೫ ಕೋಟಿ ಮನೆಗಳಿವೆ. ೪೩ ಸಾವಿರ ದೇವಾಲಯಗಳಿವೆ. ತಲಾ ಮೂರು ಸಾವಿರ ಚರ್ಚ್‌ಗಳು, ಮಸೀದಿಗಳಿವೆ. ಇವುಗಳ ರಕ್ಷಣೆಗೆ ಮಾತ್ರ ಕೇವಲ ೯೦ ಸಾವಿರ ಪೊಲೀಸರು ಮಾತ್ರ ಇದ್ದಾರೆ. 

ಪರಿಸ್ಧಿತಿ ಹೀಗಿರುವಾಗ ಆಯಾ ಪೂಜಾ ಮಂದಿರಗಳ ರಕ್ಷಣೆಗೆ ಆಯಾ ದೇವಸ್ತಾನಗಳೇ ಜವಬ್ದಾರಿ ಹೊರಬೇಕು. ಹಿಂದೆಯೂ ಕೂಡ ಈ ವಿಚಾರವನ್ನು ಪ್ರಸ್ತಾಪಿಸಲಾಗಿತ್ತು. ಈಗಲೂ ಪುನ: ಇದನ್ನೇ ಹೇಳುತ್ತಿದ್ದು, ಪೂಜಾ ಮಂದಿರಗಳಿಗೆ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳುವುದು ಒಳ್ಳೆಯದು ಎಂದರು. 

ಗಣರಾಜ್ಯೋತದ ಮುನ್ನಾ ದಿನದಂದು ಚರ್ಚ್‌ಗಳ ಮೇಲೆ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಆತಂಕಗೊಂಡು ದಾಳಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಸರ್ಕಾರ ಗೌರವ ನೀಡಲಿದೆ. ಕ್ರೈಸ್ತ ಪ್ರಾರ್ಥನಾ ಮಂದಿಗರಗಳಿಗೆ ಸೂಕ್ತ ಭದ್ರತೆ ಕಲ್ಪಿಸುವುದಲ್ಲದೇ ಮತೀಯ ಭಾವನೆಗಳನ್ನು ಕೆರಳಿಸಲು ಅವಕಾಶ ಕೊಡುವುದಿಲ್ಲ. 

ರಾಜ್ಯಪಾಲರನ್ನು ಶೀಘ್ರದಲ್ಲೇ ಭೇಟಿಯಾಗಿ ಮಾತುಕತೆ ನಡೆಸುವುದಲ್ಲದೇ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸುತ್ತೇವೆ. ಸಂವಿಧಾನದ ಮುಖ್ಯಸ್ಧರಾಗಿ ಅವರು ತಮ್ಮ ಕರ್ತವ್ಯ ಮಾಡಿದ್ದಾರೆ. ಇದರಲ್ಲಿ ಯಾವುದೇ ವಿವಾದವಿಲ್ಲ ಎಂದರು. 

ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರು ಚರ್ಚ್ ಮೇಲೆ ನಡೆದಿರುವ ದಾಳಿಯ ರೂವಾರಿಗಳ ಹೆಸರು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಅವರು ಯಾರು ಎಂದು ಪೊಲೀಸರು ಪತ್ತೆ ಹಚ್ಚುವ ಕೆಲಸದಲ್ಲಿ ನಿರತರಾಗಿದ್ದಾರೆ. ದೇಶಪಾಂಡೆ ಅವರಿಗೆ ದುಷ್ಕರ್ಮಿಗಳ ಹೆಸರು ಗೊತ್ತಿದ್ದರೆ ಅವರು ಬಹಿರಂಗಪಡಿಸಲು ಸರ್ಕಾರ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತದೆ ಎಂದು ವ್ಯಂಗ್ಯವಾಗಿ ನುಡಿದರು. 

ಎರಡು ಚರ್ಚ್‌ಗಳ ಮೇಲೆ ನಡೆದಿರುವ ದಾಳಿಯ ಬಗ್ಗೆಯೂ ಕೂಡ ನ್ಯಾಯಮೂರ್ತಿ ಸೋಮಶೇಖರ ಆಯೋಗ ತನಿಖೆ ನಡೆಸಬಹುದು. ಆಯೋಗಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಈಗ ಆಯೋಗದ ಅವಧಿ ಒಂದೂವರೆ ವರ್ಷವಾಗಿದೆ. ಮತ್ತೆ ಆಯೋಗದ ಅವಧಿಯನ್ನು ವಿಸ್ತರಿಸುವ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ನುಡಿದರು. 

ಗೋಹತ್ಯಾ ನಿಷೇಧ ಕಾಯ್ದೆಯನ್ನು ಅನುಷ್ಠಾನಕ್ಕೆ ತರಬಾರದು ಎಂದು ಮೇಲ್ಮನೆ ಪ್ರತಿಪಕ್ಷದ ನಾಯಕಿ ಮೋಟಮ್ಮ ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಯಿಸಿದ ಅವರು, ಸಂವಿಧಾನದ ೪೮ ನೇ ಪರಿಚ್ಚೇದಡಿ ಗೋಹತ್ಯ ಮಾಡಬಾರದು ಎಂದು ಹೇಳಲಾಗಿದೆ. 

ಸಂವಿಧಾನ ರಚಿಸಿದ ಡಾ: ಅಂಬೇಡ್ಕರ್ ಅವರೇ ಹಾಲು ಕೊಡುವ ಹಾಗೂ ಬರಡು ಜಾನುವಾರಗಳನ್ನು ರಕ್ಷಿಸಬೇಕೆಂದು ಹೇಳಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಗೋಹತ್ಯಾ ನಿಷೇಧಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಈಗಾಗಲೇ ಜಮ್ಮು - ಕಾಶ್ಮೀರ, ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಯಲ್ಲಿದೆ. ರಾಜ್ಯದಲ್ಲೂ ಸರ್ವಸಮ್ಮತ ಅಭಿಪ್ರಾಯಗಳ ಆಧಾರದ ಮೇಲೆ ಬರುವ ಅಧಿವೇಶದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಹೇಳಿದರು. 

ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರುವ ಕುರಿತಾದ ಪ್ರಸ್ತಾಪ ಸದ್ಯಕ್ಕಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. 

ಕೇರಳದಲ್ಲಿ ಎಲ್ಲಾ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಮಿಷನರೇಟ್ ಕಚೇರಿಗಳನ್ನು ಸ್ಧಾಪಿಸಲಾಗಿದೆ. ರಾಜ್ಯದಲ್ಲೂ ಕೂಡ ಇಂತಹ ವ್ಯವಸ್ಧೆ ತರುವ ಕುರಿತು ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಆದರೆ ಗುಲ್ಬರ್ಗಾ, ಬಳ್ಳಾರಿಯಲ್ಲಿ ಇಂತಹ ವ್ಯವಸ್ಧೆ ಜಾರಿಗೆ ತರುವ ಕುರಿತು ವರದಿ ನೀಡುವಂತೆ ಕಾನೂನು ಸುವ್ಯವಸ್ಧೆ ಐಜಿಪಿ ಎ. ಆರ್ ಇನ್ಪೆಂಟ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ಡಾ: ಆಚಾರ್ಯ ತಿಳಿಸಿದರು. 


Share: