ಮಂಗಳೂರು : ಸುರತ್ಕಲ್ ನಲ್ಲಿ ನಡೆದ ಫಾಝಿಲ್ನ ಹತ್ಯೆಯೂ ಸಂಘಪರಿವಾರ ಮತ್ತು ಬಿಜೆಪಿ ಸರ್ಕಾರದ ಜನಪ್ರತಿನಿಧಿಗಳ ಪ್ರಚೋದನಕಾರಿ ಹೇಳಿಕೆಗಳು ಹಾಗೂ ಕನ್ನಡ ಮಾಧ್ಯಮಗಳ ಕೋಮು ವೈಷಮ್ಯ ತುಂಬಿದ ವರದಿಗಳೇ ಈ ಹತ್ಯೆಗೆ ಕಾರಣವಾಗಿದೆಯೆಂದು ಎಸ್ಡಿಪಿಐ ಆರೋಪಿಸಿದೆ.
ಬೆಳ್ಳಾರೆಯ ಕಳಂಜದಲ್ಲಿ ಸಂಘಪರಿವಾರ ಕಾರ್ಯಕರ್ತರು ಮಸೂದ್ ನನ್ನು ಹತ್ಯೆ ನಡೆಸಿದ ನಂತರ ಘಟನಾವಳಿಗಳಿಗೆ ಸರ್ಕಾರವೇ ನೇರ ಹೊಣೆ. ಪ್ರವೀಣ್ ಕುಟುಂಬವನ್ನು ಬೇಟಿಯಾಗಲು ಬಂದು ಪರಿಹಾರ ಘೋಷಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಒಂದುವರೆ ತಿಂಗಳ ಹಿಂದೆ ಮತ್ತು ಒಂದು ವಾರದ ಹಿಂದೆ ಸಂಘಪರಿವಾರ ಗೂಂಡಗಳಿಂದ ಹತ್ಯೆಗೊಳಗಾದ ಪೆರ್ಲಂಪಾಡಿ ಚರಣ್ ರಾಜ್ ಮತ್ತು ಕಳಂಜ ಮಸೂದ್ ಮನೆಗೆ ಬೇಟಿ ನೀಡದೆ ರಾಜ ಧರ್ಮಕ್ಕೆ ದ್ರೋಹ ವೆಸಗಿದ್ದಾರೆ.
ಇದೀಗ ಮುಖ್ಯಮಂತ್ರಿ ಜಿಲ್ಲೆಯಲ್ಲಿ ಇರುವಾಗಲೇ ಸಂಘಪರಿವಾರದ ಗೂಂಡಗಳು ಸುಳ್ಯ ತಾಲೂಕಿನ ಹಲವೆಡೆ ಮುಸ್ಲಿಮರ ಅಂಗಡಿ-ಮುಂಗಟ್ಟುಗಳನ್ನು ಧ್ವಂಸಗೈದಿದ್ದಾರೆ ಹಾಗೂ ಸುರತ್ಕಲ್ ನಲ್ಲಿ ಫಾಝಿಲ್ ಎಂಬ ಮುಸ್ಲಿಂ ಯುವಕನನ್ನು ಯಾವುದೇ ಕಾರಣವಿಲ್ಲದೆ ಹತ್ಯೆಯನ್ನು ನಡೆಸಿದ್ದಾರೆ.ಮುಖ್ಯಮಂತ್ರಿ ಯವರು ದ.ಕ ಜಿಲ್ಲೆಗೆ ಆಗಮಿಸಿರುವುದರ ಉದ್ದೇಶ ಪ್ರವೀಣ್ ಹತ್ಯೆಯಿಂದ ಪಕ್ಷದ ವರ್ಚಸ್ಸಿಗಾದ ಡ್ಯಾಮೇಜ್ ನ್ನು ನಿಯಂತ್ರಿಸಿ ಕಾರ್ಯಕರ್ತರನ್ನು ಸಮಾಧಾನ ಪಡಿಸಲೇ ಹೊರತು ಜಿಲ್ಲೆಯ ಶಾಂತಿ, ಸುವ್ಯವಸ್ಥೆಯ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಅಲ್ಲ ಎಂಬುದು ಸ್ಪಷ್ಟ. ಹಾಗೂ ಕಳೆದ ಒಂದು ವಾರದಿಂದ ನಿರಂತರವಾಗಿ ಅಲ್ಲಲ್ಲಿ ಗಲಭೆ ನಡೆಸುತ್ತಿದ್ದರು ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಸಂಪೂರ್ಣವಾಗಿ ವೈಫಲ್ಯ ಕಂಡಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
ರಾಜ್ಯ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಹಲವು ನಾಯಕರ ಕೋಮು ವೈಷಮ್ಯ ತುಂಬಿದ ಬೇಜಾವಬ್ದಾರಿ ಹೇಳಿಕೆಗಳನ್ನು ಗಮನಿಸುವಾಗ ಸರ್ಕಾರದ ಹಲವಾರು ಹಗರಣಗಳ ದಿಕ್ಕು ತಪ್ಪಿಸಲು ಸರ್ಕಾರವೇ ಸಂಘಪರಿವಾರದೊಂದಿಗೆ ಸೇರಿಕೊಂಡು ಈ ರೀತಿಯ ಗಲಭೆಗಳನ್ನು ಹಾಗೂ ಹತ್ಯೆಗಳನ್ನು ನಡೆಸುತ್ತಿದೆ ಎಂಬ ಅನುಮಾನ ಮೂಡುತ್ತಿದೆ.
ಸುರತ್ಕಲ್ ನಲ್ಲಿ ಫಾಝಿಲ್ ನ್ನು ಹತ್ಯೆ ನಡೆಸಿದ ಕೃತ್ಯದ ಹಿಂದೆ ಯಾರೆಲ್ಲಾ ಭಾಗಿಯಾಗಿದ್ದಾರೋ ಅವರನ್ನು ಹಾಗೂ ಕೊಲೆ ನಡೆದ ಕೂಡಲೇ ಸಂಘಪರಿವಾರದAತೆ ಸುಳ್ಳು ಮಾಹಿತಿ ವರದಿ ಮಾಡಿ ಜನರಿಗೆ ತಪ್ಪು ಸಂದೇಶ ರವಾನೆ ಮಾಡಿದ ಟಿವಿ ಮಾಧ್ಯಮಗಳ ಮೇಲೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್ ಡಿ. ಪಿ ಐ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿತು.
ಇದೇ ವೇಳೆ ಸರಕಾರ ಬೆಳ್ಳಾರೆಯ ಮಸೂದ್ ಹಾಗೂ ಸುರತ್ಕಲ್ ಫಾಝಿಲ್ ಮನೆಗೆ ಮುಖ್ಯಮಂತ್ರಿ ಗಳು ಹಾಗೂ ಸಚಿವರು ಬೇಟಿಯಾಗಿ ಕನಿಷ್ಠ ತಲಾ ಇಪ್ಪತ್ತೈದು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಮತ್ತು ಎರಡೂ ಕುಟುಂಬದ ತಲಾ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಬೇಕು ಎಂದು ನಾಯಕರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಅಥಾವುಲ್ಲಾ ಜೋಕಟ್ಟೆ (ರಾಜ್ಯ ಸಮಿತಿ ಸದಸ್ಯರು), ಜಲೀಲ್ ಕೃಷ್ಣಾಪುರ (ರಾಜ್ಯ ಸಮಿತಿ ಸದಸ್ಯರು), ಅಬೂಬಕ್ಕರ್ ಕುಳಾಯಿ (ಜಿಲ್ಲಾಧ್ಯಕ್ಷರು ದಕ್ಷಿಣ ಕನ್ನಡ), ಅನ್ವರ್ ಸಾದಾತ್ (ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಕ್ಷಿಣ ಕನ್ನಡ) ಉಪಸ್ಥಿತರಿದ್ದರು