ಭಟ್ಕಳ: ದೇಶಾದ್ಯಂತ ಕೇಂದ್ರ ಸರಕಾರದ ಸೂಚನೆಯ ಮೇರೆಗೆ ರಾಷ್ಟ್ರೀಯ ತನಿಖಾ ದಳ ಯಾವುದೇ ಸಕಾರಣವಿಲ್ಲದೇ ಪಾಪುಲ ಫ್ರೆಂಟ್ ಆಫ್ ಇಂಡಿಯಾ (ಪಿಎಫ್ಐ) ದ ನಾಯಕರನ್ನು ಬಂಧಿಸುತ್ತಿದ್ದು, ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಭಟ್ಕಳದಲ್ಲಿ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇಲ್ಲಿನ ಪ್ರವಾಸಿ ಮಂದಿರ ಆವರಣದ ಎದುರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸೇರಿದ ಪಿಎಫ್ಐ ಕಾರ್ಯಕರ್ತರು ಕೇಂದ್ರ ಸರಕಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಘೋಷಣೆಗಳನ್ನು ಕೂಗಿದರು.
ತಡ ರಾತ್ರಿ 2,3 ಗಂಟೆಗೆ ಪಿಎಫ್ಐ ನಾಯಕರ ಮನೆಗೆ ನುಗ್ಗಿ ಬಂಧಿಸಲಾಗುತ್ತಿದ್ದು, ಇದು ಕಾನೂನು ಬಾಹೀರವಾಗಿದೆ.ಪಿಎಫ್ಐ ನಾಯಕರನ್ನು ಬಿಡುಗಡೆಗೊಳಿಸದೇ ಇದ್ದಲ್ಲಿ ಜಿಲ್ಲಾವಾರು ಪ್ರತಿಭಟನೆಯನ್ನು ಹಮ್ಮಿಕೊಳ್ಳವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಒಂದು ಹಂತದಲ್ಲಿ ರಸ್ತೆ ತಡೆಗೆ ಮುಂದಾಗಿದ್ದ ಪಿಎಫ್ಐ ಕಾರ್ಯಕರ್ತರನ್ನು ಪೊಲೀಸರು ತಡೆದರು. ಪಿಎಫ್ ಐ ಪ್ರಮುಖರಾದ ಎ ಕರೀಮ್,ಮಕ್ಸೂದ,ಸಲ್ಮಾನ್, ಝಮಾನ್ ಮೊದಲಾದವರು ಉಪಸ್ಥಿತರಿದ್ದರು.