ಭಟ್ಕಳ : ಸಮಾಜದ ಉನ್ನತಿಗೆ ಪತ್ರಿಕೆಗಳ ಪಾತ್ರ ಬಹು ದೊಡ್ಡದು. ಪತ್ರಕರ್ತರು ತಮ್ಮದೇ ಆದ ಜವಾಬ್ದಾರಿ ಹೊಂದಿದವರಾಗಿದ್ದಾರೆ. ಪತ್ರಿಕೆಗಳನ್ನು ಓದುವುದರಿಂದ ನೆಮ್ಮದಿ, ಸಮಾಧಾನ ಸಿಗುತ್ತದೆ ಎಂದು ಖ್ಯಾತ ಚುಟುಕು ಮಾನಾಸುತ ಶಂಭು ನಾರಾಯಣ ಹೆಗಡೆ ಹೇಳಿದರು.
ಅವರು ಶನಿವಾರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ಮುರ್ಡೇಶ್ವರದ ಮಾನಾಸ್ಮೃತಿಯಲ್ಲಿ ನೀಡಲ್ಪಟ್ಟ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಪತ್ರಿಕೆಗಳನ್ನು ಕೊಂಡು ಓದಿದಾಗ ಮಾತ್ರ ಅರ್ಥಪೂರ್ಣ ಪತ್ರಿಕಾ ದಿನಾಚರಣೆಯಾಗುತ್ತದೆ ಎಂದ ಅವರು, ಮೊಬೈಲ್ನಲ್ಲಿ ಪತ್ರಿಕೆಗಳನ್ನು ಎಷ್ಟೇ ಓದಿದರೂ ಸಮಾಧಾನ ತರುವುದಿಲ್ಲ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುರ್ಡೇಶ್ವರ ಯಕ್ಷರಕ್ಷೆಯ ಅಧ್ಯಕ್ಷ ಡಾ. ಐ ಆರ್ ಭಟ್ಟ, ಕಾರ್ಯನಿರತ ಪತ್ರಕರ್ತರ ಸಂಘ ಸಮಾಜದ ಗಣ್ಯರನ್ನು ಗೌರವಿಸುವುದರ ಮೂಲಕ ಉತ್ತಮ ಕೆಲಸ ಮಾಡುತ್ತಿದೆ. ಮಾನಾಸುತ ಶಂಭು ಹೆಗಡೆಯವರ ಬರವಣಿಗೆ ಮತ್ತಷ್ಟು ಹೆಚ್ಚಾಗಬೇಕು ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಪತ್ರಕರ್ತರು ನಿತ್ಯ ಸಾಹಿತಿಗಳಾಗಿದ್ದಾರೆ. ಪತ್ರಕರ್ತರಿಗೆ ಜವಾಬ್ದಾರಿಯುತ ವರದಿ ಮಾಡುವ ಹೊಣೆಗಾರಿಕೆ ಇದೆ ಎಂದರು. ಲಯನ್ಸ ಕ್ಲಬ್ ಅಧ್ಯಕ್ಷ ಎಂ ವಿ ಹೆಗಡೆ ಮಾತನಾಡಿ, ಸಮಾಜದ ಗಣ್ಯರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ಕಾರ್ಯ. ಪತ್ರಕರ್ತರ ಸನ್ಮಾನದಿಂದ ಗೌರವ ಹೆಚ್ಚಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ, ಭಟ್ಕಳ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆಯ ಪ್ರಯುಕ್ತ ವರ್ಷಂಪ್ರತಿ ಸಮಾಜದ ಗಣ್ಯರೊಬ್ಬರನ್ನು ಸನ್ಮಾನಿಸುವ ಕಾರ್ಯ ಮಾಡಲಾಗುತ್ತಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದರು. ಜಿಲ್ಲಾ ಸಂಘದ ಉಪಾಧ್ಯಕ್ಷ ಭವಾನಿಶಂಕರ ನಾಯ್ಕ ಮಾತನಾಡಿದರು. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ ಆರ್ ಮಾನ್ವಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಂಘದ ತಾಲ್ಲೂಕು ಉಪಾಧ್ಯಕ್ಷ ಮೋಹನ ನಾಯ್ಕ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ತಾ.ಕಾ.ನಿ.ಪತ್ರಕರ್ತ ಸಂಘದ ಮಾಜಿ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ್, ಪ್ರಮುಖರಾದ ಎಸ್ಎಸ್ ಕಾಮತ್, ಎಂ ಪಿ ಭಂಡಾರಿ, ಹವ್ಯಕ ನೌಕರರ ಸಂಘದ ಅಧ್ಯಕ್ಷ ಎಂ ವಿ ಹೆಗಡೆ,ಈಶ್ವರ ದೊಡ್ಮನೆ, ಕೆ ಬಿ ಹೆಗಡೆ, ಡಾ. ಹರಿಪ್ರಸಾದ ಕಿಣಿ ಮುಂತಾದವರಿದ್ದರು.