ಭಟ್ಕಳ: ಕಳೆದ ಶುಕ್ರವಾರ ಭಟ್ಕಳ ತಾಲೂಕಿನ ಹಾಡುವಳ್ಳಿಯಲ್ಲಿ ನಡೆದ ನಾಲ್ವರ ಭೀಕರ ಕೊಲೆ ಘಟನೆ ಸಮಾಜಕ್ಕೆ ಆದ ನಷ್ಟ ಎಂದು ಪಶ್ಚಿಮ ವಲಯ ಐಜಿಪಿ ಡಾ.ಚಂದ್ರಗುಪ್ತ ಹೇಳಿದ್ದಾರೆ.
ಅವರು ಭಟ್ಕಳಕ್ಕೆ ಆಗಮಿಸಿ ಹತ್ಯೆಗೊಳಗಾದ ಕುಟುಂಬ ಸದಸ್ಯರೊಂದಿಗೆ ಚರ್ಚೆ ನಡೆಸಿದ. ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದರು. ವೈಯಕ್ತಿಕ ಜಗಳ ವಿಕೋಪಕ್ಕೆ ಹೋಗಿ ಭೀಕರ ಘಟನೆ ಸಂಭವಿಸಿದೆ. ಇದು ಯಾವಾಗಲೂ, ಎಲ್ಲಿಯೂ ನಡೆಯಲೇ ಬಾರದು, ಹಾಡುವಳ್ಳಿ ಕೊಲೆ ಘಟನೆಯಿಂದ ಪುಟ್ಟ ಮಕ್ಕಳು ಅನಾಥರಾಗಿದ್ದು, ಎಲ್ಲರಿಗೂ ನೋವು ತಂದಿದೆ ಎಂದರು. ಎರಡು ಕುಟುಂಬಗಳ ನಡುವೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಜಗಳ ನಡೆದು, ಸುತ್ತಮುತ್ತಲಿನವರು, ಸಂಬಂಧಿಕರು ಜಗಳ ಬಿಡಿಸಲು ಪ್ರಯತ್ನ ಪಟ್ಟಿದ್ದಾರೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಪ್ರಕರಣ ಪೊಲೀಸ್ ಠಾಣೆಗೆ ಬಂದಿದ್ದು, ಎರಡು ಕಡೆಯವರನ್ನು ವಿಚಾರಣೆ ನಡೆಸಿ, ಬುದ್ದಿ ಹೇಳಿ ಕಳುಹಿಸಲಾಗಿದೆ. ಕೊಲೆಗೆ ಇದೇ ಕಾರಣ ಎಂದು ಈಗಲೇ ಹೇಳಲು ಸಾಧ್ಯ ಇಲ್ಲ. 3-4 ತಿಂಗಳಿನಿಂದ ನಡೆಯುತ್ತಿದ್ದ ಆಸ್ತಿ ವಿವಾದ ಇಲ್ಲಿಯವರೆಗೂ ಬಂದಿರುವ ಸಾಧ್ಯತೆ ಇದೆ. ಆ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ. ಇದು ಪೂರ್ವ ನಿಯೋಜಿತ ಕೃತ್ಯವೋ, ಅಲ್ಲವೋ ಎನ್ನುವುದು ತನಿಖೆಯಿಂದ ತಿಳಿದು ಬರಲಿದೆ. ಕೊಲೆಯಲ್ಲಿ ಎಷ್ಟು ಜನ ಭಾಗಿಯಾಗಿದ್ದಾರೆ ಎನ್ನುವುದರ ಬಗ್ಗೆಯೂ ತನಿಖೆ ನಡೆಸಿ ಪತ್ತೆ ಹಚ್ಚಲಿದ್ದೇವೆ. ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಂತಾ ಲಯಕ್ಕೆ ಚಾರ್ಜಶೀಟ್ ಸಲ್ಲಿಸಲಾಗುವುದು ಎಂದು ವಿವರಿಸಿದರು. ಸಮಾಜದಲ್ಲಿ ಇಂತಹ ಕುಕೃತ್ಯವನ್ನು ತಡೆಯಲು ಪೊಲೀಸ್ ಬೀಟ್ ಪದ್ಧತಿಯಲ್ಲಿ ಹೆಚ್ಚಿನ ಒತ್ತು ನೀಡುತ್ತಿದ್ದೇವೆ.
ಎಂದು ಹೇಳಿದರು.