ಧಾರವಾಡ : ಜಲ ಸಂಪನ್ಮೂಲ ಇಲಾಖೆಯ ವಾಲ್ಮಿ ಸಂಸ್ಥೆಗೆ ಭೇಟಿ ನೀಡಿ ಹೊಸದಾಗಿ ನೇಮಕಗೊಂಡ ಅಭಿಯಂತರರ ತರಬೇತಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಯುವ ಅಭಿಯಂತರರು ನೀರಾವರಿ ಇಲಾಖೆ ರಾಯಬಾರಿಗಳಾಗಬೇಕು ಎಂದು ಜಲ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಕೃಷ್ಣಮೂರ್ತಿ.ಬಿ. ಕುಲಕರ್ಣಿ ಅವರು ಹೇಳಿದರು.
ಜಲ ಸಂಪನ್ಮೂಲ ಇಲಾಖೆಯಲ್ಲಿ ಹೊಸದಾಗಿ ನೇಮಕಗೊಂಡ ಸುಮಾರು 1 ಸಾವಿರ ಅಭಿಯಂತರರಿಗೆ ತರಬೇತಿ ನೀಡಬೇಕಾಗಿದೆ. ನಮ್ಮ ತಲೆಮಾರಿನ ಕಾರ್ಯನಿರ್ವಹಣೆ ಆರಂಭದ ದಿನಗಳಲ್ಲಿ ಈ ರೀತಿಯ ತರಬೇತಿಗಳಿಗೆ ಅವಕಾಶಗಳಿರಲಿಲ್ಲ. ಇದೀಗ ಇಲಾಖೆಯ ಅಭಿಯಂತರರ ಸಾಮಥ್ರ್ಯ ವರ್ಧನೆಗೆ ಸಾಕಷ್ಟು ಒತ್ತು ನೀಡುತ್ತಿದೆ. ಪ್ರಸ್ತುತ ಇಲಾಖೆಯಿಂದ ಅಭಿಯಂತರರಿಗೆ ತರಬೇತಿಗೆ ಅವಕಾಶ ಪಡೆದ ನೀವೆ ಸುದೈವಿಗಳು. ಜಲ ಸಂಪನ್ಮೂಲ ಇಲಾಖೆಯ ಉದ್ದೇಶ ರೈತರ ಕಲ್ಯಾಣ. ತರಬೇತಿ ನಂತರ ಕ್ಷೇತ್ರ ಮಟ್ಟದಲ್ಲಿ ಅಭಿಯಂತರರು ರೈತರೊಂದಿಗೆ ಉತ್ತಮ ಸಂಬಂಧ ಹೊಂದಿ ಸಹಕಾರದಿಂದ ಕಾರ್ಯನಿರ್ವಹಿಸಬೇಕು. ವಾಲ್ಮಿ ಸಂಸ್ಥೆಯ ಆವರಣದಲ್ಲಿ ಅಳವಡಿಸಿದ ಸೂಕ್ಷ್ಮ ನೀರಾವರಿ ಪ್ರಾತ್ಯಕ್ಷಿಕೆ ವೀಕ್ಷಣೆ ಕೈಕೊಂಡರು.
ರೈತರು ಮತ್ತು ಅಭಿಯಂತರರು ಪ್ರಾತ್ಯಕ್ಷಿಕೆ ಸದುಪಯೋಗ ಪಡೆದುಕೊಳ್ಳಬೇಕು. ರಾಜ್ಯದಲ್ಲಿ ಅನೇಕ ಸೂಕ್ಷ್ಮ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಗಳ ಯಶಸ್ಸಿಗೆ ಅಭಿಯಂತರರ ಪಾತ್ರ ಮುಖ್ಯವಾಗಿದೆ ಎಂದರು.
ವಾಲ್ಮಿ ಸಂಸ್ಥೆಯ ನಿರ್ದೇಶಕರಾದ ಡಾ. ರಾಜೇಂದ್ರ ಪೋದ್ದಾರ ಮತ್ತು ವಾಲ್ಮಿಯ ಬೋಧಕರು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.