ಯಲ್ಲಾಪುರ: ತಾಲೂಕಿನ ಪಣಸಗುಳಿ ತಾತ್ಕಾಲಿಕ ಸೇತುವೆ ಮೇಲಿಂದ ಲಾರಿಯೊಂದು ನದಿಗೆ ಬಿದ್ದ ಪರಿಣಾಮ ಕಾರ್ಮಿಕರು ಸಮೇತ ಲಾರಿ ಕೊಚ್ಚಿ ಹೋದ ಘಟನೆ ನಡೆದಿದೆ.
ಘಟನೆಯಲ್ಲಿ ಐವರನ್ನ ರಕ್ಷಿಸಲಾಗಿದ್ದು, ಓರ್ವ ನಾಪತ್ತೆಯಾಗಿದ್ದಾನೆ. ಯಲ್ಲಾಪುರ ತಾಲೂಕಿನ ಗುಳ್ಳಾಪುರದಲ್ಲಿ ಹರಿಯುವ ಗಂಗಾವಳಿ ನದಿಗೆ ಪಣಸಗುಳಿ ಬಳಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ಘಟ್ಟದ ಮೇಲ್ಬಾಗದಲ್ಲಿ ಅಧಿಕ ಪ್ರಮಾಣದ ಮಳೆಯಾಗಿದ್ದರಿಂದ ಗಂಗಾವಳಿ ನದಿ ತುಂಬಿ ಹರಿಯುತ್ತಿದೆ. ನದಿಯ ನೀರು ಸೇತುವೆ ಮೇಲಿಂದ ಹರಿಯುತ್ತಿದೆ.
ಹೀಗಾಗಿ ಜನತೆ ಪರದಾಟ ಅನುಭವಿಸುತ್ತಾರೆ. ಬುಧವಾರ ಸಂಜೆ ಲಾರಿ ವಾಪಾಸ್ ಅರೆಬೈಲ್ ಕಡೆ ಬರುತ್ತಿರುವ ವೇಳೆ ನದಿಯಲ್ಲಿ ಬಿದ್ದಿದೆ.
ಪರಿಣಾಮವಾಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.
ತಕ್ಷಣ ದೋಣಿಯ ಮೂಲಕ ಸ್ಥಳಕ್ಕೆ ಧಾವಿಸಿ ಲಾರಿ ಚಾಲಕ ರಾಜೇಶ್ ಹರಿಕಂತ್ರ, ಕಾರ್ಮಿಕರಾದ ಸುನೀಲ, ರಾಜು, ಶಿವಾನಂದ, ದಿನೇಶ ಎಂಬುವವರನ್ನ ರಕ್ಷಣೆ ಮಾಡಲಾಗಿದೆ.
ಇನ್ನೋರ್ವ ಸಂದೀಪ ನಾಪತ್ತೆಯಾಗಿದ್ದು, ಶೋಧ ನಡೆಸಲಾಗಿದೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.