ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕ್ವಾರಿಗೆ ಬಿದ್ದು ಎಂಡಿ ವಿದ್ಯಾರ್ಥಿನಿ ಆತ್ಮಹತ್ಯೆ: ಹಿರಿಯ ವೈದ್ಯನ ಬಂಧನ

ಕ್ವಾರಿಗೆ ಬಿದ್ದು ಎಂಡಿ ವಿದ್ಯಾರ್ಥಿನಿ ಆತ್ಮಹತ್ಯೆ: ಹಿರಿಯ ವೈದ್ಯನ ಬಂಧನ

Sun, 11 Jun 2023 19:14:08  Office Staff   SO NEWS

ಕೋಲಾರ: ಬೆಂಗಳೂರು ಗ್ರಾಮಾಂ ತರ ಜಿಲ್ಲೆ ಹೊಸಕೋಟೆಯ ಎಂವಿಜೆ ಮೆಡಿಕಲ್‌ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಎಂವಿಜೆ ಮೆಡಿಕಲ್‌ ಕಾಲೇಜಿನ ಹಿರಿಯ ವೈದ್ಯ ಮಹೇಶ್‌ ಅವರನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು, ವಿದ್ಯಾರ್ಥಿನಿ ದರ್ಶಿನಿ(24) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 4-5 ಮಂದಿಯನ್ನು ಬಂಧಿಸುವ ಸಾಧ್ಯತೆ ಇರುವ ಬಗ್ಗೆ ಮೂಲಗಳು ತಿಳಿಸಿವೆ.

ಕೊಪ್ಪಳದಲ್ಲಿ ಎಂಬಿಬಿಎಸ್‌ ಮುಗಿಸಿ 7 ತಿಂಗಳ ಹಿಂದೆ ಹೊಸಕೋಟೆಯ ಎಂವಿಜೆ ಮೆಡಿಕಲ್‌ ಕಾಲೇಜಿನಲ್ಲಿ ಎಂಡಿ ವಿದ್ಯಾಭ್ಯಾಸಕ್ಕೆ ಬಂದಿದ್ದ ದರ್ಶಿನಿ, ತಾನು ಉಚಿತ ಪ್ರವೇಶ ಪಡೆದಿದ್ದಕ್ಕಾಗಿ ಕಾಲೇಜು ಆಡಳಿತ ಮಂಡಳಿಯು ಕಿರುಕುಳ ನೀಡುತ್ತಿದ್ದ ಬಗ್ಗೆ ಸ್ನೇಹಿತನಿಗೆ ಕರೆ ಮಾಡಿ ತಿಳಿಸಿದ್ದಳು. ದಿನದ 24 ಗಂಟೆ ವಿಶ್ರಾಂತಿ ಇಲ್ಲದೆ ಕೆಲಸ ಮಾಡಿಸುವ ಜತೆಗೆ ಹಿರಿಯ ವೈದ್ಯರೊಬ್ಬರ ಕಿರುಕುಳ ಹೆಚ್ಚಾಗಿದ್ದ ಬಗ್ಗೆಯೂ ಹೇಳಿಕೊಂಡಿದ್ದಳು. ಅದಾದ ಬಳಿಕ ಫೋನ್‌ ಕರೆ ಕಟ್‌ ಮಾಡಿ, ಕಳೆದ ಭಾನುವಾರದಂದು ಕೋಲಾರ ತಾಲೂಕಿನ ಕೆಂದಟ್ಟಿ ಬಳಿಯ ಕ್ವಾರಿಯಲ್ಲಿದ್ದ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಈ ಸಂಬಂಧ ಆಕೆಯ ಪೋಷಕರು ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಹಾಗಾಗಿ ಎಂವಿಜೆ ಮೆಡಿಕಲ್‌ ಕಾಲೇಜಿನ ಹಿರಿಯ ವೈದ್ಯ ಮಹೇಶ್‌ ಅವರನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ.

ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಆಗ್ರಹ: ಮೆರಿಟ್‌ಗಳಿಸಿ ಸರ್ಕಾರಿ ಕೋಟಾದಡಿ ಉಚಿತವಾಗಿ ಮೆಡಿಕಲ್‌ ಸೀಟ್‌ ಪಡೆದಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಶಾಲಾ ಶಿಕ್ಷಕಿಯೊಬ್ಬರ ಪುತ್ರಿಯೂ ಆಗಿರುವ ದರ್ಶಿನಿ ಸಾವಿಗೆ ಕಾರಣರಾದ ಎಂವಿಜೆ ಮೆಡಿಕಲ್‌ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಂಬಂಧಿ ಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡಿದ್ದು, ತನಿಖೆ ದಿಕ್ಕು ತಪ್ಪದಂತೆ ಸರ್ಕಾರ ಕ್ರಮವಹಿಸಬೇಕು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.


Share: