ಗಂಗೊಳ್ಳಿ, ನವೆಂಬರ್ 20: ಗಂಗೊಳ್ಳಿ ಠಾಣಾಧಿಕಾರಿ ಎಂ. ಗೋಪಾಲ ನಾಯ್ಕರವರ ಅಧ್ಯಕ್ಷತೆಯಲ್ಲಿ ಶುಕ್ರವಾರದಂದು ಗಂಗೊಳ್ಳಿ ಠಾಣೆಯಲ್ಲಿ ವಿವಿಧ ರಾಜಕೀಯ ಹಾಗೂ ಧಾರ್ಮಿಕ ಮುಖಂಡರ ಶಾಂತಿ ಸಭೆ ನೆರವೇರಿತು.

ತ್ಯಾಗ ಬಲಿದಾನಗಳ ಹಬ್ಬವಾದ ಬಕ್ರೀದ್ ಹಬ್ಬವನ್ನು ಯಾರ ಮನಸ್ಸಿಗೂ ನೋವಾಗದಂತೆ ಆಚರಿಸಲು ಹಾಗೂ ಸಮಾಜದಲ್ಲಿ ಶಾಂತಿ ಕದಡಲು ದುಷ್ಕರ್ಮಿಗಳಿಗೆ ಅವಕಾಶ ನೀಡಬಾರದು ಎಂದು ಠಾಣಾಧಿಕಾರಿಗಳು ಆಗ್ರಹಿಸಿದರು.
ಸಭೆಯಲ್ಲಿ ಗಂಗೊಳ್ಳಿ ಜಾಮಿಯಾ ಮೊಹಲ್ಲಾ ರಸ್ತೆ ಮ್ಯಾಂಗನೀಸ್ ರಸ್ತೆ ಹಾಗೂ ಪೋಸ್ಟ್ ಆಫೀಸ್ ಬಳಿ ಜನರು ಗುಂಪಾಗಿ ನಿಲ್ಲುವುದರಿಂದ ತೊಂದರೆಯಾಗುತ್ತಿದೆ ಎಂದು ದೂರು ನೀಡಲಾಯಿತು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಠಾಣಾಧಿಕಾರಿಗಳು ಭರವಸೆ ನೀಡಿದರು.
ಅಲ್ಲದೇ ಚಿಕ್ಕಪುಟ್ಟು ವಿಷಯಗಳು ಗಂಭೀರತೆ ಪಡೆದುಕೊಂಡು ಸಮಾಜದ ಶಾಂತಿ ಕದಡುತ್ತಿವೆ, ಅಂತಹ ಯಾವುದೇ ಪ್ರಸಂಗವಿದ್ದಲ್ಲಿ ಪೋಲೀಸರಿಗೆ ವಿಷಯ ತಿಳಿಸುವಂತೆ ಅವರು ಆಗ್ರಹಿಸಿದರು.
ಶಾಂತಿ ಸಭೆಯಲ್ಲಿ ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಅನಂತ ಮಾವಾಡಿ, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಖಾ ಕಾನೋಜಿ, ಮರವಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ಶೆಟ್ಟಿ, ಗಂಗೊಳ್ಳಿ ಜಮಾತ್ ನ ಅರೆಹೊಳೆ ಅಬ್ದುಲ್ ಹಮೀದ್, ರಫೀಕ್ ಮಾಸ್ತರ್, ಮರವಂತೆ ಜಮಾತ್ ಅಧ್ಯಕ್ಷ ಮೊಯಿದೀನ್ ಸಾಹೇಬ್ ಹಾಗೂ ವಿವಿಧ ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಭಾಗವಸಿದ್ದರು. ಸಿಬ್ಬಂದಿ ಮಧುಸೂಧನರವರು ವಂದನಾರ್ಪಣೆ ಸಲ್ಲಿಸಿದರು.
ಚಿತ್ರ, ವರದಿ, ಇಬ್ರಾಹಿಂ ಗಂಗೊಳ್ಳಿ.