ಮಣಿಪಾಲ, ಡಿ.12: ಆರೋಗ್ಯ ವಿಷಯಕ್ಕೆ ಸಂಬಂಧಿಸಿದಂತೆ ತಂತ್ರಜ್ಞಾನದ ಅಭಿವೃದ್ಧಿ ಇಂದಿನ ತುರ್ತು ಅಗತ್ಯವಾಗಿದ್ದು, ಇದರ ಬಗ್ಗೆ ಹೆಚ್ಚು ಸಂಶೋಧನೆಯಾಗಬೇಕಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವರ ಮಾಜಿ ವೈಜ್ಞಾನಿಕ ಸಲಹೆಗಾರ, ಡಿಆರ್ಡಿಓದ ಮಾಜಿ ಮಹಾನಿರ್ದೇಶಕ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಡಾ.ವಿ.ಕೆ.ಅತ್ರೆ ಹೇಳಿದ್ದಾರೆ.
ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾಗಿರುವ ಇಲೆಕ್ಟ್ರಾನಿಕ್ಸ್ ಡಿಸೈನಿಂಗ್ ಎಂಡ್ ಸಿಗ್ನಲ್ ಪ್ರೊಸೇಸಿಂಗ್ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
೨೧ನೇ ಶತಮಾನದಲ್ಲಿ ಪ್ರತಿಯೊಂದು ಕ್ಷೇತ್ರವೂ ತಂತ್ರಜ್ಞಾನದಿಂದ ಪ್ರಭಾವಿತವಾಗುತ್ತಿದೆ. ಅದರಲ್ಲೂ ಆರೋಗ್ಯ ವಿಷಯದ ಸಮಾಜದ ಪ್ರಮುಖ ಕ್ಷೇತ್ರವಾಗಿದ್ದು, ಇಲ್ಲಿ ಇನ್ನಷ್ಟು ತಂತ್ರಜ್ಞಾನದ ಅಗತ್ಯವಿದೆ. ಕಳೆದ ನೂರು ವರ್ಷಗಳಲ್ಲಿ ತಂತ್ರಜ್ಞಾನ ದಾಪುಗಾಲಿನಲ್ಲಿ ಮುಂದೆ ಸಾಗುತ್ತಿದೆ. ಇದರಿಂದ ಸಂಶೋಧಕ ಹಾಗೂ ಆತನ ಸಂಶೋಧನೆಗಳ ಮಧ್ಯೆ ಅಂತರವೇ ಇಲ್ಲವಾಗಿದೆ ಎಂದರು.
ಮೆಟೀರಿಯಲ್ ಸಾಯನ್ಸ್, ಸಂವಹನ ಹಾಗೂ ಇಲೆಕ್ಟ್ರಾನಿಕ್ಸ್ ಇಂದು ಪ್ರಮುಖ ಕ್ಷೇತ್ರಗಳಾಗಿದ್ದು, ಇವುಗಳ ಮೇಲೆ ಪ್ರತಿಯೊಂದು ಅವಲಂಬಿತವಾಗಿದೆ ಎಂದೂ ಡಾ.ಅತ್ರೆ ಹೇಳಿದರು.
ವೈದ್ಯಕೀಯ ಕ್ಷೇತ್ರಕ್ಕೆ ಅತೀ ಅಗತ್ಯವಾದ ಬಯೋಸೆನ್ಸಾರ್ನ್ನು ಕಡಿಮೆ ಬೆಲೆಗೆ ಅಭಿವೃದ್ಧಿ ಪಡಿಸಬೇಕು. ಇದಕ್ಕೆ ಸಾಕಷ್ಟು ಅವಕಾಶಗಳೂ ಇವೆ ಎಂದು ಡಾ.ವಿ.ಕೆ.ಅತ್ರೆ ತಿಳಿಸಿದರು.
ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಲೇಶಿಯಾ ಮಲಯಾ ವಿವಿಯ ಡಾ.ಫಾತಿಮಾ ಇಬ್ರಾಹಿಂ, ರಿಜಿಸ್ಟ್ರಾರ್ ಡಾ.ಜಿ.ಕೆ.ಪ್ರಭು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಎಂಐಟಿ ನಿರ್ದೇಶಕ ಬ್ರಿ.ಡಾ.ಸೋಮನಾಥ ಮಿಶ್ರ ಸ್ವಾಗತಿಸಿ, ಸಮ್ಮೇಳನದ ಸಮಿತಿ ಅಧ್ಯಕ್ಷ ಡಾ.ಕುಮಾರ ಶರ್ಮ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪಿ.ಸಹಾಯ್ ವಂದಿಸಿದರು.