ಏಪ್ರಿಲ್ ತಿಂಗಳ ಒಂದು ಮುಂಜಾನೆ ನಾನು ಮತ್ತು ಮಂಗಳೂರಿನ ಕೆಲ ಪತ್ರಕರ್ತ ಗೆಳೆಯರು ಬೆಳ್ತಂಗಡಿ ತಾಲೂಕಿನ ನಕ್ಸಲ್ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ನಿರ್ಧರಿಸಿದೆವು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ಮಲೆ ಕುಡಿಯರು (ಆದಿವಾಸಿ) ಸರಕಾರದ ಹೊಸ ಪ್ಯಾಕೇಜ್ (ಹತ್ತುಲಕ್ಷ) ಅನ್ನು ಪಡೆದು ಸ್ವಯಂ ಸ್ಪೂರ್ತಿಯಿಂದ ಕಾಡುಬಿಡಲು ನಿರ್ಧರಿಸಿದನ್ನು ಜಿಲ್ಲಾಡಳಿತ ಘೋಷಿಸಿದ್ದು, ಕೆಲವು ಕುಟುಂಬಗಳು ಸರಕಾರದ ಚೆಕ್ ಪಡೆದುಕೊಂಡದ್ದು ನಮ್ಮಲ್ಲಿ ಕುತೂಹಲ ಮೂಡಿಸಿ ಸರಿಯಾದ ಮಾಹಿತಿ ಪಡೆಯುವುದು ನಮ್ಮ ಭೇಟಿಯ ಉದ್ದೇಶವಾಗಿತ್ತು. ಹಾಗೆ ನಿರ್ಧಾರ ಕೈಗೊಂಡಾಗ ನಾವು ಆಯ್ಕೆ ಮಾಡಿದ್ದು ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಲೂರು ಎಂಬ ಗ್ರಾಮವನ್ನು ಬೆಳಿಗ್ಗೆ 8 ಕ್ಕೆ ಮಂಗಳೂರಿನಿಂದ ಹೊರಟ ನಾವು ಮಧ್ಯೆ ನಾರಾವಿಯ ಅರಸನಕಟ್ಟೆಯ ವಸುಧಾಪ್ರಭುರವರ ಕ್ಯಾಂಟೀನಿನಲ್ಲಿ ಚಾ ಕುಡಿದು ಕುತ್ಲೂರು ತಲುಪುವಾಗ ಗಂಟೆ 10.30 ಆಗಿತ್ತು. ಕುತ್ಲೂರು ಬಸ್ಸು ನಿಲ್ದಾಣದಿಂದ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿ ಆರಂಭವಾಗುವ ಅಳಂಬ ಬಸ್ಸು ನಿಲ್ದಾಣಕ್ಕೆ
ಕಚ್ಛಾ ರಸ್ತೆಯಲ್ಲಿ 6 ಕಿ.ಮೀ. ಹೋಗಬೇಕು. ಮಧ್ಯೆ ಸಿಕ್ಕಿದ ಗಿರಿಯಪ್ಪ ಪೂಜಾರಿಯವರ ಊರಿನ ಏಕೈಕ ಅಂಗಡಿಯಲ್ಲಿ ಅಂಗಡಿಯಲ್ಲಿ ಮಲೆ ಕುಡಿಯರ ಮನೆಗಳ ವಿವರ ಸಂಗ್ರಹಿಸುವಾಗ ಸಿಕ್ಕಿದ್ದು ಅಂಗಡಿಗೆ ಸೈಕಲೇರಿ ಬಂದಿದ್ದ ಮಲೆ ಕುಡಿಯರ ಹುಡುಗ ವಿಠ್ಠಲ.ಬೆಳ್ತಂಗಡಿಯ ಕಾಲೇಜಿನಲ್ಲಿ ಪದವಿ ಓದುತ್ತಿರುವ ಸಂಕೋಚ ಸ್ವಭಾವದ ವಿಠಲ ನಮ್ಮ ಒತ್ತಾಯಕ್ಕೆ ಮಣಿದು ನಮ್ಮನ್ನು ಕಾಡು ತಿರುಗಿಸುವ ಜವಾಬ್ದಾರಿ ಹೊತ್ತು ತನ್ನ ಸೈಕಲನ್ನು ಗಿರಿಯಪ್ಪ ಪೂಜಾರಿಯವರ ಅಂಗಡಿಯಲ್ಲಿ ಬಿಟ್ಟು ನಮ್ಮ ಬೈಕೇರಿ ಜೊತೆಯಾದ. ಅಲ್ಲಿಂದ ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ನಮ್ಮ ಕಣ್ಣಿಗೆ ಬಿದ್ದಿದ್ದು ಅಲ್ಲಿಯೇ ಇದ್ದ ಅಂಗನವಾಡಿ ಕೇಂದ್ರ.ಸ್ಥಳೀಯ ಯುವಕರು ಕಟ್ಟಿರುವ ತಗಡು ಶೀಟಿನ ಕಟ್ಟಡದಲ್ಲಿ ನಡೆಯುವ ಅಂಗನವಾಡಿಗೆ ಭೇಟಿ ಕೊಟ್ಟಾಗ ಕರಾವಳಿಯ ಬಿರುಬಿಸಿಲಿನ ತಾಪವನ್ನು ಹೆಚ್ಚಿಸಿರುವ ತಗಡುಶೀಟಿನ ಉಷ್ಣತೆಗೆ ಪುಟಾಣಿಗಳು ಮತ್ತು ಅಂಗನವಾಡಿ ಕಾರ್ಯಕಾರ್ತರು ಬೆವರು ಸುರಿಸುತ್ತಿದ್ದರು.
ಅವರೊಂದಿಗೆ ಮಾತಿಗಿಳಿದಾಗ ಒಟ್ಟು ನಕ್ಸಲ್ ಪೀಡಿತ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಜನರ ಸಂಕಷ್ಟಮಯ ಬದುಕಿನ ಚಿತ್ರಣದ ಸುರುಳಿ ಬಿಚ್ಚತೊಡಗಿತು. ಕನಿಷ್ಟ 15 ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಕುತ್ಲೂರು ಗ್ರಾಮದಲ್ಲಿ ಇದ್ದದ್ದು ಎರಡು ಅಂಗನವಾಡಿ, ಒಂದು ಉದ್ಯಾನವನ ವ್ಯಾಪ್ತಿಯ ಹೊರಗಡೆಯ ನಾವು ಭೇಟಿಕೊಟ್ಟ ಕೇಂದ್ರವಾದರೆ, ಮತ್ತೊಂದು ಅಲ್ಲಿಂದ ಆರು ಕಿ.ಮೀ ದೂರದ ಉದ್ಯಾನವನ ವ್ಯಾಪ್ತಿಯ ಒಳಗಡೆ ಇನ್ನೊಂದು. ಅರಣ್ಯವಾಸಿಗಳನ್ನು ಕಾಡಿನಿಂದ ನಾಜೂಕಾಗಿ ಹೊರದಬ್ಬುವ ಪ್ರಕ್ರಿಯೆಯ ಭಾಗವಾಗಿ ಕಳೆದ ಒಂದು ವರ್ಷದ ಹಿಂದೆ ಮಲೆ ಕುಡಿಯರ ಮಧ್ಯೆ ಇದ್ದ ಅಂಗನವಾಡಿ ಕೇಂದ್ರವನ್ನು ಮುಚ್ಚಲಾಗಿದೆ.ಈಗ ಕಾಡಿನ ಮಧ್ಯೆ ವಾಸಿಸುವ ಮಲೆಕುಡಿಯ ಪುಟ್ಟ ಕಂದಮ್ಮಗಳು ಅಂಗನವಾಡಿಗೆ ಸೇರಬೇಕಾದರೆ ತಮ್ಮ ವಸತಿಯಿಂದ ಕನಿಷ್ಟ ಆರು ಕಿ.ಮೀ ದೂರದಲ್ಲಿರುವ ಈ ಕೇಂದ್ರಕ್ಕೆ ಬರಬೇಕು. ಇದು ಸರಕಾರ ನಯವಾಗಿ ಆದಿವಾಸಿಗಳ ಬದುಕಿಗೆ ಕೊಳ್ಳಿ ಇಡುವ ರೀತಿ. ಇಷ್ಟಕ್ಕೆ ಮಲೆಕುಡಿಯರ ಸಂಕಟಮಯ ಬದುಕನ್ನು ಕಂಡು ಕಂಗಾಲಾದ ನಾವು ಇನ್ನೂ ಏನೇನು ಕಾಣಲಿದೆಯೋ ಎಂಬ ಆತಂಕದಲ್ಲಿಯೇ ಬೈಕೇರಿದೆವು. ಬೈಕು ಇನ್ನೇನು ಮುಂದಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ಅಂಗನವಾಡಿಯ ಮುಖ್ಯ ಕಾರ್ಯಕರ್ತ ಅಂದರು ಮುಂದಿನ ಸೋಮವಾರ ನಮ್ಮ ಯೂನಿಯನ್ ಮುಂದಾಳು ವರಲಕ್ಷ್ಮಿ ಬೆಳ್ತಂಗಡಿಗೆ ಬರುತ್ತಿದ್ದಾರೆ.ಅವರು ಬರುವ ಸಭೆಗೆ ನಮಗೆ ಹೋಗಲಿಕ್ಕಿದೆ.
ಬಸ್ಸೇ ಬರದ ಬಸ್ಸು ನಿಲ್ದಾಣ
ನಮ್ಮ ಮೋಟಾರು ಬೈಕು ಅಳಂಬ ಬಸ್ಸು ನಿಲ್ದಾಣದ ಬಳಿ ನಿಲ್ಲಿಸಿ ಹತ್ತಿರದ ಸುಮತಿಯವರ ಮನೆಯಲ್ಲಿ ನೀರು ಕುಡಿದು ಕಾಡೆಂಬ ಮಲೆಕುಡಿಯರ ನಾಡಿಗೆ ನಮ್ಮ ಯಾತ್ರೆ ಆರಂಭಿಸಿದೆವು. ವಿಠಲ್ನನ್ನು ಮಾತಿಗೆಳೆಯುತ್ತಾ ಅಳಂಬ ಬಸ್ಸು ನಿಲ್ದಾಣಕ್ಕೆ ಬರುವ ಬಸ್ಸುಗಳ ವಿವರ ಕೇಳಿದೆ. ವಿಠಲ್ ನೀಡಿದ ಉತ್ತರ ಕೇಳಿ ಜಗತ್ತಿನ ಒಂಭತ್ತನೇ ಅದ್ಭುತ ಕಂಡಂತಾಯ್ತು. ಅಳಂಬದ ಬಸ್ಸು ನಿಲ್ದಾಣ ಕರಾವಳಿ ಜಿಲ್ಲೆಗಳ ಎಲ್ಲಾ ಗ್ರಾಮೀಣ ಪ್ರದೇಶದ ಬಸ್ಸು ನಿಲ್ದಾಣದಂತೆಯೇ ಕಳೆದ ಹಲವಾರು ವರ್ಷಗಳಿಂದ ಇದ್ದರೂ ಮಲೆಕುಡಿಯರ ಊರಿನ ಈ ಬಸ್ಸು ನಿಲ್ದಾಣಕ್ಕೆ ಒಂದು ಬಾರಿಯೂ ಬಸ್ಸು ಬಂದೇ ಇಲ್ಲ. ಬಸ್ಸೇ ಬರದ, ಬಸ್ಸು ಬಂದೇ ಇರದ ಅದ್ಭುತ ಬಸ್ ನಿಲ್ದಾಣ.
ಫಲಕದ ಮೇಲೆ ಬರೆದ ಬರಹ
ರಸ್ತೆಯೆಂಬ ಬೆಟ್ಟವನ್ನು ಹತ್ತುತ್ತಾ ಮುಂದುವರೆಯುತ್ತಿದ್ದಂತೆ ನಮಗೆ ರಸ್ತೆಯ ಬದಿಯಲ್ಲಿಯೇ ಜನ ವಾಸವಿಲ್ಲದ ಮನೆ ಎದುರಾಯ್ತು.ಆ ಮನೆಯಲ್ಲಿ ವಾಸವಿದ್ದ ಮಲೆಕುಡಿಯರ ಕುಟುಂಬ ಸರಕಾರದ ಹತ್ತು ಲಕ್ಷದ ಪ್ಯಾಕೇಜ್ ಪಡೆದು ಊರು ಬಿಟ್ಟ ಪ್ರಥಮ ಕುಟುಂಬವಾಗಿತ್ತು. ಆ ಮನೆಯ ಮುಂಭಾಗದಲ್ಲಿಯೇ ಸರಕಾರ ಹಾಕಿರುವ ಮಾಹಿತಿ ಫಲಕದಲ್ಲಿ ಹೀಗೆ ಬರೆಯಲಾಗಿತ್ತು.ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಾಸಿಸುವ ಕುಟುಂಬಗಳು ಕಾಡು ತೊರೆದು ಹೋಗಲು ಸ್ವಯಂಸ್ಪೂರ್ತಿಯಿಂದ ನಿರ್ಧರಿಸಿದರೆ ಹತ್ತು ಲಕ್ಷ ರೂ.ಗಳನ್ನು ನೀಡಲಾಗುವುದು. ಕಾಡು ತೊರೆಯಲು ಇಷ್ಟವಿಲ್ಲದವರನ್ನು ಯಾವುದೇ ಕಾರಣಕ್ಕೂ ಬಲವಂತವಾಗಿ ಒಕ್ಕಲೆಬ್ಬಿಸಲಾಗುವುದಿಲ್ಲ. ಅವರು ಉದ್ಯಾನವನದ ವ್ಯಾಪ್ತಿಯೊಳಗಡೆಯೇ ವಾಸಿಸಬಹುದು. ಎಂತಹ ಕಾಳಜಿ. ಆ ಫಲಕ ಓದಿದ ಯಾರಿಗಾದರೂ ನಮ್ಮ ಸರಕಾರದ ಕಾಳಜಿ ಕಂಡು ಎದೆ ತುಂಬಿ ಬರಬೇಕು. ಎಷ್ಟೇ ಆದರೂ ಬಸ್ಸೇ ಬರದ ಪ್ರದೇಶಕ್ಕೆ ಬಸ್ಸು ನಿಲ್ದಾಣ ಕಟ್ಟಿಸಿಕೊಟ್ಟವರಲ್ಲವೇ!
ಹೀಗೆ ನಕ್ಸಲರು ಕೋವಿ ಹಿಡಿದು ನಡೆದಾಡಿದ ದಾರಿಯಲ್ಲಿ ಮುಂದಕ್ಕೆ ಸಾಗುವಾಗ ನಾವು ಭೇಟಿಕೊಟ್ಟ ಮೊದಲ ಮನೆ ಅಳಂಬ ರಾಮಯ್ಯ ಮಲೆಕುಡಿಯರದ್ದು. ಇದು ನಮ್ಮ ಯಾತ್ರೆಯ ಮಾರ್ಗದರ್ಶಕ ವಿಠಲನ ಚಿಕ್ಕಪ್ಪನದ್ದು. ಸುಂದರವಾದ ಎರಡು ಎಕರೆ ತೋಟ, ಭತ್ತದ ಗದ್ದೆಯ ಮಧ್ಯೆ ಇದ್ದ ರಾಮಯ್ಯ ಮಲೆಕುಡಿಯವರ ಮನೆ ಗ್ರಾಮೀಣ ಭಾಗದ ಸಾಮಾನ್ಯ ಸಣ್ಣ ರೈತನ ಮನೆಯಂತೆಯೇ ಇತ್ತು. ನಾಕ್ಕೈದು ಮಕ್ಕಳು, ಮೊಮ್ಮಕ್ಕಳ ತುಂಬು ಸಂಸಾರ. ಇದ್ದದ್ದರಲ್ಲೇ ಸಂತೃಪ್ತ್ತ ಬದುಕು ರಾಮಯ್ಯ ಮಲೆಕುಡಿಯ ಕುಟುಂಬದ್ದು. ಆಧುನಿಕ ಬದುಕಿನ ಥಳಕು ಬಳಕು, ಪಟ್ಟಣದ ಬದುಕಿನ ಆಕರ್ಷಣೆಯಿಂದ ದೂರವುಳಿದಿದ್ದ ಈ ಕುಟುಂಬ ಸರಕಾರದ ಒಕ್ಕಲೆಬ್ಬಿಸುವ ಹೊಸತಂತ್ರದಿಂದ ಭೀತಗೊಂಡದ್ದು ಮೇಲ್ನೋಟಕ್ಕೆ ಗೋಚರಿಸುತ್ತಿತ್ತು. ಅಳುಕಿನಿಂದಲೇ ಮಾತಿಗಿಳಿದ ರಾಮಯ್ಯ ಗೌಡರು ಸರಕಾರದ ಹತ್ತು ಲಕ್ಷ ತನ್ನ ಅವಿಭಕ್ತ ಕುಟುಂಬದ ಪುನರ್ವಸತಿಗೆ ಎಲ್ಲಿ ಸಾಕಾಗುತ್ತದೆ? ಕಾಡು ಬಿಟ್ಟು ಹೊರಗಡೆ ಬದುಕುವುದಾದರೂ ಹೇಗೆ? ಎಂದು ಆತಂಕ ವ್ಯಕ್ತಪಡಿಸಿದರು. ಇತ್ತೀಚಿನ ವರ್ಷಗಳಲ್ಲಿ ಕಾಡುತ್ಪನ್ನಗಳಾದ ಜೇನು, ರಾಮಪತ್ರೆ, ದಾಲ್ಚಿನಿ, ಮಂತೋಳಿ (ಹುಳಿ) ಸಂಗ್ರಹಿಸುವುದರ ಮೇಲಿನ ಅರಣ್ಯ ಇಲಾಖೆಯ ನಿಷೇಧದಿಂದಾಗಿ ಉಂಟಾಗಿರುವ ಸಂಕಷ್ಟಗಳನ್ನು ತೆರೆದಿಟ್ಟರು. ಇಷ್ಟೆಲ್ಲಾ ಮಾತನಾಡಿದ ರಾಮಯ್ಯ ಮಲೆಕುಡಿಯರ ಕುಟುಂಬ ತಪ್ಪಿಯೂ ನಕ್ಸಲರ ಬಗ್ಗೆ ಒಂದು ಮಾತೂ ಆಡಲಿಲ್ಲ. ಅವರ ನಿರ್ಧಾರ ಮಾತ್ರ ಸ್ಪಷ್ಟವಾಗಿತ್ತು. ಯಾವುದೇ ಕಾರಣಕ್ಕೂ ತಮ್ಮ ಭೂಮಿಯನ್ನು ಬಿಟ್ಟುಕೊಡುವುದಿಲ್ಲ. ಪಶ್ಚಿಮ ಬಂಗಾಳ ಸರ್ಕಾರವು ಅರಣ್ಯವಾಸಿಗಳಿಗೆ ಅರಣ್ಯ ರಕ್ಷಣೆಯ ಅಧಿಕಾರ ಕೊಟ್ಟಿರುವುದು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವ ಕಾನೂನುಬದ್ಧ ಹಕ್ಕು ನೀಡಿರುವುದು ಇಂತಹ ಒಂದು ಮಾದರಿ ಸಾಧ್ಯವಿದೆ ಎಂಬುದು ಆದಿವಾಸಿಗಳಿಗೂ `ನಾಗರೀಕ‘ರಿಗೂ ತಿಳಿಯಬೇಕಿದೆ.
ದೇಶದ ಎಷ್ಟೋ ರಾಜ್ಯಗಳಲ್ಲಿ ಅರಣ್ಯ ಪ್ರದೇಶವು ಕಡಿಮೆಯಾಗುತ್ತಾ, ಅರಣ್ಯ, ಅರಣ್ಯ ಸಂಪತ್ತು ನಾಶವಾಗುತ್ತಿದ್ದರೆ ಪಶ್ಚಿಮ ಬಂಗಾಳದಲ್ಲಿ ಅರಣ್ಯ ಸಂಪತ್ತು ವೃದ್ಧಿಸುತ್ತಿದೆ. ಇದಕ್ಕಾಗಿ ಪಶ್ಚಿಮ ಬಂಗಾಳ ಸರ್ಕಾರವು ಅಂತರರಾಷ್ಟ್ರೀಯ ಮನ್ನಣೆಯನ್ನು ಗಳಿಸಿದೆ.
ಇಂತಹ ವಿಚಾರವನ್ನು ನಕ್ಸಲರು ಮಲೆ ಕುಡಿಯರಿಗೆ ಹೇಳಲು ಸಾಧ್ಯವಿದೆಯೇ? ಇಲ್ಲವೇ ಇಲ್ಲ. ಸರ್ಕಾರದ ಕಿರುಕುಳ,ದೌರ್ಜನ್ಯಗಳನ್ನು ತೋರಿಸಿ ಆದಿವಾಸಿಗಳ ಕೈಗೆ ಬಂದೂಕು ಕೊಡುವ ಧಾವಂತದಲ್ಲಿರುವ ನಕ್ಸಲರಿಗೆ ಇವೆಲ್ಲಾ ಯಾಕೆ ಬೇಕು?
ಬಲುದೂರ ಶಾಲೆ
ರಾಮಯ್ಯ ಮಲೆಕುಡಿಯರ ಮನೆಯ ತಗ್ಗಿನಲ್ಲಿ ಕೆಳಗಿಳಿದು ಬೆಟ್ಟವೇರಿ ಮುತ್ತಯ್ಯ ಮಲೆಕುಡಿಯರ ಮನೆಗೆ ಭೇಟಿ ನೀಡಿದೆವು.ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳು ಕುತೂಹಲದ ಕಣ್ಣುಗಳಿಂದ ನಮ್ಮನ್ನು ಎದುರುಗೊಂಡವು. ಮನೆಯ ಹಿರಿಯ ಜೀವಿ ಜಲಜ ನಮ್ಮೊಂದಿಗೆ ಮಾತಿಗಿಳಿದು ತಮ್ಮ ಬದುಕುಗಳ ಸಂಕಷ್ಟವನ್ನು ತೆರೆದಿಡತೊಡಗಿದರು. ತನ್ನ ಕಿರಿಯ ಮೊಮ್ಮಗಳು ರಂಜಿತಾಳಿಗೆ ವಯಸ್ಸು ಆರು ದಾಟಿದ್ದರೂ ಇನ್ನೂ ಶಾಲೆಗೆ ಸೇರಿಸಲಾಗದಿದ್ದುದಕ್ಕೆ ನೋವು ವ್ಯಕ್ತಪಡಿಸಿದರು. ಅಷ್ಟರಲ್ಲಿ ಎದುರಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮುತ್ತಯ್ಯ ಮಲೆಕುಡಿಯರ ನಾಲ್ಕು ಹೆಣ್ಣುಮಕ್ಕಳಾದ ರತ್ನ, ಲಕ್ಷ್ಮಿ, ಗುಲಾಬಿ, ಮಲ್ಲಿಕಾ ಮಾತಿಗೆ ಜೊತೆಯಾದರು. ಇಬ್ಬರು ಹೆಣ್ಣುಮಕ್ಕಳಿಗೆ ಮದುವೆಯಾಗಿದ್ದರೂ ಮತ್ತಯ್ಯ ಮಲೆಕುಡಿಯರ ಮನೆಯಲ್ಲಿಯೇ ವಾಸವಾಗಿದ್ದರು.ತಮ್ಮ ಮಕ್ಕಳು ಪೆಮರಿ ಸ್ಕೂಲಿಗೆ ಹೋಗಬೇಕಾದರೂ ಕನಿಷ್ಟ 10 ಕಿ.ಮೀ. ದೂರದಲ್ಲಿರುವ ಅರಸನಕಟ್ಟೆಗೆ ಹೋಗಬೇಕಾದ ಸಂಕಷ್ಟವನ್ನು ಹೇಳಿಕೊಂಡರು. ಮುತ್ತಯ್ಯ ಮಲೆಕುಡಿಯರ ಮೂರು ಮೊಮ್ಮಕ್ಕಳು ದೂರದ ಹಾಸ್ಟೆಲ್ನಲ್ಲಿದ್ದು ಪೆಮರಿ ಸ್ಕೂಲ್ನಲ್ಲಿ ಓದುತ್ತಿದ್ದರೆ ಆರು ವರ್ಷ ದಾಟಿರುವ ಕೊನೆಯ ಮಗು ತಾಯಿಯನ್ನು ಅಗಲಿ ಹಾಸ್ಟೆಲ್ನಲ್ಲಿರಲು ಒಪ್ಪದಿರುವುದರಿಂದ ಶಾಲೆಗೆ ಸೇರಿಸಲಾಗದೆ ಅತಂತ್ರವಾಗಿರುವ ಬಗ್ಗೆ ನೋವು ತೋಡಿಕೊಂಡರು. ಅಷ್ಟರಲ್ಲಿ ತೆಂಗಿನ ಮರವೇರಿದ ಯುವಕನೊಬ್ಬ ದೊಡ್ಡಗಾತ್ರದ ಎಳೆನೀರನ್ನು ಕೊಯ್ದು ನಮಗೆ ಕುಡಿಯಲು ಕೊಟ್ಟ. ಮುತ್ತಯ್ಯ ಮಲೆಕುಡಿಯರ ಮನೆ ಮಂದಿಯು ಸರಕಾರದ ಪರಿಹಾರ ಪ್ಯಾಕೇಜ್ ತಿರಸ್ಕರಿಸಿ ಯಾವುದೇ ಕಾರಣಕ್ಕೂ ಅರಣ್ಯ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಸ್ತೆ ಆಯ್ತು ಕೂಲಿ ಇಲ್ಲ
ಅಲ್ಲಿಂದ ನಾವು ಭೇಟಿ ಕೊಡಬೇಕಾಗಿದ್ದ ಮನೆ ದಿ.ದುಗ್ಗಣ್ಣ ಮಲೆಕುಡಿಯರದ್ದು. ಅಲ್ಲಿಗೆ ಸೇರಬೇಕಾದರೆ ಮುತ್ತಯ್ಯ ಮಲೆಕುಡಿಯರ ಮನೆಯಿಂದ ಕನಿಷ್ಟ ನಾಕ್ಕೈದು ಕಿ.ಮೀ. ನಡೆಯಬೇಕಾಗಿತ್ತು. ಏದುಸಿರು ಬಿಡುತ್ತಾ ನಾವು ಕಾಡಿನೊಳಗಡೆಯ ಮುಖ್ಯ ರಸ್ತೆಯನ್ನು ಸೇರಿದೆವು. ಏರುಮುಖವಾಗಿದ್ದ ರಸ್ತೆಯಲ್ಲಿ ಪ್ರಯಾಸಪಟ್ಟು ಮುನ್ನಡೆಯುವಾಗ ವಿಠಲನೊಂದಿಗೆ ಈ ಕಚ್ಛಾ ರಸ್ತೆಯನ್ನು ಕಾಡಿನ ಮಧ್ಯೆ ನಿರ್ಮಿಸಿದವರು ಯಾರು ಎಂದು ಕೇಳಿದಾಗ ದಂಗಾಗುವ ಸರದಿ ನಮ್ಮದಾಗಿತ್ತು. ಅದನ್ನು ವಿಠಲನ ಮಾತುಗಳಲ್ಲಿಯೇ ಕೇಳಿ. “ಇಲ್ಲಿ ಕನಿಷ್ಟ 5 ಕಿ.ಮೀ. ರಸ್ತೆಯನ್ನು ನಿಮರ್ಿಸಿದ್ದು ನಾವು. ಇಲ್ಲಿನ ಮಲೆಕುಡಿಯರೇ ಸೇರಿ ತಿಂಗಳುಗಟ್ಟಲೆ ಬೆಟ್ಟ ಕಡಿದು ಕಲ್ಲು ಎತ್ತಿ ರಸ್ತೆ ನಿರ್ಮಿಸಿದ್ದೇವೆ. ಜಿಲ್ಲಾಡಳಿತ ನಮಗೆ ಸಹಕಾರ ನೀಡುವುದು ಬಿಡಿ” ಇದರಲ್ಲಿ ಅರ್ಧದಷ್ಟು ರಸ್ತೆ ನಿರ್ಮಿಸಿದ್ದು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಸರಕಾರ ಇಷ್ಟರವರೆಗೆ ನಮಗೆ ಉದ್ಯೋಗ ಖಾತ್ರಿಯ ಕೂಲಿ ನೀಡದೆ ವಂಚಿಸಿದೆ. ಆ ಮೂಲಕ ಪರೋಕ್ಷವಾಗಿ ಒಕ್ಕಲೆಬ್ಬಿಸಲು ಒತ್ತಡ ಹೇರುತ್ತಿದೆ ಎಂದು ತಣ್ಣನೆಯ ದನಿಯಲ್ಲಿ ವಿಠಲ ವಿವರಿಸುತ್ತಿದ್ದರೆ ವ್ಯವಸ್ಥೆಯ ಕ್ರೌರ್ಯದ ಪರಿಕಂಡು ನನ್ನ ಜೊತೆಗಿದ್ದ ಪತ್ರಕರ್ತ ಗೆಳೆಯರು ಮಾತು ಹೊರಡದೆ ಒಂದು ಕ್ಷಣ ಮೌನವಾದರು.
ಬೆಟ್ಟ ಹತ್ತಿ ಸುಸ್ತುಹೊಡೆದಿದ್ದ ನಾವು ದಿ.ದುಗ್ಗಣ್ಣ ಮಲೆಕುಡಿಯರ ಮನೆ ಸೇರಿದಾಗ ಏಳೆಂಟು ಜನ ಗಂಡಸರು ಮನೆಯ ಎದುರು ಹಾಕಿದ್ದ ತೆಂಗಿನ ಸೋಗೆಯ ಚಪ್ಪರದಡಿಯಲ್ಲಿ ಕೂತು ಹರಟೆ ಹೊಡೆಯುತ್ತಿದ್ದರು. ಬೆಟ್ಟಿದಿಂದ ಇಳಿದು ಬರುವ ನೀರಿಗೆ ಪೈಪು ಹಾಕಿ ಮನೆಯ ಮುಂಭಾಗದಲ್ಲಿ ಜೋಡಿಸಿದ್ದ ನಳ್ಳಿಯಲ್ಲಿ ಮುಖ ತೊಳೆದು ದನಿವಾರಿಸಿಕೊಳ್ಳಲು ಒಂದೈದು ನಿಮಿಷ ನಾವು ಮೌನವಾಗಿ ಕುಳಿತೆವು. ನಾವು ಮಾತಿಗಿಳಿಯುವುದನ್ನೇ ಕಾಯುತ್ತಿದ್ದಂತೆ ಒಂದಿಬ್ಬರು ಸರಕಾರದ ನೀತಿಗಳ ವಿರುದ್ಧ, ನಕ್ಸಲ್ ನಿಗ್ರಹ ದಳದ ದೌರ್ಜನ್ಯಗಳ ವಿರುದ್ಧ ಮಾತನಾಡತೊಡಗಿದರು. ಉಳಿದವರು ನಮ್ಮೊಂದಿಗೆ ಆಡುತ್ತಿರುವ ಮಾತುಗಳು ಮತ್ತೆಲ್ಲಿ ನಕ್ಸಲ್ ನಿಗ್ರಹ ದಳಕ್ಕೆ ತಲುಪಿ ಕಿರುಕುಳಕ್ಕೆ ಒಳಗಾಗಬೇಕಾದೀತೋ ಎಂಬಂತೆ ಮುಖಮಾಡಿ ಆತಂಕಕ್ಕೊಳಗಾದಂತೆ ಕಂಡರು. ದುಗ್ಗಣ್ಣ ಮಲೆಕುಡಿಯರಿಗೆ ಏಳು ಗಂಡು ಮಕ್ಕಳಾದರೆ, ಮೂರು ಹೆಣ್ಣುಮಕ್ಕಳು ಮದುವೆಯಾಗಿ ಗಂಡನ ಮನೆ ಸೇರಿದ್ದಾರೆ. ಇರುವ ಅಲ್ಪ ಭೂಮಿಯನ್ನು ಅವಲಂಬಿಸಿ ಏಳು ಮಕ್ಕಳು ಸಂಸಾರ ನಡೆಸುತ್ತಿದ್ದಾರೆ. ಸಣ್ಣ ಅಕ್ಕಿ ಗಿರಣಿಯನ್ನು ಹೊಂದಿದ್ದ ಆ ಕುಟುಂಬ ಕರೆಂಟ್ ಇಲ್ಲದ ತಮ್ಮ ಮನೆಯ ಗಿರಣಿ ನಡೆಸಲು ಡೀಸಲ್ ಅನ್ನು ಕನಿಷ್ಟ 5 ಕಿ.ಮೀ ಬೆಟ್ಟದ ಮೇಲೆ ಹೊತ್ತು ತರಬೇಕು ಎಂದು ವಿವರಿಸಿದರು. ಸರಕಾರ ನಕ್ಸಲ್ ಪ್ಯಾಕೇಜಿನಲ್ಲಿ ನೀಡಿರುವ ಸೋಲಾರ್ ಲೈಟ್ಕಾಡಿನ ಎಲ್ಲಾ ಮನೆಗಳಂತೆ ತಮ್ಮ ಮನೆಯಲ್ಲಿಯೂ ಉರಿಯುವುದಿಲ್ಲ ಎಂಬು ಯಾವುದೇ ಭಾವನೆಗಳಿಲ್ಲದೆ ವಿವರಿಸಿದರು. ಹತ್ತು ಲಕ್ಷ ಪಡೆದು ಕಾಡು ತೊರೆಯಲು ಒತ್ತಾಯಿಸುತ್ತಿರುವವರು ಯಾರು ಎಂದು ವಿಚಾರಿಸಿದರೆ ತಮ್ಮವನೆ ಆದ ಎಂಜಲು ಕಾಸಿನ ಆಸೆಗೆ ಬಿದ್ದಿರುವ ರಾಜು ಮಲೆಕುಡಿಯ ಮತ್ತು ಬಿಜೆಪಿ ಪುಡಾರಿ, ಭೂಮಾಲಕ, ಪಂಚಾಯತ್ ಸದಸ್ಯ ರಾಮಚಂದ್ರ ಭಟ್ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಲ್ಲೇ 50 ಕೆ.ಜಿ.ಯ 5 ಗೋಣಿಚೀಲ ಅಕ್ಕಿಯನ್ನು ತನ್ನ ನೆರೆಕರೆಯವರ ಸಹಕಾರದಿಂದ ಹೊತ್ತು ತಂದು ಸುಸ್ತಾಗಿ ಕೂತಿದ್ದ ಪೆರಿಂಚದ ಬಾಬು ಮಲೆಕುಡಿಯರು ಬೆಟ್ಟದ ಜನರ ಶ್ರಮಜೀವನದ ಸಂಕೇತವಾಗಿ ಕಂಡರು. ಒಟ್ಟು ನಕ್ಸಲ್ ನಿಗ್ರಹ ದಳದ ಪೊಲೀಸರು ಹೊತ್ತಲ್ಲದ ಹೊತ್ತು ಮನೆ ನುಗ್ಗಿ ಜಾಲಾಡುವುದು ನಕ್ಸಲರ ಬಗ್ಗೆ ಮಾಹಿತಿ ನೀಡಿ ಎಂದು ಹಿಂಸೆ ನೀಡುವುದು ಇದೇ ನಮ್ಮನ್ನು ಕಾಡುವ ನಿಜವಾದ ಸಂಕಷ್ಟಗಳು ಎಂದು ಅಳಲು ತೋಡಿಕೊಂಡ ಮಲೆಕುಡಿಯರು ಸರಕಾರ ನಮಗೆ ಯಾವುದೇ ಸೌಲಭ್ಯ ನೀಡದಿದ್ದರೂ ಪರವಾಗಿಲ್ಲ ಕಿರುಕುಳ ನೀಡುವುದನ್ನು ನಿಲ್ಲಿಸಲಿ ನಮಗೆ ಅಷ್ಟೇ ಸಾಕು. ಶ್ರಮಪಟ್ಟು ಬದುಕುತ್ತೇವೆ ಎಂದು ಪೊಲೀಸ್ ಕಿರುಕುಳಕ್ಕೆ ಉದಾಹರಣೆ ನೀಡುತ್ತಾ ಕೋಡ್ಯಂದಡ್ಕ ಬಾಬು ಗೌಡರ ಮನೆಯಿಂದ ಮೂರು ತಿಂಗಳ ಹಿಂದೆ ಅಡಿಕೆ ಮಾರಿ ತಂದಿಟ್ಟಿದ್ದ 5000 ರೂ.ಯನ್ನು ನಕ್ಸಲ್ ನಿಗ್ರಹ ದಳದ ಪೊಲೀಸರು ಮನೆ ನುಗ್ಗಿ ಕಿತ್ತುಕೊಂಡ ಕಥೆ ಹೇಳಿದರು. ಏನೇ ಆದರೂ ಸರಕಾರದ ಪ್ಯಾಕೇಜ್ ಒಪ್ಪಿಕೊಂಡು ಕಾಡು ಬಿಡುವ ಪ್ರಶ್ನೆಯೇ ಇಲ್ಲ ಎಂದು ಒಕ್ಕೊರಲಿನಿಂದ ಹೇಳಿದ ದುಗ್ಗಣ್ಣ ಮಲೆಕುಡಿಯರ ಮಕ್ಕಳು ಮತ್ತು ಅಲ್ಲಿ ಸೇರಿದ್ದ ಇತರ ಮಲೆಕುಡಿಯರು ನಾವು ಎಷ್ಟೇ ಪ್ರಶ್ನೆ ಕೇಳಿದರೂ ನಕ್ಸಲ್ ಇರುವಿಕೆಯ ಬಗ್ಗೆ ಒಂದು ಮಾತೂ ಆಡಲಿಲ್ಲ. ಆ ಮನೆಯ ಹೆಣ್ಣುಮಕ್ಕಳು ತಂದುಕೊಟ್ಟ ಕಪ್ಪು ಚಹಾ ಕುಡಿದು ಮುಂದಕ್ಕೆ ಸಾಗಿದೆವು.
ಮುಂದುವರೆಯುವುದು…..
ಅಷ್ಟು ಹೊತ್ತಿಗಾಗಲೇ ಸೂರ್ಯ ಗುಡ್ಡದ ಹಿಂದೆ ಮರೆಯಾಗಲು ದಾವಂತ ತೋರತೊಡಗಿದ್ದ. ಕತ್ತಲಾಗುವ ಮುಂಚೆ ನಾವು ಕಾಡು ತೊರೆಯಬೇಕಿತ್ತು. ಇನ್ನಷ್ಟು ಮಲೆಕುಡಿಯರ ಕುಟುಂಬಗಳನ್ನು ಭೇಟಿಯಾಗುವ ಮುಖ್ಯವಾಗಿ ಪೊಲೀಸರ ಗುಂಡಿಗೆ ಬಲಿಯಾದ ನಕ್ಸಲ್ ಯುವಕರಾದ ವಸಂತ ಮತ್ತು ದಿನಕರನ ಮನೆಯವರನ್ನು ಮಾತನಾಡಿಸಬೇಕು ಎಂಬ ಉದ್ದೇಶವಿದ್ದರೂ ಇನ್ನೊಮ್ಮೆ ಬಂದು ಭೇಟಿಯಾಗೋಣ ಎಂದು ತೀರ್ಮಾನಿಸಿ ಕೊನೆಯದಾಗಿ ನಮ್ಮ ಕಾಡು ಸಂಗಾತಿ ವಿಠಲನ ಮನೆಗೆ ಭೇಟಿ ನೀಡಿದೆವು.
ಇಡೀ ದಿನದ ಒಡನಾಟದಿಂದ ನಮಗೆ ತೀರ ಆತ್ಮೀಯವಾಗಿ ಹೋದ ವಿಠಲನ ಮನೆ ನಾವು ನೋಡಿದ ಇತರ ಮಲೆಕುಡಿಯರ ಮನೆಗಳಿಗಿಂತ ತೀರಾ ಚಿಕ್ಕದಾಗಿತ್ತು. ಬಹುಷ: ಆ ಎಲ್ಲಾ ಕುಟುಂಬಗಳಿಗಿಂತ ಬಡತನದ ಕುಟುಂಬ ವಿಠಲನದ್ದು. ನಾವು ವಿಠಲನ ಮನೆ ಪ್ರವೇಶಿಸಿದಾಗ ಮನೆಯಲ್ಲಿ ಯಾರೂ ಇರಲಿಲ್ಲ. ತಮ್ಮಂದಿರು ರಜೆಯಲ್ಲಿ ನೆಂಟರ ಮನೆಗೆ ಹೋಗಿದ್ದರೆ ಹೆತ್ತವರು ನಾರಾವಿಯ ವಾರದ ಸಂತೆಗೆ ತೆರಳಿದ್ದರು. ವಿಠಲ ಕೈಯಾರೆ ತಯಾರಿಸಿ ಕೊಟ್ಟ ಕಪ್ಪು ಚಹಾ ಕುಡಿದು ಇನ್ನೊಂದು ಬಾರಿ ಬಂದಾಗ ವಿಠಲನ ಮನೆಯಲ್ಲಿಯೇ ಉಳಿಯುವುದೆಂದು ನಿರ್ಧರಿಸಿ ವಿಠಲನ ಜೊತೆಯಲ್ಲಿ ಬೆಟ್ಟವಿಳಿಯತೊಡಗಿದೆವು. ಬರೋಬ್ಬರಿ ಒಂದೂವರೆ ಗಂಟೆ ಕಡಿದಾದ ಇಳಿಜಾರಿಯಲ್ಲಿ ನಡೆದು ನಾವು ಬೈಕು ಇಟ್ಟಿದ್ದ ಅಳಂಬದ ಬಸ್ಸೇ ಬರದ ಬಸ್ಸು ನಿಲ್ದ