ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಬುರ್ಖಾ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ಅಡ್ಡಗಟ್ಟಿದ ಅಖಿಲ ಭಾರತ ವಿದ್ಯಾರ್ಥಿ ಪರಿಷದ್ ಪಂಗಡ

ಭಟ್ಕಳ: ಬುರ್ಖಾ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ಅಡ್ಡಗಟ್ಟಿದ ಅಖಿಲ ಭಾರತ ವಿದ್ಯಾರ್ಥಿ ಪರಿಷದ್ ಪಂಗಡ

Sat, 31 Oct 2009 18:16:00  Office Staff   S.O. News Service
ಭಟ್ಕಳ, ನವೆಂಬರ್ 1:  ಬಂಟ್ವಾಳದ ಬಳಿಕ ಬುರ್ಖಾ ಧರಿಸಿ ಬರುವ ವಿದ್ಯಾರ್ಥಿನಿಯರ ಮೇಲಿನ ಕಿರುಕುಳ ಈಗ ಭಟ್ಕಳಕ್ಕೂ ವ್ಯಾಪಿಸಿದೆ.  

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ, ಬಿ.ಕಾಂ ಮತ್ತು ಬಿ.ಎ.ಎ. ತರಗತಿಗಳಲ್ಲಿ ಓದುತ್ತಿರುವ ಹಲವು ಮುಸ್ಲಿಂ ವಿದ್ಯಾರ್ಥಿನಿಯರನ್ನು ಬುರ್ಖಾ ಧರಿಸಿಕೊಂಡು ಕಾಲೇಜಿಗೆ ಆಗಮಿಸುದನ್ನು ತಡೆದ ಗುಂಪು ಬುರ್ಖಾ ಧರಿಸುವುದನ್ನು ಬಿಡದಿದ್ದರೆ ಹಲ್ಲೆ ನಡೆಸುವುದಾಗಿ ಬೆದರಿಕೆ ಒಡ್ಡಿರುವುದನ್ನು ವಿದ್ಯಾರ್ಥಿನಿಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ತಮ್ಮನ್ನು ಪಾಕಿಸ್ತಾನಿಗಳೆಂದೂ, ಭಯೋತ್ಪಾದಕರೆಂದೂ ಬಣ್ಣಿಸಲಾಗುತ್ತಿದ್ದು ವಿದ್ಯಾರ್ಥಿ ಸಮೂಹದಿಂದ ಅವಮಾನ ಎದುರಿಸಬೇಕಾಗುತ್ತಿದೆ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.

ಪುಂಡಾಟಿಕೆಯ ಮೂಲಕ ಬುರ್ಖಾವನ್ನು ವಿರೋಧಿಸುವ ಬಣದ ನಾಯಕತ್ವವನ್ನು ಈಶ್ವರ ನಾಯಕ್ ಎಂಬ ವಿದ್ಯಾರ್ಥಿ ವಹಿಸಿದ್ದು ಅವರ ವಿರುದ್ಧ ಪ್ರಾಂಶುಪಾಲರಲ್ಲಿ ದೂರು ನೀಡಲಾಗಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.  

ಈ ಬಗ್ಗೆ ಪ್ರಾಂಶುಪಾಲರಾದ ಡಾ. ಐ.ಆರ್. ಖಾನ್ ರವರಲ್ಲಿ ವಿಚಾರಿಸಿದಾಗ ಈ ನಿಟ್ಟಿನಲ್ಲಿ ಮಂಗಳವಾರ ಸಿ.ಡಿ.ಸಿ. College Development Committee (CDC)  ಸಭೆಯೊಂದನ್ನು ಕರೆಯಲಾಗಿದ್ದು ಸಭೆಯಲ್ಲಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

ಕಾಲೇಜು ಆಗಸ್ಟ್ 2009 ರಿಂದ ಪ್ರಾರಂಭವಾದಾಗಿನಿಂದಲೂ ಒಟ್ಟು ಹತ್ತು ವಿದ್ಯಾರ್ಥಿನಿಯರು ಬುರ್ಖಾ ಧರಿಸಿಕೊಂಡೇ ಬರುತ್ತಿದ್ದು ಇದುವರೆಗೂ ಯಾವುದೇ ತೊಂದರೆಯಾಗಿರಲಿಲ್ಲ. ಈಗ ಎ.ಬಿ.ವಿ.ಪಿ ಬೆದರಿಕೆಯ ಕಾರಣ ಬುರ್ಖಾ ತೊರೆಯಲಾಗದೇ ತರಗತಿಗಳನ್ನೇ ಅವರು ತೊರೆಯುತ್ತಿದ್ದಾರೆ.

ಪ್ರಸ್ತುತ ಕಾಲೇಜಿನಲ್ಲಿ ಯಾವುದೇ ಸಮವಸ್ತ್ರದ ಹಂಗಿಲ್ಲದಿದ್ದು ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಇಷ್ಟದ ದಿರಿಸುಗಳನ್ನು ಧರಿಸಬಹುದಾಗಿದೆ, ಬುರ್ಖಾ ಧರಿಸಲೂ ಕಾಲೇಜಿನ ಆಡಳಿತ ಮಂಡಳಿಯಿಂದ ಯಾವುದೇ ಅಭ್ಯಂತರವಿಲ್ಲ ಎಂದು ಪ್ರಾಂಶುಪಾಲರು ಸ್ಪಷ್ಟಪಡಿಸಿದ್ದಾರೆ.  ಆದರೆ ಪ್ರಸ್ತುತ ಕಡ್ಡಾಯವಾಗಿರುವ ಸಮವಸ್ತ್ರ ಹಿಂದಿನ ಪ್ರಾಂಶುಪಾಲರಾದ ಪ್ರೊ. ಎಸ್.ವಿ.ನಾಯಕ್ ರವರ ನಿರ್ಧಾರವಾಗಿದ್ದು ಮಂಗಳವಾರದ ಸಭೆಯ ಮೂಲಕ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಡಾ. ಐ. ಆರ್ ಖಾನ್ ಕೇವಲ ಎರೆಡೂವರೆ ತಿಂಗಳ ಹಿಂದಷ್ಟೇ ಪ್ರಾಂಶುಪಾಲರ ಹುದ್ದೆ ಅಲಂಕರಿಸಿದ್ದಾರೆ.

ಈ ಬಗ್ಗೆ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ ಸಿ.ಡಿಸಿ ಅಧ್ಯಕ್ಷ ಹಾಗೂ ಭಟ್ಕಳದ ಎಂ.ಎಲ್.ಎ. ಆಗಿರುವ ಜೆ.ಡಿ.ನಾಯಕ್ ರವರು ಭಟ್ಕಳದ ಶಾಂತಿಯುತ ಪರಿಸರವನ್ನು ಹಾಳುಗೆಡವಲು ದುಷ್ಟ ಶಕ್ತಿಗಳ ಕೈವಾಡವಿದು ಎಂದು ಬಣ್ಣಿಸಿದ್ದಾರೆ. ಬುರ್ಖಾ ಧರಿಸಿ ಬರುವ ವಿದ್ಯಾರ್ಥಿನಿಯರನ್ನು ಅಡ್ಡಿಪಡಿಸುವ ವಿದ್ಯಾರ್ಥಿಗಳು ಯಾರೇ ಆಗಿರಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ಅಗತ್ಯಬಿದ್ದರೆ ಕಾಲೇಜಿನಿಂದ ಹೊರಹಾಕಲಾಗಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 


ನಮ್ಮ ಪ್ರತಿನಿಧಿ ವರದಿ


Share: