ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ನವದೆಹಲಿ: ಪರಾಕಾಷ್ಠೆಗೇರಿದ ಭಿನ್ನಮತ - ಬೇಡಿಕೆ ಕೈಬಿಡದಿದ್ದಲ್ಲಿ ಚುನಾವಣೆ - ರೆಡ್ಡಿಗಳಿಗೆ ವರಿಷ್ಠರ ಬೆದರಿಕೆ

ನವದೆಹಲಿ: ಪರಾಕಾಷ್ಠೆಗೇರಿದ ಭಿನ್ನಮತ - ಬೇಡಿಕೆ ಕೈಬಿಡದಿದ್ದಲ್ಲಿ ಚುನಾವಣೆ - ರೆಡ್ಡಿಗಳಿಗೆ ವರಿಷ್ಠರ ಬೆದರಿಕೆ

Sat, 07 Nov 2009 03:21:00  Office Staff   S.O. News Service
ನವದೆಹಲಿ, ನವೆಂಬರ್ 6: ರೆಡ್ಡಿ ಸೋದರರ ಬಂಡಾಯ ಮತ್ತು ವರಿಷ್ಠರ ‘ನಿಷ್ಕ್ರಿಯತೆ’ ಯಿಂದ ಒಂದು ಹಂತದಲ್ಲಿ ರೋಸಿ ಹೋಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪದತ್ಯಾಗಕ್ಕೆ ಮುಂದಾಗಿದ್ದರೇ? 
 
‘ಹೌದು’ ಎನ್ನುತ್ತವೆ ಬಿಜೆಪಿಯ ಉನ್ನತ ಮೂಲಗಳು. ರಾಜನಾಥ ಸಿಂಗ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಯಡಿಯೂರಪ್ಪ ಪದತ್ಯಾಗಕ್ಕೆ ಮುಂದಾಗಿದ್ದರಿಂದಲೇ ಬಿಜೆಪಿ ವರಿಷ್ಠರು, ‘ರೆಡ್ಡಿಗಳು ಬಗ್ಗದಿದ್ದರೆ ಮತ್ತೆ  ಚುನಾವಣೆ ಎದುರಿಸಲು ತಯಾರಾಗಿ’ ಎಂಬುದಾಗಿ ಬೆದರಿಕೆ ಹಾಕಿದ್ದಾರೆ. 

ವರಿಷ್ಠರ ಬೆದರಿಕೆಯ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಹೈದರಾಬಾದ್‌ಗೆ ಧಾವಿಸಿದ್ದಾರೆ. ಅಲ್ಲದೆ, ಬೆಂಗಳೂರಿನಿಂದ ಕರುಣಾಕರ ರೆಡ್ಡಿ ಮತ್ತು ಶ್ರೀರಾಮಲು ಕೂಡಾ ಹೈದರಾಬಾದ್‌ಗೆ ದೌಡಾಯಿಸಿದ್ದಾರೆ. ಅಲ್ಲೇ ರೆಸಾರ್ಟ್‌ನಲ್ಲಿ ತಮ್ಮ ಬೆಂಬಲಿಗ ಶಾಸಕರ ಜತೆ ಮಾತುಕತೆ ಆರಂಭಿಸಿದ್ದಾರೆ. ಶಾಸಕರನ್ನು ಬೆಂಗಳೂರಿಗೆ ಕಳುಹಿಸಿ, ನಂತರ ದೆಹಲಿಗೆ ಮತ್ತೊಮ್ಮೆ ಸಂಧಾನಕ್ಕೆ ಬನ್ನಿ ಎಂದೂ ಜನಾರ್ದನ ರೆಡ್ಡಿ ಅವರಿಗೆ ವರಿಷ್ಠರು ಸೂಚಿಸಿದ್ದಾರೆ. 

ಪದತ್ಯಾಗಕ್ಕೆ ಮುಂದಾಗಿದ್ದ ಯಡಿಯೂರಪ್ಪನವರನ್ನು ಶನಿವಾರವೂ ದೆಹಲಿಯಲ್ಲೇ ಇರುವಂತೆ ವರಿಷ್ಠರು ಸೂಚಿಸಿದ್ದಾರೆ.  
ಸಂಘಪರಿವಾರದ ಮೂಲದಿಂದ ಬಂದು ೨-೩ ಬಾರಿ ವಿಧಾನಸಭೆಗೆ ಆಯ್ಕೆಯಾದವರಲ್ಲಿ ಹಲವರನ್ನು ಸಂಪುಟಕ್ಕೆ ಸೇರಿಸಬೇಕು. ಹಾಗೇನಾದರೂ ಮಾಡಿದಲ್ಲಿ ತಾವು ಸಂಪುಟದಿಂದ ನಿರ್ಗಮಿಸಿ ಪಕ್ಷಕ್ಕಾಗಿ ದುಡಿಯಲು ತಯಾರು ಎಂದು ಜನಾರ್ದನ ರೆಡ್ಡಿ ವರಿಷ್ಠರಿಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ವರಿಷ್ಠರ ಮುಂದೆ ಇದಕ್ಕೆ ಯಡಿಯೂರಪ್ಪ ಒಪ್ಪಿಕೊಂಡಿರುವುದನ್ನು ತಿಳಿದ ಜನಾರ್ದನ ರೆಡ್ಡಿ ಅವರು ನಾಯಕರ ಮುಂದೆ ಸ್ವಲ್ಪ ಸಂತಸ ವ್ಯಕ್ತಪಡಿಸಿದ್ದಾರೆ. 

ರೆಡ್ಡಿ ತಲೆ ಬಾಗುತ್ತಾರೆಯೇ?:ಯಡಿಯೂರಪ್ಪ ತಲೆದಂಡವೇ ಬೇಕು ಎಂದು ಹಲವು ಬಾರಿ ಸಾರ್ವಜನಿಕವಾಗಿ ಸಾರಿ ಸಂಜೆ ಹೈದರಾಬಾದ್ ವಿಮಾನ ಹತ್ತಿದ ಜನಾರ್ದನರೆಡ್ಡಿ ದೆಹಲಿಯ ಸಂಧಾನದ ಮೇಜಿಗೆ ಮಾರನೆಯ ದಿನ ಮರಳುತ್ತಾರೆಯೇ? ಬಿಜೆಪಿಯ ತಲೆಯಾಳುಗಳ್ಯಾರೂ ಈ ಪ್ರಶ್ನೆಗೆ ಎದೆ ತಟ್ಟಿ ಉತ್ತರ ಹೇಳುವ ಸ್ಥಿತಿ ಶುಕ್ರವಾರ ರಾತ್ರಿ ದೆಹಲಿಯಲ್ಲಿ ಇರಲಿಲ್ಲ. ಆದರೆ, ವರಿಷ್ಠರ ಪ್ರಕಾರ ಜನಾರ್ದನ ರೆಡ್ಡಿ ವಾಪಸ್ ದೆಹಲಿಗೆ ಬರಬೇಕು. 
ಜನಾರ್ದನ ರೆಡ್ಡಿ ವರಿಷ್ಠರಿಗೆ ತಲೆಬಾಗದೆ ಬೆಂಬಲಿಗರ ಒತ್ತಡಕ್ಕೆ ಕಟ್ಟು ಬಿದ್ದು ಸಾಮೂಹಿಕ ರಾಜಿನಾಮೆ ಕೊಡಿಸಿ ಸರ್ಕಾರವನ್ನು ಕೆಡವುತ್ತಾರೆಯೇ ಹಾಗೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಜತೆ ಕೈಜೋಡಿಸಿ ಚುನಾವಣೆ ಎದುರಿಸುತ್ತಾರೆಯೇ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. 

ಗಾಂಧಿ ಸಮಾಧಿಗೆ ಸಿ‌ಎಂ ಭೇಟಿ: ಬೆಳಗ್ಗೆ ರಾಜಘಾಟ್‌ನ ಗಾಂಧೀ ಸಮಾಧಿಗೆ ತೆರಳಿ ಮಹಾತ್ಮನ ದೇಹದ ಬೂದಿ ಬೆರೆತ ಮಣ್ಣಿನ ವಾತಾವರಣದಲ್ಲಿ ‘ಅರ್ಧ ತಾಸು ಆನಂದದಿಂದ ಕಳೆದ’ ಯಡಿಯೂರಪ್ಪ ಅವರಿಗೆ ಸುಷ್ಮಾ ಸ್ವರಾಜ್ ಅವರಿಂದ ದೂರವಾಣಿ ಕರೆ. 
‘ಸಂಜೆ ಅಡ್ವಾಣಿ ಮನೆಯ ಸಭೆಗೆ ಬನ್ನಿ... ಎಲ್ಲ ಬಗೆಹರಿಯಲಿದೆ’ ಎಂಬ ಅಭಯ ಕೇಳಿದ ಅವರ ಆನಂದ ಇಮ್ಮಡಿಯಾಗಿತ್ತು. ಒಂದೆರಡು ಕಿಲೋಮೀಟರು ಅಂತರದಲ್ಲಿರುವ ಸುಷ್ಮಾ ಮತ್ತು ವೆಂಕಯ್ಯನಾಯ್ಡು ಮನೆಗಳ ಹೊಸ್ತಿಲನ್ನು ಇಂದು ಹಲವು ಬಾರಿ ತುಳಿದ ಜನಾರ್ದನರೆಡ್ಡಿ ಅವರು ತಮ್ಮ ಬೇಡಿಕೆ ಹಿಂದೆಗೆದ ಯಾವುದೇ ಸೂಚನೆಗಳಿಲ್ಲ. ಒಂದು ವೇಳೆ ಇದ್ದರೆ ಅದನ್ನು ಅವರು ಅತ್ಯದ್ಭುತವಾಗಿ ಮರೆಮಾಚಿ ಹೈದರಾಬಾದ್‌ಗೆ ತೆರಳಿದ್ದಾರೆ. ಅಲ್ಲಿನ ರೆಸಾರ್ಟ್‌ನಲ್ಲಿ ತಮ್ಮ ‘ರಕ್ಷಣೆ’ಯಲ್ಲಿರುವ ಶಾಸಕರನ್ನು ಖುದ್ದಾಗಿ ಕಂಡು ಹೈಕಮಾಂಡ್ ಬೆದರಿಕೆಗೆ ಜಗ್ಗುವ ಅಗತ್ಯ ಇಲ್ಲ ಎಂದು ಹೇಳುವರೇ? ಅಥವಾ ತೋರಿಕೆಗೆ ಕಠಿಣ ಕವಚ ತೊಟ್ಟು ಒಳಗೊಳಗೆ ‘ಸುರಕ್ಷಿತ ಗೌರವಾನ್ವಿತ ಹೊರದಾರಿ’ಯನ್ನು ರೂಪಿಸಿಕೊಂಡು ದೆಹಲಿಯ ಸಂಧಾನದ ಮೇಜಿಗೆ ಮರಳುವರೇ ಎಂಬುದು ಕಾದು ನೋಡಬೇಕಿರುವ ಸಂಗತಿ. 

ಆಡ್ವಾಣಿ ನಿವಾಸದಲ್ಲಿ ಸಭೆ:ಬಹು ನಿರೀಕ್ಷೆ ಮೂಡಿಸಿದ್ದ ಅತಿರಥ ಮಹಾರಥಿಗಳ ಶುಕ್ರವಾರ ಸಂಜೆಯ ಸಭೆ ಬಿಜೆಪಿಯ ‘ಲೋಹಪುರುಷ’ ಎಲ್.ಕೆ.ಆಡ್ವಾಣಿ ನಿವಾಸದಲ್ಲಿ ಜರುಗಿದ್ದೇನೋ ಹೌದು. ಅಧ್ಯಕ್ಷ ರಾಜನಾಥ್‌ಸಿಂಗ್, ಅರುಣ್ ಜೇಟ್ಲಿ, ವೆಂಕಯ್ಯನಾಯ್ಡು, ಅನಂತಕುಮಾರ್ ಅಲ್ಲದೆ ರೆಡ್ಡಿಗಳಿಗೆ ಮಮತೆಯ ಮಡಿಲು ನೀಡಿರುವ ತಾಯಿ ಸುಷ್ಮಾ ಸ್ವರಾಜ್ ಕೂಡ ಈ ಸಭೆಯಲ್ಲಿ ಇದ್ದರು. ಆದರೆ, ಹೊರಗೆ ಕಾಯುತ್ತಿದ್ದ ಸುದ್ದಿಗಾರರ ಸೇನೆಯ ಜೊತೆ ಹೆಮ್ಮೆಯಿಂದ ಹಂಚಿಕೊಳ್ಳಬಹುದಾದ ಒಳ್ಳೆಯ ಸುದ್ದಿಯೇನೂ ಈ ಸಭೆಯಲ್ಲಿ ರೂಪು ತಳೆಯಲಿಲ್ಲ. 
ವರಿಷ್ಠರ್ಯಾರೂ ಹೊರ ಬರಲಿಲ್ಲ. ತಾಸು ಹೊತ್ತಿನ ನಂತರ ಹೊರಬಿದ್ದ ಯಡಿಯೂರಪ್ಪ ತಮ್ಮ ಮೇಲೆ ಮುಗಿಬಿದ್ದ ಪತ್ರಕರ್ತರಿಗೆ ಎರಡು ಸಾಲಿನ ವಿವರಣೆ ನೀಡಿ ಅಟಲ್‌ಬಿಹಾರಿ ವಾಜಪೇಯಿ ದರ್ಶನಕ್ಕೆ ತೆರಳಿದರು. ಮುಂದಿನ ೨೪ ತಾಸುಗಳಲ್ಲಿ ಬಿಕ್ಕಟ್ಟು ಬಗೆಹರಿಯುತ್ತದೆ. ವರಿಷ್ಠರ ಸೂಚನೆ ಪ್ರಕಾರ ನಾಳೆಯೂ ದೆಹಲಿಯಲ್ಲಿ ಇರುತ್ತೇನೆ ಎಂದ ಯಡಿಯೂರಪ್ಪ ದನಿಯಲ್ಲಿ ನಿರಾಸೆಯನ್ನು ಹತ್ತಿಕ್ಕುವ ಪ್ರಯತ್ನ ನಿಚ್ಚಳವಿತ್ತು. 

ಕದಡಿದ ನೀರಲ್ಲಿ ಮೀನು ಹಿಡಿಯಲು ಹೊರಟರು: ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಒಡೆದು ಹೋಗಿರುವ ವರಿಷ್ಠರ ಪೈಕಿ ಮೂವರು ಮಹಾರಥಿಗಳು ರಾಜ್ಯ ಬಿಜೆಪಿ ಬಿಕ್ಕಟ್ಟಿನ ಕದಡಿದ ನೀರಿನಲ್ಲಿ ಮೀನು ಹಿಡಿಯಲು ಹೊರಟದ್ದೇ ಈ ಬಿಕ್ಕಟ್ಟು ಇಷ್ಟು ಬಿಗಡಾಯಿಸಲು ಕಾರಣ ಎನ್ನುತ್ತವೆ ಪಕ್ಷದ ಉನ್ನತ ಮೂಲಗಳು. 
ವರಿಷ್ಠ ಮಂಡಳಿಯ ಮೂವರು ನಾಯಕರು ಈ ಬಿಕ್ಕಟ್ಟು ಸಲೀಸಾಗಿ ಬಗೆಹರಿಯುವ ಬಗೆಗೆ ಉತ್ಸುಕರಾಗಿಲ್ಲ. ಒಬ್ಬರು ಅಧ್ಯಕ್ಷ ರಾಜನಾಥ್‌ಸಿಂಗ್ ವಿರುದ್ಧ ಕತ್ತಿ ಮಸೆದರೆ, ಇನ್ನೊಬ್ಬರಿಗೆ ಕರ್ನಾಟಕ ರಾಜ್ಯದ ಬಿಜೆಪಿ ಆಗು ಹೋಗುಗಳನ್ನು ನಿಯಂತ್ರಿಸುವ ಬಯಕೆ. ಸಂಧಾನದ ಪೂರ್ಣ ಅಧಿಕಾರ ನನ್ನ ಕೈಗೆ ಸಿಗಲಿ. ಯಾರೋ ಮಾಡುತ್ತಿದ್ದ ಸಂಧಾನವನ್ನು ಅರ್ಧದಲ್ಲಿ ನನಗೆ ವಹಿಸಿದರೆ ನಾನ್ಯಾಕೆ ಮಾಡಬೇಕು ಎಂಬುದು ಅವರ ಮಮತೆಯ ಮರ್ಮ. 
ಆದರೆ, ಇಂದು ೫೩ ಶಾಸಕರ ರಾಜೀನಾಮೆಯ ಪತ್ರಗಳನ್ನು ಜನಾರ್ದನರೆಡ್ಡಿ ದಿಲ್ಲಿಯಲ್ಲಿ ಝಳಪಿಸಿದಾಗ ಪರಿಸ್ಥಿತಿ ಕೈ ಮೀರೀತು ಎಂದು ಭಾವಿಸಿದ ಲೋಹಪುರುಷ ಗಂಟಲೇರಿಸಿದರು ಎನ್ನಲಾಗಿದೆ.ಗುರುವಾರ ರಾತ್ರಿಯೇ ಮುಗಿಯುತ್ತದೆ ಎಂದು ಭಾವಿಸಿದ್ದ ಬಿಕ್ಕಟ್ಟು ಮತ್ತೊಂದು ದಿನಕ್ಕೆ ಮುಂದೆ ಹೋದಾಗ ವ್ಯಗ್ರರಾಗಿದ್ದರು ಯಡಿಯೂರಪ್ಪ. ಶುಕ್ರವಾರ ಬೆಳಗ್ಗೆ ಎದ್ದು ರಾಜಘಾಟ್‌ನ ಗಾಂಧೀ ಸಮಾಧಿಗೆ ತೆರಳಿ ಮನಶಾಂತಿ ಅರಸಿದರು. 
ಗಾಂಧೀ ಸಮಾಧಿಯ ಸನ್ನಿಧಿಯಲ್ಲಿ ಅರ್ಧ ಗಂಟೆ ಆನಂದವಾಗಿ ಕಾಲ ಕಳೆದೆ ಎಂದ ಅವರು ಶುಕ್ರವಾರ ರಾತ್ರಿ ಮತ್ತೆ ನಿದ್ದೆಗೆಡಬೇಕಿದೆ.ಬಿಕ್ಕಟ್ಟು ಮಹಾ ಮಂದಗತಿಯಲ್ಲಿ ಅಂಗುಲ ಅಂಗುಲವಾಗಿ ಮುಂದಡಿಯಿಟ್ಟು ಪರಿಹಾರ ಕಂಡುಕೊಳ್ಳುತ್ತಿದೆ. ರೆಡ್ಡಿಗಳು ಹೊಸ ಹೊಸ ಬೇಡಿಕೆಗಳನ್ನು ಸಂಧಾನದ ಮೇಜಿಗೆ ತರುತ್ತಿದ್ದಾರೆ ಎಂದು ವರಿಷ್ಠರೊಬ್ಬರು ಸುದ್ದಿಗಾರರಿಗೆ ತಿಳಿಸಿದರು. 
ಈ ಮಧ್ಯೆ, ಶಾಸಕರ್ಯಾರೂ ರಾಜೀನಾಮೆ ನೀಡಿಲ್ಲ. ಅದೆಲ್ಲ ಸತ್ಯದೂರ ಎಂದು ವೆಂಕಯ್ಯನಾಯ್ಡು ಮತ್ತು ಅರುಣ್ ಜೇಟ್ಲಿ ಪ್ರತ್ಯೇಕವಾಗಿ ಸುದ್ದಿಗಾರರಿಗೆ ಸ್ಪಷ್ಟೀಕರಣ ನೀಡಿದ್ದಾರೆ. 

ಬಿಜೆಪಿ ಬಿಕ್ಕಟ್ಟು ಸಡಿಲಿಸುವ ರಾಜಿ ಸೂತ್ರಗಳ ಸ್ಥಿತಿಗತಿ 
ರಾಜ್ಯ ಬಿಜೆಪಿ ಬಿಕ್ಕಟ್ಟನ್ನು ಬಗೆಹರಿಸಲು ಯಡಿಯೂರಪ್ಪ ಮತ್ತು ರೆಡ್ಡಿ ಸೋದರರ ನಡುವೆ ಸರಿದಾಡುತ್ತಿರುವ ರಾಜೀ ಸೂತ್ರಗಳ ಸ್ಥಿತಿಗತಿ ಏನು? 
೧ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಕೈಬಿಟ್ಟು, ಪ್ರಿನ್ಸಿಪಲ್ ಸೆಕ್ರೆಟರಿ ವಿ.ಪಿ.ಬಳಿಗಾರ್‌ರನ್ನು ದೂರವಿಡಬೇಕು. 
ಎರಡನ್ನೂ ಒಪ್ಪಿರುವ ಸಿ‌ಎಂ, ಬಳಿಗಾರ್ ರನ್ನು ವರ್ಗಾಯಿಸಿದ್ದಾರೆ. ರೆಡ್ಡಿ ಸಂಧಾನಕ್ಕೆ ಬಂದರೆ ಶೋಭಾರನ್ನೂ ಕೈಬಿಡಲಿದ್ದಾರೆ. 
ಆದರೆ ಆರೆಸ್ಸೆಸ್ ಕಾರ್ಯಕರ್ತೆಯಾಗಿ ಸಂಘದ ನಿರ್ದೇಶನದ ಮೇರೆಗೆ ಬಿಜೆಪಿಗೆ ಬಂದಿರುವ ಶೋಭಾ ಅವರಿಗೆ ಪಕ್ಷದ ರಾಜ್ಯ ಅಥವಾ ರಾಷ್ಟ್ರಮಟ್ಟದಲ್ಲಿ ಗೌರವಾನ್ವಿತ ಹುದ್ದೆ ಕಲ್ಪಿಸಬೇಕು. ಅಂದಾಕ್ಷಣ ಪಕ್ಷದ ರಾಜ್ಯಾಧ್ಯಕ್ಷೆ ಎಂದೇನೂ ಅಲ್ಲ. 
೨ಮಂತ್ರಿಗಳು ತಮಗೆ ಬೇಕಾದ ಅಧಿಕಾರಿಗಳನ್ನು ತಮ್ಮ ಇಲಾಖೆಯ ಪ್ರಮುಖ ಹುದ್ದೆಗಳು ಮತ್ತು ಆಪ್ತಸಿಬ್ಬಂದಿಯಾಗಿ ನೇಮಕ ಮಾಡಿಕೊಳ್ಳಲು ಅವಕಾಶ ಕೊಡಬೇಕು. 
ಯಡಿಯೂರಪ್ಪ ಒಪ್ಪಿದ್ದಾರೆ. 
೩ರೆಡ್ಡಿಗಳು ಮತ್ತು ಶೆಟ್ಟರ್ ಬೆಂಬಲಿಗ ಶಾಸಕ ಪ್ರಮುಖರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು. 
ಯಡಿಯೂರಪ್ಪ ಒಪ್ಪಿದ್ದಾರೆ. 
೪ಸಮನ್ವಯ ಸಮಿತಿ ರಚಿಸಿ ಒದಗಿ ಬರುವ ಸಮಸ್ಯೆಗಳು, ಪ್ರಮುಖ ನಿರ್ಧಾರಗಳು ಮತ್ತು ನೀತಿ ನಿರ್ಧಾರ ಕುರಿತ ಸಂಗತಿಗಳ ಕುರಿತು ಮುಂದಾಗಿಯೇ ಸಮಾಲೋಚನೆ ನಡೆಸಬೇಕು. 
ಈಗಾಗಲೆ ಸಮನ್ವಯ ಸಮಿತಿಯೊಂದು ಉಂಟು. ಈ ಸಮಿತಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸದಾನಂದಗೌಡ ಅಧ್ಯಕ್ಷರು. ಯಡಿಯೂರಪ್ಪ, ಅನಂತಕುಮಾರ್, ಆರೆಸ್ಸೆಸ್‌ನ ವಿ.ಸತೀಶ್ ಮತ್ತು ಸಂತೋಷ್ ಈ ಸಮನ್ವಯ ಸಮಿತಿಯ ಸದಸ್ಯರು. 
 
ವರಿಷ್ಠರು ಬಯಸಿದರೆ ಈ ಸಮಿತಿಯನ್ನು ವಿಸ್ತರಿಸಿ ಒಂಬತ್ತು ಮಂದಿ ಸದಸ್ಯರಿಗೆ ಜಾಗ ನೀಡಲು ಯಡಿಯೂರಪ್ಪ ಅವರಿಗೆ ಅಭ್ಯಂತರ ಇಲ್ಲ. ಈಶ್ವರಪ್ಪ, ಶೆಟ್ಟರ್ ಜೊತೆಗೆ ರೆಡ್ಡಿ ಸೋದರರ ಪೈಕಿ ಒಬ್ಬರನ್ನು ಈ ಸಮಿತಿಗೆ ತೆಗೆದುಕೊಳ್ಳಲು ಅವರು ತಯಾರಿದ್ದಾರೆ. 
೫ಜಗದೀಶ್ ಶೆಟ್ಟರ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. 
 
ಯಡಿಯೂರಪ್ಪ ಸಿದ್ಧ. 
೬ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಿ ರೆಡ್ಡಿ ಬೆಂಬಲಿಗ ಸಚಿವರಿಗೂ ಉಸ್ತುವಾರಿ ಹೊಣೆ ನೀಡಬೇಕು. 
 ಈಗ ಅಸಾಧ್ಯ... ಪರಿಸ್ಥಿತಿ ತಣ್ಣಗಾಗಲಿ. 
೭ರೆಡ್ಡಿಗಳು ಬಯಸುವ ಅಧಿಕಾರಿಗಳ ವರ್ಗಾವಣೆ ರದ್ದು ಮಾಡುವುದು. 
ರದ್ದು ಅಸಾಧ್ಯ. ಬೇಕಾದರೆ ರೆಡ್ಡಿಗಳ ಜೊತೆ ಚರ್ಚಿಸಿ ಅವರಿಗೆ ಒಪ್ಪಿಗೆ ಇರುವ ಇತರೆ ಒಳ್ಳೆಯ ಅಧಿಕಾರಿಗಳನ್ನು ನೇಮಕ ಮಾಡಲು ಮುಖ್ಯಮಂತ್ರಿ ತಯಾರು. 
ಉಳಿದಂತೆ ಅದಿರು ಹೇರುಗಳನ್ನು ಸಾಗಿಸುವ ಲಾರಿಗಳಿಗೆ ವಿಧಿಸಿರುವ ೧೦೦೦ ರು. ಸುಂಕ ರದ್ದು ಮಾಡಲು ಯಡಿಯೂರಪ್ಪ ತಯಾರಿಲ್ಲ. ರೆಡ್ಡಿಗಳೂ ಈ ವಿಷಯವನ್ನು ಅಷ್ಟು ದೊಡ್ಡದಾಗಿ ಮಾಡಿಲ್ಲ. 
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನೇರವಾಗಿ ಕಂಡು ಮಾತಾಡಿಸುವ ಮುಕ್ತ ಅವಕಾಶವನ್ನು ಶಾಸಕರಿಗೆ ಕಲ್ಪಿಸಬೇಕು ಎಂಬ ಸಲಹೆಯೂ ಉಂಟು.

ಸೌಜನ್ಯ: ಕನ್ನಡಪ್ರಭ

Share: