ಭಟ್ಕಳ: ಮುರುಡೇಶ್ವರದಿಂದ ಭಟ್ಕಳದ ಕಡೆಗೆ ಬರುತ್ತಿದ್ದ ಇಂಡಿಕಾ ಕಾರೊಂದು (ಎಮ್.ಎಚ್.04/ಎ.ಎಸ್.3771) ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಪ್ರಯಾಣಿಕರ ಟೆಂಪೋ ವಾಹನ(ಕೆಎ47/1444)ಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ, ಕಾರು ಪ್ರಯಾಣಿಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮುರುಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಗುಮ್ಮನ ಹಕ್ಕಲ ಬಳಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ರವಿವಾರ ಬೆಳಿಗ್ಗೆ ೭.೧೫ರ ಸುಮಾರಿಗೆ ನಡೆದಿದೆ.
ಮೃತ ವ್ಯಕ್ತಿಯನ್ನು ಮುಂಬಯಿ ನಿವಾಸಿ ಗೌರವ ಸಿಂಗ್ ತಂದೆ ಸಬರಾಜ್ ಸಿಂಗ್(28) ಎಂದು ಗುರುತಿಸಲಾಗಿದೆ. ಕಾರು ಚಾಲಕ ದುರ್ಗಾ ಪ್ರಸಾದ್ ರಾಮ ಭಟ್ (26) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆರೆನ್ನೆಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತ ಮೂಲತಃ ಕೇರಳ ಕಾಸರಗೋಡಿನವನಾಗಿದ್ದು, ಕೆಲಸಕ್ಕಾಗಿ ಮುಂಬಯಿಯಲ್ಲಿ ನೆಲೆಸಿದ್ದ ಎಂದು ತಿಳಿದು ಬಂದಿದೆ. ಈ ಸಂಬಂಧ ಟೆಂಪೋ ಚಾಲಕ ಸುರೇಶ ದುರ್ಗಪ್ಪ ಬಸ್ತಿ, ಕಾಯ್ಕಿಣಿ ಎಂಬುವವರು ಪೊಲೀಸರಿಗೆ ದೂರನ್ನು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಎಸೈ ಸುಂದರೇಶ ಹೊಳ್ಳಣ್ಣನವರ್ ತನಿಖೆಯನ್ನು ಮುಂದುವರೆಸಿದ್ದಾರೆ.