ಭಟ್ಕಳ: ಅಯ್ಯಪ್ಪ ಸ್ವಾಮಿ ಮಾಲಾಧಾರಿಯಾಗಿ ಕಳೆದ ಆ.31ರಂದು ಜಮ್ಮು ಕಾಶ್ಮೀರ ವೈಷ್ಣದೇವಿ ಮಂದಿರದಿಂದ ಶಬರಿಮಲೆಗೆ ಹೊರಟು ಪಾದಯಾತ್ರೆಯ ಮೂಲಕ ಮುರುಡೇಶ್ವರ ತಲುಪಿದ ಮಂಗಳೂರಿನ ನಿವಾಸಿ ಪ್ರಭಾತ ಕುಮಾರ ಕರಿಯಪ್ಪ (37) ಅವರನ್ನು ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿ ಸೇವಾ ಟ್ರಸ್ಟ್ (ರಿ) ಮುರುಡೇಶ್ವರ ಇದರ ಸದಸ್ಯರು ಮುರುಡೇಶ್ವರ ಸನ್ನಿಧಾನದಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮುರುಡೇಶ್ವರ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟಿನ ಅಧ್ಯಕ್ಷರು, ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಾದ ಗೋವಿಂದ ನಾಯ್ಕ, ಗುರುಸ್ವಾಮಿ ಲೊಕೇಶ, ಟ್ರಸ್ಟಿನ ಉಪಾಧ್ಯಕ್ಷ ಪಾಂಡುರಂಗ ನಾಯ್ಕ, ಯೋಗರಾಜ ಹರಿಕಾಂತ ಮುಂತಾದವರು ಉಪಸ್ಥಿತರಿದ್ದರು.
ಅಯಪ ಮಾಲಾಧಾರಿ ಪ್ರಭಾತ ಕಳೆದ ಆ.24ರಂದು ಮಂಗಳೂರಿನಲ್ಲಿ ಮಾಲಾಧಾರಣೆ ಮಾಡಿ ವಿಮಾನದ ಮೂಲಕ ಕಾಶ್ಮೀರವನ್ನು ತಲುಪಿ, ವೈಷ್ಣದೇವಿ ಮಂದಿರದಲ್ಲಿ ಇರುಮುಡಿಕಟ್ಟಿಕೊಂಡು ಶಬರಿಮಲೆ ಯಾತ್ರೆ ಆರಂಭಿಸಿದ್ದು, ಈಗಾಗಲೇ 3300ಕಿಮೀ.ಗೂ ಹೆಚ್ಚು ದೂರ ಕ್ರಮಿಸಿದ್ದಾರೆ. ಈ ಹಿಂದೆಯೇ ಮ೦ಗಳೂರಿನ ಶಿವ ಪದವು ಪಂಚಮುಖಿ ಮಹಾಗಣಪತಿ ಮತ್ತು ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ಚರಣ್ ಮಹಾರಾಜರ ಮಾರ್ಗದರ್ಶನದಲ್ಲಿ 5 ವಿವಿಧ ಪುಣ್ಯಕ್ಷೇತ್ರಗಳಿಂದ ಪಾದಯಾತ್ರೆ ಆರಂಭಿಸಿದ್ದ ಇವರು, ಈ ವರ್ಷ ವೈಷ್ಟೋದೇವಿ ದೇವಾಲಯದಿಂದ ಪಾದಯಾತ್ರೆ ಕೈಗೊಂಡಿದ್ದಾರೆ. ಮಾಲಾಧಾರಿ ಪ್ರಭಾತ್ ಸರಿಸುಮಾರು 4000ಕಿಮೀ, ಕ್ರಮಿಸಿ ಜ.10ರಂದು ಶಬರಿಮಲೆಯನ್ನು ತಲುಪಲಿದ್ದಾರೆ.