ಕಾರವಾರ, ನವೆಂಬರ್ 29: ಕೈಗಾ ಅಣುಸ್ಥಾವರ ಘಟಕ-೧ರಲ್ಲಿ ನಡೆದ ಭಾರಜಲ ಸೋರಿಕೆ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆದಿದ್ದು ಮುಂಬೈನಿಂದ ಆಗಮಿಸಿದ ವಿಜ್ಞಾನಿಗಳ ಮತ್ತು ಹಿರಿಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ ಮರಳಿದ್ದಾರೆ. ಅಣುಸ್ಥಾವರದ ಒಳಗೆ ನಡೆದ ಸಣ್ಣ ಪ್ರಮಾಣದ ಅವಘಡ ಘಟನೆಯ ಕಾರಣಗಳನ್ನು ಇದೀಗ ಶೋಧಿಸಲಾಗುತ್ತದೆ.
ಸ್ಥಾವರ ವಾರ್ಷಿಕ ನಿರ್ವಹಣೆಯ (ಮೆಂಟೇನೆನ್ಸ) ಕಾಲದಲ್ಲಿ ಮನುಷ್ಯ ತಪ್ಪಿನಿಂದ (ಹ್ಯುಮನ್ ಎರರ್) ಅವಘಡ ನಡೆಯಿತೇ? ಅಥವಾ ಪೈಪ್ ಲೈನ್ ಲೀಕೇಜ್ ನಿಂದ ಟ್ರೇಶಿಯಂ ಸೋರಿಕೆಯಾಯಿತೇ? ಸ್ಥಾವರದ ಒಳಗಿದ್ದ ಸಿಬ್ಬಂದಿ ಅಸ್ವಸ್ಥಗೊಳ್ಳಲು ಕಾರಣ ಏನು ಎಂಬ ಶೋಧ ಕಾರ್ಯ ಇದೀಗ ಆರಂಭವಾಗಿದೆ. ಸ್ಥಾವರದ ಸಿಬ್ಬಂದಿಗಳಲ್ಲಿನ ರೇಡಿಯೇಶನ್ ಪರೀಕ್ಷೆ ಸಹ ಮುಗಿದಿದೆ. ಈ ವರದಿಗಳ ವಿಶ್ಲೇಷಣೆ ಮುಂಬೈನಲ್ಲಿರುವ ಬಾಬಾ ಆಟೋಮಿಕ್ ರಿಸರ್ಚ ಸೆಂಟರ್ನಲ್ಲಿ ನಡೆಯಲಿದೆ. ಅಲ್ಲಿಂದ ವರದಿ ಬಂದ ನಂತರ ಅವಘಡಕ್ಕೆ ನಿಜವಾದ ಕಾರಣಗಳೇನು? ಎಂದು ತಿಳಿದು ಬರಲಿದೆ.
ಕೈಗಾ ಘಟಕ -೧ ಮೆಂಟೇನೆನ್ಸ ನಡೆವ ವೇಳೆ ವಿದ್ಯುತ್ ಉತ್ಪಾದನೆ ಸಂಪೂರ್ಣ ನಿಂತಿದ್ದ (ಯುನಿಟ್ ಶಟ್ಡೌನ್) ಕಾರಣ ಹೆಚ್ಚಿನ ಅನಾಹುತಗಳು ಸಂಭವಿಸಿಲ್ಲ. ಘಟನೆ ಗುರುವಾರ ಸಂಜೆ ನಡೆಯುತ್ತಿದ್ದಂತೆ ಮುಂಬೈನಲ್ಲಿನ ಅಟೋಮಿಕ್ ಎನರ್ಜಿ ಕೇಂದ್ರ ಕಚೇರಿಗೆ ಮಾಹಿತಿ ರವಾನೆಯಾಗಿದೆ. ತಕ್ಷಣ ಭಾರತೀಯ ಆಟೋಮಿಕ್ ಎನರ್ಜಿ ಕೇಂದ್ರದ ಮುಖ್ಯಸ್ಥ ನಾಗೇಶ್ವರರಾವ್ ಕೈಗಾಕ್ಕೆ ಕಳೆದ ಗುರುವಾರ ರಾತ್ರೋರಾತ್ರಿ ಧಾವಿಸಿ ಘಟನೆಯ ತೀವ್ರತೆ ಪರಿಶೀಲಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಹಿರಿಯ ವಿಜ್ಞಾನಿಗಳ ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿ ಶುಕ್ರವಾರ ಮಧ್ಯಾಹ್ನ ಗೋವಾ ಮಾರ್ಗವಾಗಿ ಮುಂಬೈಗೆ ಪಯಣಿಸಿದ್ದಾರೆ. ಶನಿವಾರ ಮುಂಬೈನಿಂದ ಹಿರಿಯ ವಿಜ್ಞಾನಿಗಳ ಮತ್ತು ಅಧಿಕಾರಿಗಳ ತಂಡ ಆಗಮಿಸಿ, ಘಟನೆಯ ಮಾಹಿತಿ ಪಡೆದಿದೆ. ಅಲ್ಲದೇ ಕೆಲ ಸಂಗತಿ ಮತ್ತು ದಾಖಲೆ ಸಂಗ್ರಹಿಸಿದೆ. ಅವಘಡ ಕುರಿತಂತೆ ಹೆಚ್ಚಿನ ಸಂಶೋಧನೆ ನಡೆದು ವರದಿ ಬಂದ ನಂತರ ಮುಂದಿನ ಕ್ರಮಗಳಾಗಲಿವೆ ಎಂದು ಅಣುಸ್ಥಾವರದ ಅಧಿಕಾರಿಗಳು ಹೇಳುತ್ತಿದ್ದಾರೆ.
ವರದಿ: ನಾಗರಾಜ್ ಹರಪನಹಳ್ಳಿ, ಕಾರವಾರ.