ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ‘ಬ್ಯಾರಿ ಸಾಹಿತ್ಯ -ಸಾಂಸ್ಕೃತಿಕ ಸಂಭ್ರಮ’ ಸಮಾರೋಪ: ಶಿಕ್ಷಣದಲ್ಲಿ ಬ್ಯಾರಿ ಭಾಷೆ ಅಳವಡಿಕೆ ಅಗತ್ಯ: ಡಾ.ಗಣನಾಥ ಎಕ್ಕಾರು

‘ಬ್ಯಾರಿ ಸಾಹಿತ್ಯ -ಸಾಂಸ್ಕೃತಿಕ ಸಂಭ್ರಮ’ ಸಮಾರೋಪ: ಶಿಕ್ಷಣದಲ್ಲಿ ಬ್ಯಾರಿ ಭಾಷೆ ಅಳವಡಿಕೆ ಅಗತ್ಯ: ಡಾ.ಗಣನಾಥ ಎಕ್ಕಾರು

Mon, 15 Feb 2010 03:05:00  Office Staff   S.O. News Service
ಪಡುಬಿದ್ರಿ, ಫೆ.೧೪: ಶಿಕ್ಷಣದಲ್ಲಿ ಬ್ಯಾರಿ ಭಾಷೆಯನ್ನು ಅಳವಡಿಸುವಂತೆ ಸರಕಾರದ ಮೇಲೆ ಒತ್ತಡ ತರುವ ಕಾರ್ಯ ನಡೆಯಬೇಕಾಗಿದೆ ಎಂದು ಜನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರು ಹೇಳಿದ್ದಾರೆ. 

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಪಡುಬಿದ್ರಿಯ ಬಂಟರ ಭವನದಲ್ಲಿ ರವಿವಾರ ಆಯೋಜಿಸಲಾದ ‘ಬ್ಯಾರಿ ಸಾಹಿತ್ಯ -ಸಾಂಸ್ಕೃತಿಕ ಸಂಭ್ರಮ’ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. 

ಬ್ಯಾರಿ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಆ ಬಗ್ಗೆ ಹೆಚ್ಚಿನ ಸಂಶೋಧನೆಗೆ ಅಕಾಡೆಮಿ ಒತ್ತು ನೀಡಬೇಕು. ಬ್ಯಾರಿ ಭಾಷೆಯಲ್ಲಿ ಹೆಚ್ಚು ಹೆಚ್ಚು ಸೃಜನಶೀಲ ಕೃತಿಗಳು ಹೊರಬರಬೇಕು. ಬ್ಯಾರಿಯ ಪ್ರಾಚೀನತೆ ಹಾಗೂ ಇತಿಹಾಸದ ಬಗ್ಗೆ ಶೋಧನೆ ನಡೆಯಬೇಕೆಂದರು.

ಆಧುನಿಕತೆಯಿಂದಾಗಿ ಇಂದು ಜನಪದ ಮರೆಯಾಗುತ್ತಿದ್ದು, ಆ ನಿಟ್ಟಿನಲ್ಲಿ ಅದನ್ನು ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯ ನಡೆಯಬೇಕಾಗಿದೆ. ಜಾಗತೀಕರಣದ ಪ್ರಭಾವದಿಂದ ದೇಶಿಯ ಭಾಷೆಗಳನ್ನು ರಕ್ಷಿಸಬೇಕಾಗಿದೆ. ತುಳುನಾಡಿಗೆ ಬ್ಯಾರಿ ಸಮುದಾಯದ ಮಹತ್ತರ ಕೊಡುಗೆ ನೀಡಿದೆ ಎಂದು ಗಣನಾಥ ಎಕ್ಕಾರು ಹೇಳಿದರು.

ಬೆಳಗ್ಗೆ ನಡೆದ ಮೆಹಂದಿ ಸ್ಪರ್ಧೆಯಲ್ಲಿ ಪ್ರಥಮ ರೋಶ್‌ನಾ ಮೂಲ್ಕಿ, ದ್ವಿತೀಯ ಮಲಿಹಾ ಹೆಜಮಾಡಿ, ತೃತೀಯ ಬಹುಮಾನವನ್ನು ತಹ್‌ಶಿಬಾ ಕಂಚಿನಡ್ಕ ಅವರು ಪಡೆದುಕೊಂಡರು. ಬ್ಯಾರಿ ಹಾಡು ಸ್ಪರ್ಧೆಯಲ್ಲಿ ಪ್ರಥಮ ಅಬ್ದುಲ್ ರಾಝಿಕ್ ಕಾರ್ನಾಡ್, ದ್ವಿತೀಯ ಮಶ್ವತ್ ಆಯಿಶಾ ಉಳ್ಳಾಲ, ತೃತೀಯ ಬಹುಮಾನವನ್ನು ಶೇಖ್ ಆಸೀಫ್ ಪಡುಬಿದ್ರಿ ಗಳಿಸಿದರು.

ಲೇಖನ ಸ್ಪರ್ಧೆಯ ವಿಜೇತರಾದ ಪ್ರಥಮ ರೂಪಾ ಪ್ರಭಾಕರ್ ಚಿಟ್ಪಾಡಿಬೈಲ್, ದ್ವಿತೀಯ ಎ.ಕೆ.ನಂದಾವರ ಪಾಣೆಮಂಗಳೂರು ಹಾಗೂ ತೃತೀಯ ಮರ್ಯಮ್ ಇಸ್ಮಾಯಿಲ್ ಉಳ್ಳಾಲಬೈಲ್ ಅವರಿಗೆ ಇದೇ ಸಂದರ್ಭದಲ್ಲಿ ಬಹುಮಾನವನ್ನು ವಿತರಿಸಲಾಯಿತು. ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಎಂ.ಬಿ.ಅಬ್ದುಲ್ ರಹ್‌ಮಾನ್ ವಹಿಸಿದ್ದರು. 

ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಮಾಜಿ ಸಚಿವ ವಸಂತ ವಿ.ಸಾಲ್ಯಾನ್, ಉಡುಪಿ ತಾಲೂಕು ಗ್ರಾಪಂ ಒಕ್ಕೂಟದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಂದ್ರನಾಥ ಜಿ.ಹೆಗ್ಡೆ ಭಾಗವಹಿಸಿದ್ದರು. 

ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಉಮ್ಮರ್ ಫಾರೂಕ್ ಸ್ವಾಗತಿಸಿದರು. ಅಝೀಝ್ ಹೆಜಮಾಡಿ ವಂದಿಸಿದರು. ಹುಸೇನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶೌಕತ್ ಪಡುಬಿದ್ರಿ ಬಳಗದಿಂದ ಬ್ಯಾರಿ ಜನಪದ ಹಾಡುಗಳು, ಬ್ಯಾರಿ ಖವ್ವಾಲಿ, ಮಿಮಿಕ್ರಿ ಹಾಗೂ ಇಬ್ರಾಹಿಂ ತಣ್ಣೀರುಬಾವಿ ತಂಡದಿಂದ ‘ಪತ್ತ್ ಇನ್ನವುಡೆ ಮುತ್ತು’ ನಾಟಕ ಪ್ರದರ್ಶನಗೊಂಡಿತು.

Share: