ಕಾರವಾರ : ವಾಹನ ತಪಾಸಣೆ ಕರ್ತವ್ಯದಲ್ಲಿದ್ದ ಕಾರವಾರ ಸಂಚಾರ ಠಾಣೆಯ ಪಿಎಸ್ಐ ನಾಗಪ್ಪ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳನ್ನು ಜಪ್ತಿಪಡಿಸಿಕೊಂಡು ಆರೋಪಿತರ ವಿರುದ್ದ ಕಾರವಾರದ ಹಿರಿಯ ಸಿವಿಲ್ ಹಾಗೂ ಸಿಜೆಎಮ್ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ.
ಪ್ರಕರಣಗಳ ವಿಚಾರಣೆ ನಡೆಸಿದ ನ್ಯಾಯಾದೀಶರಾದ ಶ್ರೀಮತಿ ರೇಷ್ಮಾ ರೊಡ್ರಿಗೇಸ್ ರವರು ದಂಡ ವಿಧಿಸಿ ಆದೇಶಿಸಿದ್ದಾರೆ.
ಅಪ್ರಾಪ್ತ ಬಾಲಕ ವಾಹನ ಚಾಲನೆ ಮಾಡಲು ವಾಹನ ನೀಡಿದ್ದ ಪ್ರಕರಣದಲ್ಲಿನ ಮಾಲಿಕರಾದ ನಂದನಗದ್ದಾದ ರೇಷ್ಮಾ ಅಲಿ ಶೇಖ್ ಎಂಬುವವರಿಗೆ 25,500 ರೂ ದಂಡ ವಿಧಿಸಿ ಆದೇಶಿಸಿದ್ದಾರೆ.
ನಿಗದಿತ ಸಾಮರ್ಥ್ಯ ಕ್ಕಿಂತ ಹೆಚ್ಚಿನ ಸರಕು ಸಾಗಣೆ ಮಾಡಿದ್ದ ಪ್ರಕರಣದಲ್ಲಿನ ಲಾರಿ ನಂ KA-14,A-3282 ನೆದ್ದರ ಚಾಲಕ ದಾವಣಗೆರೆ ದೊಡ್ಡತ್ತಿಹಳ್ಳಿಯ ಶಿವಕುಮಾರ ಪರಮೇಶ್ವರಪ್ಪ ಎಂಬಾತನಿಗೆ ರೂ 29,100/- ದಂಡ ಹಾಗೂ ಮತ್ತೊಂದು ಗೂಡ್ಸ್ ಲಾರಿ ನಂ KA-47, 7641 ನೆದ್ದರ ಚಾಲಕ ಉಡುಪಿಯ ರಾದೇಶ ರವಿರಾಜ ಎಂಬಾತನಿಗೆ ರೂ 24,000/- ದಂಡ ವಿಧಿಸಿದ್ದಾರೆ.
ಸಾರಾಯಿ ಕುಡಿದು ವಾಹನ ಚಲಾಯಿಸಿದ ಪ್ರಕರಣದಲ್ಲಿ ಬಿಣಗಾದ ಜನಾರ್ಧನ ವೆಂಕಟೇಶ ಎಂಬುವವನಿಗೆ ರೂ-10000/- ದಂಡ ಹಾಕಿದ್ದಾರೆ.
ಒಟ್ಟು ನಾಲ್ಕು ಪ್ರಕರಣಗಳಲ್ಲಿ ನ್ಯಾಯಾಲಯವು ಆರೋಪಿತರಿಗೆ ಒಟ್ಟು ರೂ 88,600/-ದಂಡ ವಿಧಿಸಿದೆ. ಕಾರವಾರ ಸಂಚಾರ ಠಾಣೆಯ ಪಿಎಸ್ಐ ನಾಗಪ್ಪ ಮತ್ತು ಸಿಬ್ಬಂದಿಗಳ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ ಪೆನ್ನೆಕರ್ , ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ ಎಸ್, ಕಾರವಾರ ಡಿವೈಎಸ್ಪಿ ವಾಲೆಂಟೈನ್ ಡಿಸೋಜಾ, ಸಿಪಿಐ ಸಿದ್ದಪ್ಪ ಬಿಳಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ