ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕುಮಟಾದಲ್ಲಿ ಮುಂದಿನ ವರ್ಷ ಐಟಿ‌ಐ ಪ್ರಾರಂಭ : ಸಚಿವ ಬಚ್ಚೇಗೌಡ

ಕುಮಟಾದಲ್ಲಿ ಮುಂದಿನ ವರ್ಷ ಐಟಿ‌ಐ ಪ್ರಾರಂಭ : ಸಚಿವ ಬಚ್ಚೇಗೌಡ

Sun, 29 Nov 2009 02:50:00  Office Staff   S.O. News Service
ಬೆಂಗಳೂರು, ನ.28:ಉತ್ತರ ಕನ್ನಡ ಕುಮುಟದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿ‌ಐ) ಪ್ರಾರಂಭಿಸಲಾಗುವುದು ಎಂದು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಪ್ರಕಟಿಸಿದ್ದಾರೆ.

ಶನಿವಾರ ನಗರದ ಎಸ್‌ಜೆಬಿ ತಾಂತ್ರಿಕ ವಿದ್ಯಾಲಯದ ನೂತನ ಸಭಾಂಗಣದಲ್ಲಿ ಕಳೆದ ಮೂರು ದಿನಗಳಿಂದ ನಡೆದ ೨೦೦೯ನೆ ಸಾಲಿನ ಬಿಜಿ‌ಎಸ್ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಹಕ್ಕಿ-ಪಿಕ್ಕಿ ಮುಂತಾದ ಹಿಂದುಳಿದ ಜನಾಂಗದವರು ಕುಮುಟಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರು ಶೈಕ್ಷಣಿಕ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಹಿಂದುಳಿದಿದ್ದಾರೆ. ಈ ಜನಾಂಗಕ್ಕೆ ಸೇರಿದವರ ಮಕ್ಕಳಿಗೆ ವೃತ್ತಿಪರ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಐಟಿ‌ಐ ಸಂಸ್ಥೆಯನ್ನು ಸ್ಥಾಪಿಸಲಾಗುವುದು ಎಂದು ಬಚ್ಚೇಗೌಡ ತಿಳಿಸಿದರು.

ದೇಶದಲ್ಲಿ ಸುಮಾರು ೫೦೦ ಸಂಸ್ಥೆಗಳನ್ನು ಬಿಜಿ‌ಎಸ್ ಹೊಂದಿದ್ದು, ಆರೋಗ್ಯ, ಶೈಕ್ಷಣಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಬೇದಭಾವ ಇಲ್ಲದೆ ತನ್ನದೆ ಆದ ಕೊಡುಗೆ ನೀಡುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಅವರು ನುಡಿದರು.

ಇತರ ದೇಶಗಳಿಗೆ ಹೋಲಿಸಿದರೆ ಭಾರತ ತನ್ನದೆ ಆದ ಕಲೆ, ಸಂಸ್ಕೃತಿಯನ್ನು ಹೊಂದಿದೆ. ಇದನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಮನಗಾಣಬೇಕು. ನಮ್ಮ ದೇಶದ ಕಲೆ, ಸಂಸ್ಕೃತಿಗೆ ಸಾಟಿ ಇಲ್ಲ ಎಂಬುದನ್ನು ಪೋಷಕರು ಹಾಗೂ ಅಧ್ಯಾಪಕರು ತಿಳಿಹೇಳಬೇಕಾದ ಅವಶ್ಯಕತೆ ಇದೆ ಎಂದು ಬಚ್ಚೇಗೌಡ ಅಭಿಪ್ರಾಯಪಟ್ಟರು.

ಸಂಪದ್ಭರಿತವಾದ ಭಾರತ ದೇಶದಲ್ಲಿ ವಿದ್ಯಾರ್ಥಿಗಳಿಗೆ ಹಲವಾರು ಅವಕಾಶಗಳಿವೆ. ಈ ಅವಕಾಶಗಳನ್ನು ಬಳಸಿಕೊಂಡು ಉನ್ನತ ಮಟ್ಟಕ್ಕೇರಬೇಕು. ೨೦೨೦ನೆ ಸಾಲಿನ ವೇಳೆಗೆ ದೇಶವನ್ನು ೩ನೆ ಸ್ಥಾನಕ್ಕೇರಿಸಬೇಕೆಂಬ ಗುರಿ ಹೊಂದಲಾಗಿದೆ. ಇದಕ್ಕಾಗಿ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡುವಂತಾಗಬೇಕು ಎಂದು ಬಚ್ಚೇಗೌಡ ಕರೆನೀಡಿದರು.

ಆರ್ಥಿಕ ಮುಗ್ಗಟ್ಟಲ್ಲ, ಇದು ನೈತಿಕ ಮುಗ್ಗಟ್ಟು: ಸಮಾರಂಭದ ದಿವ್ಯ ಸಾನಿಧ್ಯವಹಿಸಿದ್ದ ಚಿತ್ರದುರ್ಗ ಸಿರಿಗೆರೆ ಮಠದ ಡಾ.ತರಲಬಾಲು ಶಿವಮೂರ್ತಿ ಶಿವಾಚಾರ್ಯ ಸ್ವಾಮಿ ಮಾತನಾಡಿ, ಇಂದು ಜಗತ್ತಿನೆಲ್ಲಡೆ ಆರ್ಥಿಕ ಮುಗ್ಗಟ್ಟು ಸಮಸ್ಯೆ ಎದುರಿಸುತ್ತಿದ್ದೇವೆ. ಹಣದ ಆಸೆಗೆ ತಮ್ಮ ನೈತಿಕ ಮೌಲ್ಯಗಳನ್ನು ಬಿಟ್ಟಿರುವುದೆ ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ಆದ್ದರಿಂದ ಇದನ್ನು ನೈತಿಕ ಮುಗ್ಗಟ್ಟು ಎಂದು ಕರೆಯುವುದು ಸೂಕ್ತ. ಇಂದಿನ ಯುವ ಜನತೆಯಲ್ಲಿ  ನೈತಿಕ ಮೌಲ್ಯಗಳ ಕುರಿತು ತಿಳಿಹೇಳಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮಿ ಮಾತನಾಡಿ, ಕಳೆದ ಮೂರು ದಿನಗಳಿಂದ ನಡೆದ ಸಾಂಸ್ಕೃತಿಕ ಉತ್ಸವದಲ್ಲಿ ವಿದ್ಯಾರ್ಥಿಗಳಲ್ಲಿ ಗುಪ್ತಗಾಮಿನಿಯಾಗಿ ಹುದುಗಿದ್ದ ಪ್ರತಿಭೆಗಳನ್ನು ಪ್ರದರ್ಶಿಸಲಾಗಿದೆ. ಈ ಪ್ರತಿಭೆಯನ್ನು ಉಳಿಸಿ, ಬೆಳೆಸಿಕೊಳ್ಳಬೇಕು ಎಂದು ಕರೆನೀಡಿದರು.

ವರ್ಷಕ್ಕೊಮ್ಮೆ ಸಾಂಸ್ಕೃತಿಕ ಉತ್ಸವ ಆಚರಣೆಯಿಂದ ಅಧ್ಯಾಪಕರು ಹಾಗೂ ಮಕ್ಕಳ ಮನಸ್ಸು ಹಗುರವಾಗುತ್ತದೆ. ಅಲ್ಲದೆ ಸಂಘಟಿತರಾಗಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಶಾಸಕ ಎಂ.ಶ್ರೀನಿವಾಸ್, ಬಿಜಿ‌ಎಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್‌ನಾಥ್‌ಸ್ವಾಮಿ, ನಿರ್ಮಾಪಕ ಚಿನ್ನೇಗೌಡ ಮುಂತಾದವರು ಉಪಸ್ಥಿತರಿದ್ದರು.

ಬೆಂಗಳೂರು ಸೇರಿದಂತೆ ದಿಲ್ಲಿ, ಮಂಗಳೂರು, ಕುಮುಟ, ಚಿಕ್ಕಮಗಳೂರು, ಮಂಡ್ಯ, ಮೈಸೂರು ನಗರದಲ್ಲಿರುವ ಬಿಬಿ‌ಎಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಕಳೆದ ಮೂರು ದಿನಗಳಿಂದ ನಡೆದ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಿದ್ದರು. ಈ ಉತ್ಸವದಲ್ಲಿ ಉತ್ತಮ ಪ್ರದರ್ಶನ ನೀಡಿದ ಸಂಸ್ಥೆಗಳಿಗೆ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು

Share: