ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬಳ್ಳಾರಿ: ಎಲ್ಲಾ ಮುಗಿದ ಮೇಲೆ ಬರುವ ಸರ್ಕಾರದ ವಿರುದ್ಧ ಸಂತ್ರಸ್ತರ ಆಕ್ರೋಶ

ಬಳ್ಳಾರಿ: ಎಲ್ಲಾ ಮುಗಿದ ಮೇಲೆ ಬರುವ ಸರ್ಕಾರದ ವಿರುದ್ಧ ಸಂತ್ರಸ್ತರ ಆಕ್ರೋಶ

Wed, 07 Oct 2009 03:10:00  Office Staff   S.O. News Service
ಬಳ್ಳಾರಿ, ಅ.6: ನೆರೆಯಿಂದ ಸಂಪೂರ್ಣ ಬದುಕು ಕಳೆದುಕೊಂಡ ಜಿಲ್ಲೆಯ ಕುಡ್ಲೂರು ಗ್ರಾಮಸ್ತರು ಸರಕಾರದ ನೆರವನ್ನು ತಿರಸ್ಕರಿಸಿದ್ದಾರೆ. ನೀರಿನ ನಡುಗಡ್ಡೆಯಲ್ಲಿ ಸಿಲುಕಿ ಪ್ರಾಣ ರಕ್ಷಣೆಗಾಗಿ ಮೋರೆಯಿಟ್ಟಾಗ ಬರದ ಸರಕಾರ ಎಲ್ಲ ಮುಗಿದ ಮೇಲೆ ನಾವಿದ್ದೇವೆ ಎಂದು ತಿಪ್ಪೆಸಾರಿಸಲು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿರಗುಪ್ಪ ತಾಲೂಕಿನ ಕುಡ್ಲೂರು ಗ್ರಾಮ ಅಕ್ಟೋಬರ್ ಒಂದರಂದು ಭಾರೀ ಮಳೆ ಮತ್ತು ನದಿ ಪ್ರವಾಹದಿಂದ ಸಂಪೂರ್ಣ ಜಲಾವೃತ್ತವಾಗಿತ್ತು. ಸುಮಾರು 6 ಅಡಿ ನೀರು ಗ್ರಾಮದ ಎಲ್ಲ ಮನೆಗಳಲ್ಲೂ ತುಂಬಿಕೊಂಡು ನಿಲ್ಲಲು ನೆಲವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮದ ಎಲ್ಲ ಜಾನುವಾರುಗಳು ನೀರಿನಲ್ಲಿ ಮುಳುಗಿ ಸತ್ತಿವೆ. 

ಜನರು ಒಂದೆರಡು ಮನೆಗಳ ಮೇಲೆ ನಿಂತು ಪ್ರಾಣ ಉಳಿಸಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ತಹಸೀಲ್ದಾರ್ ಸೇರಿದಂತೆ ಎಲ್ಲ ಅಧಿಕಾರಿಗಳಿಗೂ ದೂರವಾಣಿ ಮೂಲಕ ಸಂಪರ್ಕಿಸಿ ನೆರವು ನೀಡುವಂತೆ ಅಂಗಲಾಚಿದರು ಯಾರು ಸಹಾಯಕ್ಕೆ ಬರಲಿಲ್ಲ್ಲ. ಆಂಧ್ರ ಪ್ರದೇಶದಲ್ಲಿರುವ ಮಂತ್ರಾಲಯದಲ್ಲಿ ಮಠ ಮುಳುಗಿದೆ ಎಂದಾಕ್ಷಣ ಸಚಿವೆ ಶೋಭಾ ಕಂರದ್ಲಾಜೆಯವರೇ ಖುದ್ದಾಗಿ ಹೋಗಿ ಸ್ವಾಮಿಜೀ ಮತ್ತು ಬೆಂಗಳೂರಿನ ಸಂಸದ ಅನಂತಕುಮಾರ್‌ರವರ ಸಹೋದರರನ್ನು ಹೆಲಿಕಾಫ್ಟರ್‌ನಲ್ಲಿ ಕರೆತಂದಿದ್ದಾರೆ. ನಾವು ಮತ ಹಾಕಿ ಗೆಲ್ಲಿಸಿದ ಜನಪ್ರತಿನಿಧಿಗಳು.... ನಮ್ಮದೇ ರಾಜ್ಯ ಸರಕಾರ... ಪ್ರಾಣ ಸಂಕಟ ಅನುಭವಿಸುತ್ತಿದ್ದ ನಮ್ಮ ನೆರವಿಗೆ ಬರಲಿಲ್ಲ ಎಂದು ಗ್ರಾಸ್ಥರಾದ ಹುಲಿಗೆಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ದಿನ ಊಟವಿಲ್ಲದೆ, ಕುಳಿತುಕೊಳ್ಳಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯನ್ನು ಅನುಭವಿಸಿದ್ದೇವೆ. ಜಲಾವೃತ್ತವಾಗಿದ್ದ ಕಟ್ಟಡ ನೆಂದು ಶಿಥಲಗೊಂಡು ಯಾವುದೇ ಸಂದರ್ಭದಲ್ಲಿ ಕುಸಿಯುವ ಭಯವಿತ್ತು. ಬೇರೆ ದಾರಿಯಿಲ್ಲದೆ ಗ್ರಾಮಸ್ಥರು ಅದರ ಮೇಲೆ ಕಾಲಕಳೆದಿದ್ದಾರೆ. ಶಾಸಕ ಸಚಿವಲರಾದಿಯಾಗಿ ಎಲ್ಲರಲ್ಲೂ ನಾವಿರುವ ಪರಿಸ್ಥಿತಿಯನ್ನು ವಿವರಿಸಿದ್ದೇವೆ. ಸ್ವಂತ ಹೆಲಿಕಾಫ್ಟರ್ ಇಟ್ಟುಕೊಂಡು ಐಶರಾಮಿ ಜೀವನ ನಡೆಸುವ ಜಿಲ್ಲೆಯ ಮೂವರು ಸಚಿವರು ನಮ್ಮ ನೆರವಿಗೆ ಧಾವಿಸಲಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ಗ್ರಾಮಕ್ಕೆ ತೆರಳಿ ಗಂಜಿ ಕೇಂದ್ರ ಸ್ಥಾಪನೆ ಸೇರಿದಂತೆ ಪುನರ್ವಸತಿ ಕಲ್ಪಿಸುವುದಾಗಿ ಭರವಸೆ ನೀಡಿದ್ದ ಶಾಸಕ ಸೋಮಲಿಂಗಪ್ಪ ಮತ್ತು ತಹಸೀಲ್ದಾರರನ್ನು ಜನರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಸಾವಿನ ಸಮೀಪದಲ್ಲಿದ್ದ ನಮ್ಮನ್ನು ದೇವರು ಕಾಪಾಡಿದ್ದಾನೆ. ಮುಂದೆಯೂ ದೇವರೆ ನಮ್ಮ ನೆರವಿಗಿರುತ್ತಾನೆ ನೀವು ನಿಮ್ಮ ಸರಕಾರ ಈ ಕಡೆ ತಲೆ ಹಾಕುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಶಾಸಕರು ಮತ್ತು ಅಧಿಕಾರಿಗಳನ್ನು ಗ್ರಾಮದಿಂದ ಹೊರಗಟ್ಟಿದ್ದಾರೆ.

ರಸ್ತೆ ಬದಿಯಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಳ್ಳಲು ಗ್ರಾಮಸ್ಥರಿಗೆ ಸ್ವಯಂ ಸೇವಾ ಸಂಸ್ಥೆಯೊಂದು ನೆರವಾಗಿದೆ. ಮತ್ತೊಂದು ಸಂಘಟನೆ ಅನ್ನಸಂತರ್ಪಣೆ ಮಾಡುತ್ತಿದೆ. ಸುಮಾರು ೨೫೦ ಗ್ರಾಮಗಳ ಮನೆಯಲ್ಲಿ ಬಹುತೇಕ ಮನೆಗಳು ಕುಸಿದಿದ್ದು, ಶೇ.೯೦ರಷ್ಟು ಜನ ಸಂಪೂರ್ಣವಾಗಿ ಬೀದಿಪಾಲಾಗಿದ್ದಾರೆ. ಆದರೂ, ಸರಕಾರದ ನೆರವಿಲ್ಲದೆ ನಮ್ಮ ಜೀವನ ರೂಪಿಸಿಕೊಳ್ಳುತ್ತೇವೆ ಎಂಬ ಸವಾಲನ್ನು ಅವರು ಜಿಲ್ಲಾಡಳಿತಕ್ಕೆ ಹಾಕಿದ್ದಾರೆ. ಅವರ ಮನವೋಲಿಸುವ ಕೆಲಸವನ್ನು ಮುಂದುವರಿಸುವುದಾಗಿ ಜಿಲ್ಲಾಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ

Share: