ಬಿಜಾಪುರ, ಡಿ.2: ಬಿಜಾಪುರ ಜಿಲ್ಲೆಯ ಇಂಡಿ ಪಟ್ಟಣದ ಶಾಂತೇಶ್ವರ ದೇವಸ್ಥಾನದಲ್ಲಿ ಹಸುಗೂಸುಗಳನ್ನು ಎಸೆಯುವ ವಿಶಿಷ್ಟ ಹರಕೆ ಮೂಲಕ ತಂದೆ- ತಾಯಿಗಳು ಭಕ್ತಿಯ ಪರಾಕಾಷ್ಠೆ ಮೆರೆದರು.
ದೇವಸ್ಥಾನದ ಶಿಖರದ ಮೇಲೆ ನಿಂತು ಸುಮಾರು 20ಅಡಿ ಕೆಳಕ್ಕೆ ಕಿಂಚಿತ್ತೂ ಕರುಣೆಯಿಲ್ಲದೇ ಹಸುಗೂಸುಗಳನ್ನು ಎಸೆದು ತಂದೆ-ತಾಯಿಗಳು ಹರಕೆ ತೀರಿಸಿ ಖುಷಿ ಪಡುತ್ತಾರೆ.
ಮೇಲಿನಿಂದ ಎಸೆಯುವ ಹಸುಳೆಗಳನ್ನು ಹಿಡಿಯಲು ಕೆಳಬದಿಯಲ್ಲಿ ದೇವಸ್ಥಾನದ ಮುಂ ದೆ ೨೦ ಮಂದಿ ಕಂಬಳಿಯನ್ನು ಹಿಡಿದು ನಿಂತಿರುತ್ತಾರೆ. ನೋಡು, ನೋಡುತ್ತಿದ್ದಂತೆಯೇ ಹಸುಗೂಸುಗಳು ಕಂಬಳಿಯಲ್ಲಿ ಬಂದು ಬೀಳುತ್ತವೆ. ವಿಚಿತ್ರವೆಂದರೆ ಬಹುತೇಕ ಹಸು ಗೂಸುಗಳು ಎತ್ತರದಿಂದ ಬಿದ್ದರೂ ಭಯ ಪಟ್ಟು ಅಳುವುದಿಲ್ಲ. ಹಸನ್ಮುಖಿಯಾಗಿಯೇ ಇರುತ್ತವೆ. ಇದು ದೇವರ ಲೀಲೆ ಎನ್ನುತ್ತಾರೆ ಸ್ಥಳೀಯರು.
ಸಂತಾನ ಫಲವಿಲ್ಲದ ದಂಪತಿ ಪುತ್ರ ಸೌಭಾಗ್ಯ ನೀಡುವಂತೆಯೂ, ಕೆಲವರು ಗಂಡು ಸಂತಾನಕ್ಕಾಗಿ, ಇನ್ನೂ ಕೆಲವರು ತಮ್ಮ ಮಕ್ಕಳಿಗೆ ಯಾವುದೇ ರೋಗ, ರುಜಿನ ಬಾರ ದಿರಲಿ ಎಂದು ಹರಕೆ ಹೊರುತ್ತಾರೆ.
ಹರಕೆ ಹೊತ್ತ ಒಂದು ವರ್ಷದಲ್ಲಿ ಜನರ ನಂಬುಗೆಯಂತೆ ಸಂತಾನ ಫಲ ಪಡೆಯುತ್ತಾರೆ. ಈ ಖುಷಿಯಲ್ಲಿಯೇ ಮಕ್ಕಳ ತಂದೆ- ತಾಯಿಗಳು ಪ್ರತಿ ವರ್ಷ ಶಾಂತೇಶ್ವರ ದೇವರ ಜಾತ್ರೆಯಲ್ಲಿ ಹಸುಳೆಗಳನ್ನು ಶಿಖರದಿಂದ ಹಾರಿಸಿ ಹರಕೆ ತೀರಿಸಿ ಸಂತೃಪ್ತರಾಗುತ್ತಾರೆ.
ಇಂಡಿ ಪಟ್ಟಣದ ಶಾಂತೇಶ್ವರ ಜಾತ್ರೆಯಲ್ಲಿ ಸುತ್ತ ಮುತ್ತಲಿನ ಸಾವಿರಾರು ಮಂದಿ ಗ್ರಾಮಸ್ಥರು ಈ ಹರಕೆ ವೀಕ್ಷಿಸಲು ಸೇರುತ್ತಾರೆ.
ಮಕ್ಕಳನ್ನು ಶಿಖರದ ಮೇಲಿಂದ ಹಾರಿಸುವುದನ್ನು ಕಂಡು ದೇವರ ಮಹಿಮೆಯನ್ನು ನೆನೆಯುತ್ತಾರೆ. ಈ ಹರಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಶಾಂತೇಶ್ವರ ನಂಬಿದ ಜನರಿಗೆ ಕೈ ಬಿಟ್ಟಿಲ್ಲ ಎಂದು ಸುತ್ತ ಮುತ್ತಲಿನ ಹಳ್ಳಿಗಳಿಂದ ಆಗಮಿಸಿದ ಗ್ರಾಮಸ್ಥರು ನುಡಿಯುತ್ತಾರೆ.
ಈ ವಿಶಿಷ್ಟ ಪದ್ಥತಿಯನ್ನು ಪೂರ್ವಜರು ನಡೆಸಿಕೊಂಡು ಬಂದಿದ್ದಾರೆ. ತಾವು ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಈ ಧರ್ಮಾಚರಣೆಯಿಂದ ಯಾವುದೇ ಹಸು ಳೆಗಳಿಗೆ ಇಲ್ಲಿಯವರೆಗೆ ಒಂದು ಕೂದಲು ಕೊಂಕು ಆಗಿಲ್ಲ. ಎಲ್ಲವೂ ಶಾಂತೇಶ್ವರ ದೇವರ ಮಹಿಮೆ ಎಂದು ಭಾವುಕರಾಗಿ ಶಾಂತೇಶ್ವರ ಟ್ರಸ್ಟ್ನ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳುತ್ತಾರೆ.
ಸೌಜನ್ಯ: ಕನ್ನಡಪ್ರಭ