ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಡುಪಿ: ದಲಿತರ ಮೀಸಲು ನಿಧಿ ಧಾರ್ಮಿಕ ಕೇಂದ್ರಗಳ ಅಭಿವೃದ್ದಿಗೆ ಬಳಕೆ: ದಸಂಸ ಆರೋಪ

ಉಡುಪಿ: ದಲಿತರ ಮೀಸಲು ನಿಧಿ ಧಾರ್ಮಿಕ ಕೇಂದ್ರಗಳ ಅಭಿವೃದ್ದಿಗೆ ಬಳಕೆ: ದಸಂಸ ಆರೋಪ

Fri, 09 Oct 2009 04:54:00  Office Staff   S.O. News Service
ಉಡುಪಿ, ಅ.8: ದಲಿತರಿಗಾಗಿ ಮೀಸಲಿರುವ ನಿಧಿಯನ್ನು ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯ ನೆಪದಲ್ಲಿ ಖರ್ಚು ಮಾಡಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಕೃಷ್ಣಪ್ಪ ಸ್ಥಾಪಿತ) ಆರೋಪಿಸಿದೆ.

 ಈ ಬಗ್ಗೆ ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಮನವಿ ಸಲ್ಲಿಸಿ ಸಲ್ಲಿಸುರುವ ದಸೆಂಸದ ನಿಯೋಗ ನಿಧಿಯನ್ನು ಯಾವುದೇ ಕಾರಣಕ್ಕೂ ಧಾರ್ಮಿಕ ಕಾರ್ಯಗಳಿಗೆ ಬಳಸದೆ ದಲಿತರ ವೈಯಕ್ತಿಕ ಕ್ಷೇಮಾಭಿವೃದ್ದಿಗೆ ಉಪಯೋಗಿಸಬೇಕೆಂದು  ಒತ್ತಾಯಿಸಿದೆ.

ಉಡುಪಿ ಜಿ.ಪಂ. ವ್ಯಾಪ್ತಿಯ ತಾ.ಪಂ., ಗ್ರಾ.ಪಂ.ಗಳ ಪರಿಶಿಷ್ಟ ಜಾತಿ/ಪಂಗಡಗಳ ೨೨.೭ರ ಮೀಸಲು ಅನುದಾನಗಳನ್ನು ದಲಿತರ ಶೈಕ್ಷಣಿಕ, ಆರ್ಥಿಕ ಮತ್ತು ಮೂಲಭೂತ ಸೌಕರ್ಯಗಳಿಗೆ ಬಳಸುವಂತೆ ಆಗ್ರಹಿಸಿದೆ.

ಆರ್ಥಿಕವಾಗಿ ಹಿಂದುಳಿದಿರುವ ದಲಿತ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ನಂತರ ಐಟಿ‌ಐ, ಕೆಪಿಟಿ, ಎಂಜಿನಿಯರಿಂಗ್ ಕಲಿಯುವವರಿಗೆ ವಿದ್ಯಾರ್ಥಿ ವೇತನ ನೀಡಬೇಕು. ಗ್ರಾ.ಪಂ. ವ್ಯಾಪ್ತಿಯಲ್ಲಿರುವ ನಿರುದ್ಯೋಗಿ ದಲಿತ ಯುವಕರಿಗೆ ಸಣ್ಣ ಪ್ರಮಾಣದ ಸ್ವ ಉದ್ಯೋಗ ಕೈಗೊಳ್ಳಲು ಬ್ಯಾಂಕಿನಲ್ಲಿ ಸಾಲ ಹಾಗೂ ವೃತ್ತಿ ಆಧಾರಿತ ತರಬೇತಿಗಳನ್ನು ನೀಡಬೇಕು. ದಲಿತರ ಮನೆ ದುರಸ್ತಿಗೆ ೨೦ಸಾವಿರ ರೂ. ಸಹಾಯಧನ ನೀಡಬೇಕು ಎಂದು ದಸಂಸ ಮನವಿಯಲ್ಲಿ ಒತ್ತಾಯಿಸಿದೆ.

ಶೌಚಾಲಯ ಹಾಗೂ ಸ್ನಾನಗೃಹ ನಿರ್ಮಿಸಲು ೧೦ಸಾವಿರ ರೂ. ಧನ ಸಹಾಯ ಒದಗಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಗ್ರಾ.ಪಂ. ಮಟ್ಟದಲ್ಲಿ ದಲಿತರ ಕುಂದುಕೊರತೆ ಪರಿಶೀಲಿಸುವ ಸಭೆಯನ್ನು ನಡೆಸಲು ಆದೇಶ ನೀಡಬೇಕು ಎಂದು ದಸಂಸ ಮನವಿಯಲ್ಲಿ ಸಿ‌ಇ‌ಓರನ್ನು ಆಗ್ರಹಿಸಿದೆ. 

ನಿಯೋಗದಲ್ಲಿ ದಸಂಸ ಜಿಲ್ಲಾ ಸಂಚಾಲಕ ಶೇಖರ್ ಹೆಜಮಾಡಿ, ರಮೇಶ್ ಕೋಟ್ಯಾನ್, ಪ್ರಶಾಂತ್ ತೊಟ್ಟಂ, ಬಿ‌ಎಸ್‌ಪಿ ನಾಯಕ ಕೃಷ್ಣ ಬಜೆ, ಸುಂದರ್ ಅಂಜಾರು ಮೊದಲಾದವರು ಉಪಸ್ಥಿತರಿದ್ದರು.

Share: