ಕಾರವಾರ : ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಕಾರವಾರ ನಗರ ಸಂಚಾರ ಪೊಲೀಸ್ ಠಾಣೆ ಹಾಗೂ ರೋಟರಿ ಕ್ಲಬ್ ಕಾರವಾರ ರವರ ಸಹಯೋಗದಲ್ಲಿ ಕಾರವಾರ ನಗರದ ಆಟೋ ಚಾಲಕರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.
ಶುಕ್ರವಾರ ಎಂ ಜಿ ರಸ್ತೆ ಪಕ್ಕದಲ್ಲಿರುವ ರೊಟರಿ ಕ್ಲಬ್ ನ ಶತಾಬ್ದಿಭವನದಲ್ಲಿ ಜರುಗಿದ ಶಿಬಿರವನ್ನು ಕಾರವಾರ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸಿದ್ದಪ್ಪ ಬಿಳಗಿ ರವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಅಪರಾಧ ತಡೆ ಮಾಸಾಚರಣೆಯ ಭಾಗವಾಗಿ ಹಗಲಿರುಳು ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಬಡ ಮತ್ತು ಶ್ರಮಿಕ ವರ್ಗದ ಆಟೊ ಚಾಲಕರಿಗೆ ಉಚಿತ ಕಣ್ಣು ತಪಾಸಣಾ ಶಿಬಿರ ಏರ್ಪಡಿಸಿದ ರೋಟರಿ ಕ್ಲಬ್ ಕಾರವಾರ ಮತ್ತು ಕಾರವಾರ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾದುದು ಎಂದು ಹೇಳಿ ಹರ್ಷ ವ್ಯಕ್ತಪಡಿಸಿದರು.
ವಾಹನ ಚಲಾಯಿಸಲು ಮಾನಸಿಕ ಮತ್ತು ದೈಹಿಕ ಆರೋಗ್ಯದ ಸದೃಢತೆ ಅಗತ್ಯ ನಿಟ್ಟಿನಲ್ಲಿ ಆಟೋಚಾಲಕರು ಇಂಥ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಸುಮಾರು 200 ಕ್ಕೂ ಅಧಿಕ ಆಟೊ ಚಾಲಕರು ಕಣ್ಣು ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದರು.
ಕ್ರೀಮ್ಸ ನ ನೇತ್ರ ತಜ್ಞ ವೈದ್ಯರಾದ ರಮೇಶ ವೆಂಕಿಮನೆ, ಆದಾರ್ ನಾಯ್ಕ, ಹಾಗೂ ವೈದ್ಯ ಯೋಗಿಶ್ ಭಂಡಾರ್ಕರ್ ರವರು ತಪಾಸಣೆ ನಡೆಸಿ ಸೂಕ್ತ ಸಲಹೆ ಮತ್ತು ಚಿಕಿತ್ಸೆ ನೀಡಿದರು.
ಕಾರ್ಯಕ್ರಮದಲ್ಲಿ ಕಾರವಾರ ನಗರ ಸಂಚಾರ ಠಾಣೆಯ ಪಿಎಸ್ಐ ನಾಗಪ್ಪ.ಬಿ, ಕಾರವಾರ ರೋಟರಿ ಕ್ಲಬ್ ನ ಅಧ್ಯಕ್ಷ ರಾಘವೇಂದ್ರ ಜಿ.ಪ್ರಭು, ಆಟೋ ಯುನಿಯನ್ ಮುಖಂಡ ಸುಭಾಷ ಗುನಗಿ ಹಾಗೂ ರೋಟರಿ ಕ್ಲಬ್ ನ ಸದಸ್ಯರು, ಸಂಚಾರ ಠಾಣೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.