ಭಟ್ಕಳ, ಡಿಸೆಂಬರ್ 4: ಈ ಹಿಂದೆ ಹಲವಾರು ಆಶ್ವಾಸನೆಗಳನ್ನು ನೀಡಿ ಚುನಾವಣೆಯಲ್ಲಿ ಗೆದ್ದು ಬಂದವರು ಪಂಚಾಯತ ಸಮಸ್ಯೆಗಳನ್ನು ಬಗೆಹರಿಸಲು ವಿಫಲರಾಗಿದ್ದು, ನಮ್ಮ ಬೇಡಿಕೆ ಈಡೇರಿಸುವವರಿಗೆ ಮಾತ್ರ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ನೀಡಲಾಗುವುದು ಎಂದು ಪಂಚಾಯತ ರಾಜ್ ಹಕ್ಕೊತ್ತಾಯ ಆಂದೋಲನ ಸಮಿತಿಯ ಭಟ್ಕಳ ತಾಲೂಕು ಅಧ್ಯಕ್ಷ ದೇವಯ್ಯ ನಾಯ್ಕ ತಿಳಿಸಿದ್ದಾರೆ.
ಈ ಸಂಬಂಧ ಲಿಖಿತ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಂಚಾಯತ ರಾಜ್ ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಧಾನಪರಿಷತ್ ಅಭ್ಯರ್ಥಿಯು ಪಂಚಾಯತ ರಾಜ್ ಸದಸ್ಯನಾಗಿರಬೇಕು ಎಂದು ಕಾನೂನು ತಿದ್ದುಪಡಿ ತರಬೇಕು, ಪಂಚಾಯತ ಸದಸ್ಯರಿಗೆ ಕನಿಷ್ಠ ತಿಂಗಳ ಭತ್ಯೆ 1000 ರೂಪಾಯಿ ನಿಗದಿ ಪಡಿಸಬೇಕು, ಸತತ ಮೂರು ಬಾರಿ ಚುನಾಯಿತರಾದ ಪಂಚಾಯತ ಸದಸ್ಯರಿಗೆ ಪಿಂಚಣಿ ಸೌಲಭ್ಯ ಒದಗಿಸಬೇಕು, ಪಂಚಾಯತ ರಾಜ್ ಸದಸ್ಯರಿಗೆ ಉಚಿತ ವೈದ್ಯಕೀಯ ಸೌಲಭ್ಯ ಜೊತೆಗೆ ಸಾಮಾಜಿಕ ಭದ್ರತೆ ಒದಗಿಸಬೇಕು, ಪಂಚಾಯತ ರಾಜ್ ಸದಸ್ಯರ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ೫ ವರ್ಷ ನಿಗದಿಪಡಿಸಬೇಕು, ಪಂಚಾಯತ ರಾಜ್ ವ್ಯವಸ್ಥೆಯಲ್ಲಿ ಸ್ಪರ್ಧಿಸುವವರಿಗೆ ಕನಿಷ್ಟ ವಿದ್ಯಾರ್ಹತೆ ನಿಗದಿ ಪಡಿಸುವುದರ ಜೊತೆಗೆ ಪಂಚಾಯತ್ಗೆ ಹೆಚ್ಚಿನ ಅಧಿಕಾರ ನೀಡಬೇಕು, ಪಂಚಾಯತ ರಾಜ್ ವಿವಿಧ ಕ್ಷೇತ್ರದ ಸದಸ್ಯರ ಮೀಸಲಾತಿಯನ್ನು ೧೦ ವರ್ಷಕ್ಕೆ ನಿಗದಿಪಡಿಸಬೇಕು ಎಂದು ಅವರು ಹೇಳಿದ್ದಾರೆ.