ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕಾರವಾರದ ಬಾಲಮಂದಿರ ಪ್ರೌಢಶಾಲೆಯಲ್ಲಿ ‘ಗೀತಾ ಜಯಂತಿ’ ಆಚರಣೆ

ಕಾರವಾರದ ಬಾಲಮಂದಿರ ಪ್ರೌಢಶಾಲೆಯಲ್ಲಿ ‘ಗೀತಾ ಜಯಂತಿ’ ಆಚರಣೆ

Sun, 24 Dec 2023 20:57:34  Office Staff   S O News

ಕಾರವಾರ: ಕಾರವಾರದ ಬಾಲಮಂದಿರ ಪ್ರೌಢಶಾಲೆಯುಲ್ಲಿ ಗೀತಾ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಆರಂಭದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಬಾಲಮಂದಿರ ಪ್ರೌಢಶಾಲೆಯ ವಿಭಾಗ ಮುಖ್ಯಸ್ಥೆ ಭಾರತಿ ಇ. ಐಸಾಕ್ ಮಾತನಾಡಿದರು. 

ವಿದ್ವಾನ್ ಮಹೇಶ ಭಟ್ ಮಾತನಾಡಿ, “ಪ್ರತಿನಿತ್ಯ ನಾವು ಭಗವದ್ಗೀತೆಯ ಶ್ಲೋಕವನ್ನು ಹೇಳುವುದರಿಂದ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು” ಎಂದು ಗೀತಾ ಜಯಂತಿಯ ಮಹತ್ವವನ್ನು ತಿಳಿಸಿದರು.
ಕು. ತಪಸ್ಯಾ ಮತ್ತು ತಂಡದವರು ಗಣೇಶ ಸ್ತುತಿ ಹಾಡಿದರು. ಕು. ದಿಶಾ, ಕು. ಶ್ರೇಯಾ ಮತ್ತು ಕು. ಆದ್ಯಾ ತಂಡದವರು ಶ್ರೀಕೃಷ್ಣ ನೃತ್ಯ ಮಾಡಿದರು. ಕು. ಧನ್ಯಶ್ರೀ “ಮಧುರಾಷ್ಟಕಮ್” ಹಾಡಿದರು. ಕು. ಸುಧನ್ವಾ ಮತ್ತು ತಂಡದವರಿಂದ ಶ್ಲೋಕಗಳ ಅರ್ಥವಿವರಣೆ. ಕು. ಆದಿತ್ಯ ಮತ್ತು ಸ್ನೇಹಿತ್ ಇವರಿಂದ “ಶ್ರೀ ಕೃಷ್ಣೋಪದೇಶ” ರೂಪಕ ಮೊದಲಾದ ಕಾರ್ಯಕ್ರಮಗಳು ನಡೆದವು. ನಂತರ ನಡೆದ ‘ಗೀತಾ ಕಂಠಪಾಠ ಸ್ಪರ್ಧೆ’ ಗೆ ನಿರ್ಣಾಯಕರಾಗಿ ಶಿಕ್ಷಕಿ ಕೃಷ್ಣಾಬಾಯಿ ಕೋಮಾರಪಂಥ ಪಾಲ್ಗೊಂಡರು.
ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಅಂಜಲಿ ಮಾನೆಯವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕು. ಸಾನ್ವಿ ಮತ್ತು ತಂಡದವರು ಸ್ವಾಗತ ಕೋರಿದರೆ, ಶಿಕ್ಷಕಿ ಕರುಣಾ ನಾಯ್ಕ ವಂದನಾರ್ಪಣೆ ಸಲ್ಲಿಸಿದರು.  


Share: