ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಐ.ಟಿ.ಐ ವಿದ್ಯಾರ್ಥಿಗಳಲ್ಲಿ ಬಲವಾದ ನಂಬಿಕೆ ಮುಖ್ಯ: ವಿಶ್ವನಾಥ ಭಟ್

ಐ.ಟಿ.ಐ ವಿದ್ಯಾರ್ಥಿಗಳಲ್ಲಿ ಬಲವಾದ ನಂಬಿಕೆ ಮುಖ್ಯ: ವಿಶ್ವನಾಥ ಭಟ್

Wed, 11 Jan 2023 03:51:19  Office Staff   SO News

ಉಡುಪಿ : ವಿದ್ಯಾರ್ಥಿಗಳು ಕೈಗಾರಿಕಾ ಚಟುವಟಿಕೆಗೆ ಸಂಬಂಧಿಸಿದಂತೆ ಶಿಕ್ಷಣವನ್ನು ಪಡೆದ ನಂತರ ಪ್ರಾಯೋಗಿಕವಾಗಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಅನುಕೂಲವಾಗುವ ದೆಸೆಯಿಂದ ಶಿಶಿಕ್ಷು ಮೇಳವನ್ನು ಆಯೋಜಿಸಲಾಗುತ್ತದೆ. ಇದು ಹೆಚ್ಚು ಉಪಯುಕ್ತವಾದುದು ಎಂದು ಐ.ಎಂ.ಸಿ ಮತ್ತು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಭಟ್ ಹೇಳಿದರು. 

  ಅವರು  ನಗರದ ಸೈಂಟ್ ಮೇರೀಸ್ ಕೈಗಾರಿಕಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಮಂತ್ರಾಲಯ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಉಡುಪಿ ಜಿಲ್ಲೆ ಹಾಗೂ ಸರಕಾರಿ ಅನುದಾನಿತ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾದ ಶಿಶಿಕ್ಷು ಮೇಳವನ್ನು ಉದ್ಘಾಟಿಸಿ ಮಾತನಾಡಿದರು. 

  ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಬದ್ಧತೆಯನ್ನು ಇಟ್ಟುಕೊಳ್ಳುವುದರೊಂದಿಗೆ ಉತ್ತಮ ಶಿಕ್ಷಣವನ್ನು ಪಡೆದಾಗ ಮಾತ್ರ ಸ್ವಯಂ ಉದ್ಯೋಗ ಕೈಗೊಂಡು ಕೈಗಾರಿಕೋದ್ಯಮಿಯಾಗಲು ಸಹಕಾರಿಯಾಗುತ್ತದೆ ಎಂದರು.

 ಉಡುಪಿ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಅಧ್ಯಕ್ಷ ಅಂಡಾರು ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ನಮ್ಮ ದೇಶದ ಪ್ರಧಾನಿ ಯವರು ಆತ್ಮನಿರ್ಭರ್ ಭಾರತ್ ಯೋಜನೆಯಡಿ ಕೈಗಾರಿಕೆಗಳನ್ನು ಸ್ಥಾಪಿಸಲು ಹೆಚ್ಚು ಹೆಚ್ಚು ಉತ್ತೇಜನ ನೀಡುತ್ತಿದ್ದಾರೆ. ತಾವು ಇರುವ ಸ್ಥಳಗಳಲ್ಲಿಯೇ ಸಣ್ಣ-ಪುಟ್ಟ ಕೈಗಾರಿಕೆಗಳನ್ನು ಪ್ರಾರಂಭಿಸುವುದರೊಂದಿಗೆ ಉದ್ಯೋಗ ಸೃಷ್ಠಿಸಬಹುದು ಎಂದರು.

  ಸೈಂಟ್ ಮೇರೀಸ್ ಸಂಸ್ಥೆಯ ಸಂಚಾಲಕ ರೆ.ಫಾ ಚಾರ್ಲ್ಸ್ ಮೆನೆಜೇಸ್, ಉಡುಪಿ ಡಿ.ಐ.ಸಿ ಜಂಟಿ ನಿರ್ದೇಶಕ ನಾಗರಾಜ ನಾಯ್ಕ್, ಸೈಂಟ್ ಮೇರೀಸ್ ತರಬೇತಿ ಸಂಸ್ಥೆಯ ಪ್ರಾಂಶುಪಾಲ ವಿಜಯ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Share: