ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಎಫ್‌ಐಆರ್‌ಗಳ ಏಕೀಕರಣ: ನೂಪುರ್ ಮನವಿಗೆ ರಾಜ್ಯಗಳ ಅಭಿಪ್ರಾಯ ಕೇಳಿದ ಸುಪ್ರೀಂಕೋರ್ಟ್

ಎಫ್‌ಐಆರ್‌ಗಳ ಏಕೀಕರಣ: ನೂಪುರ್ ಮನವಿಗೆ ರಾಜ್ಯಗಳ ಅಭಿಪ್ರಾಯ ಕೇಳಿದ ಸುಪ್ರೀಂಕೋರ್ಟ್

Wed, 20 Jul 2022 16:13:43  Office Staff   Vb

ಹೊಸದಿಲ್ಲಿ: ಪ್ರವಾದಿ ಮುಹಮ್ಮದ್ ಕುರಿತು ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಬಿಜೆಪಿಯ ಅಮಾನತುಗೊಂಡ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ದಾಖಲಾಗಿರುವ 9 ಪ್ರಕರಣಗಳಿಗೆ ಸಂಬಂಧಿಸಿ ಆಕೆಯನ್ನು ಬಂಧಿಸಲಾಗದೆಂದು ಸುಪ್ರೀಂಕೋರ್ಟ್ ಮಂಗಳವಾರ ತಿಳಿಸಿದೆ. ತನ್ನ ವಿರುದ್ಧ ದಾಖಲಾಗಿರುವ ಹಲವಾರು ಎಫ್‌ಐಆರ್‌ಗಳನ್ನು, ಒಂದೇ ಆಗಿ ಸಂಯೋಜಿಸಬೇಕೆಂದು ಕೋರಿ ನೂಪುರ್ ಶರ್ಮಾ ಸಲ್ಲಿಸಿರುವ ಮನವಿಯ ಬಗ್ಗೆ ಪ್ರತಿಕ್ರಿಯಿಸುವಂತೆ ಸುಪ್ರೀಂಕೋರ್ಟ್ ವಿವಿಧ ರಾಜ್ಯಗಳಿಗೆ ಸೂಚಿಸಿದೆ.

ನೂಪುರ್ ಶರ್ಮಾ ಅವರ ಮನವಿಯನ್ನು ನ್ಯಾಯಾಲಯವು ಆಗಸ್ಟ್ 10ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಅಲ್ಲಿಯ ವರೆಗೆ ಆಕೆಯ ವಿರುದ್ಧ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸಬಾರದೆಂದು ಅದು ಸೂಚಿಸಿದೆ.

“ಜುಲೈ 1ರಂದು ನಾವು ಇತರ ಕಾನೂನು ಪರಿಹಾರಗಳನ್ನು ಕೋರಲು ಅರ್ಜಿದಾರೆಗೆ ಅವಕಾಶ ನೀಡಿದ್ದೇವೆ.ಆದರೆ ತನಗೆ ಕಾನೂನು ಪರಿಹಾರಗಳನ್ನು ಪಡೆಯಲು ಅಸಾಧ್ಯವಾಗಿ ದೆಯೆಂದು ಆಕೆ ಬೆಟ್ಟು ಮಾಡಿ ತೋರಿಸಿದ್ದಾರೆ. ಆಕೆಯ ಪ್ರಾಣ ಹಾಗೂ ಸ್ವಾತಂತ್ರ್ಯವನ್ನು ರಕ್ಷಿಸುವುದು ಈಗಿನ ತುರ್ತು ಆಗತ್ಯವಾಗಿದೆ' ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ತಿಳಿಸಿದರು.

ನೂಪುರ್ ಶರ್ಮಾ ವಿರುದ್ದ ದಿಲ್ಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರಪ್ರದೇಶ ಜಮ್ಮು-ಕಾಶ್ಮೀರ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಎಫ್‌ಐಆರ್ ದಾಖಲಾಗಿದ್ದವು. 

ಸುಪ್ರೀಂಕೋರ್ಟ್ ನ್ಯಾಯಪೀಠವು ಜುಲೈ 1ರಂದು ತನ್ನ ವಿರುದ್ಧ ಕಟುವಾದ ಟೀಕಾಪ್ರಹಾರವನ್ನು ಮಾಡಿದ ಬಳಿಕ, ತನಗೆ ಜೀವಬೆದರಿಕೆ ಇನ್ನಷ್ಟು ಹೆಚ್ಚಾಗಿದೆಯೆಂದು ಆಕೆಯ ಪರ ನ್ಯಾಯವಾದಿ ನ್ಯಾಯಾಲಯಕ್ಕೆ ತಿಳಿಸಿದರು.

“ನೂಪುರ್ ಶರ್ಮಾ ಅವರಿಗೆ ಜೀವಬೆದರಿಕೆ ಹೆಚ್ಚಿದೆ. ಯಾವುದೇ ಪ್ರಮಾಣದ ಭದ್ರತೆಯು ಆಕೆಗೆ ನೆರವಾಗದು. ಆಕೆಗೆ ಈಗ ನೈಜ ಹಾಗೂ ಸ್ಪಷ್ಟವಾದ ಬೆದರಿಕೆ ಎದುರಾಗಿದೆ ಎಂದು ಅವರ ವಕೀಲರಾದ ಮಣೀಂದ‌ ಸಿಂಗ್ ಹೇಳಿದ್ದಾರೆ. ನೂಪುರ್ ಶರ್ಮಾ ವಿರುದ್ಧ ಪ.ಬಂಗಾಳ ಹಾಗೂ ಅದರ ರಾಜಧಾನಿ ಕೋಲ್ಕತಾದಲ್ಲಿ ಹಲವಾರು ಎಫ್ ಐಆರ್‌ಗಳನ್ನು ದಾಖಲಿಸಲಾಗಿದೆ. ಕೋಲ್ಕತಾ ಪೊಲೀಸರು ಆಕೆಗಾಗಿ ಲುಕ್‌ ಔಟ್ ನೋಟಿಸ್ ಹೊರಡಿಸಿದ್ದು, ಇದರಿಂದ ಆಕೆಯನ್ನು ತಕ್ಷಣವೇ ಬಂಧಿಸಬಹುದಾಗಿದೆ ಹಾಗೂ ತನ್ನ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ವಿವಿಧ ಹೈಕೋರ್ಟ್‌ಗಳಿಗೆ ಮೊರೆಹೋಗುವ ಅವಕಾಶವೂ ಆಕೆಗೆ ತಪ್ಪಿಹೋಗಲಿದೆ'' ಎಂದವರು ನ್ಯಾಯಾಲಯಕ್ಕೆ ತಿಳಿಸಿದರು.

ಪ್ರವಾದಿ ಮುಹಮ್ಮದ್ ವಿರುದ್ಧ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ದೇಶದ ಕ್ಷಮೆಯಾಚಿಸುವಂತೆ ಸುಪ್ರೀಂಕೋಟ್ ೯ನ ನ್ಯಾಯಪೀಠವು ಜುಲೈ 1ರಂದು ನೀಡಿದ ವಿಚಾರಣೆಯ ವೇಳೆ ತಿಳಿಸಿತ್ತು. ಆಕೆಯ ವಿವಾದಾತ್ಮಕ ಹೇಳಿಕೆಗಳಿಂದಾಗಿ ದೇಶವು ಹೊತ್ತಿ ಉರಿಯುವಂತಾಗಿದೆ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ಪರ್ದಿವಾಲಾ ನೇತೃತ್ವದ ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿತ್ತು.


Share: