ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉತ್ತರ ಪ್ರದೇಶ: ಗ್ಯಾಂಗ್ ರೇಪ್, ಬೆಂಕಿ ಹಚ್ಚಿದ್ದ 16 ವರ್ಷದ ದಲಿತ ಬಾಲಕಿ 12 ದಿನಗಳ ನಂತರ ಸಾವು

ಉತ್ತರ ಪ್ರದೇಶ: ಗ್ಯಾಂಗ್ ರೇಪ್, ಬೆಂಕಿ ಹಚ್ಚಿದ್ದ 16 ವರ್ಷದ ದಲಿತ ಬಾಲಕಿ 12 ದಿನಗಳ ನಂತರ ಸಾವು

Tue, 20 Sep 2022 06:23:31  Office Staff   The New Indian Express

ಲಖನೌ: ಉತ್ತರ ಪ್ರದೇಶದ ಪಿಲಿಭಿತ್ ನಲ್ಲಿ ಸೆಪ್ಟೆಂಬರ್ ಏಳರಂದು ಇಬ್ಬರು ದುಷ್ಕರ್ಮಿಗಳು ಗ್ಯಾಂಗ್ ರೇಪ್ ನಡೆಸಿ, ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ್ದರಿಂದ ಗಾಯಗೊಂಡಿದ್ದ ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿ ಇಂದು ಸಾವನ್ನಪ್ಪಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. 

ಈ ತಿಂಗಳ ಆರಂಭದಲ್ಲಿ ಜಿಲ್ಲೆಯ ಕುನ್ವಾರಪುರ ಗ್ರಾಮದಲ್ಲಿ 16 ವರ್ಷದ ಹದಿಹರೆಯದ ಬಾಲಕಿ ಮೇಲೆ ಇಬ್ಬರು ಕಿರಾತಕರು ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದರು. ಲಖನೌ ಆಸ್ಪತ್ರೆಯೊಂದರಲ್ಲಿ 12 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಬಾಲಕಿ ಮೃತಪಟ್ಟಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ. 
ಆರೋಪಿಗಳಾದ ರಾಜ್ ವೀರ್ (19) ತಾರಾಚಂದ್ (25) ನನ್ನು ಪೋಕ್ಸೋ ಮತ್ತು ಎಸ್ ಸಿ, ಎಸ್ ಟಿ ಕಾಯ್ದೆಯಡಿ ಬಂಧಿಸಿರುವ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.  ಮರಣೋತ್ತರ ಪರೀಕ್ಷೆ ನಂತರ ಬಾಲಕಿಯ ಮೃತದೇಹವನ್ನು ಆಕೆಯ ಕುಟುಂಬಸ್ಥರಿಗೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಬಾದೌನಿನ ರೈಲ್ವೆ ಹಳಿ ಬಳಿ ಶನಿವಾರ 15 ವರ್ಷದ ದಲಿತ ಬಾಲಕಿಯೊಬ್ಬಳ ಮೃತದೇಹವೊಂದು ಪತ್ತೆಯಾಗಿತ್ತು. ಕಳೆದ ವಾರ ಲಖೀಂಪುರ ಕೇರಿಯ ಕಬ್ಬಿನ ಗದ್ದೆಯೊಂದರಲ್ಲಿ ಮರಕ್ಕೆ ಇಬ್ಬರು ದಲಿತ ಸಹೋದರಿಯರನ್ನು ನೇಣು ಹಾಕಲಾಗಿತ್ತು. ಅವರ ಮೇಲೂ ರೇಪ್ ಆಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿತ್ತು.


Share: